Tuesday, September 4, 2018

*🌻🌻ದಿನಕ್ಕೊಂದು ಕಥೆ🌻🌻*

ರವೀಂದ್ರನಾಥ್ ಠಾಕೂರ್ ಅವರನ್ನು ಋಷಿ ಅಂಥ ಕರೆದಿದ್ದೇವೆ. ಆತ ಮಹಾನ್ ವಿದ್ವಾಂಸ. ಒಮ್ಮೆ ಶಾಂತಿನಿಕೇತನದಲ್ಲಿ ಕುಳಿತಿರುತ್ತಾರೆ. ಶಾಂತಿನಿಕೇತನ ಹೆಸರು ಎಷ್ಟು ಚೆಂದವಾಗಿದೆ. ಶಾಂತಿನಿಕೇತನದಲ್ಲಿ ಗಿಡಗಳು ಹಸಿರಿನಿಂದ ತುಂಬಿವೆ. ನೀರಿನ ಸಣ್ಣಸಣ್ಣ ಝರಿಗಳಿವೆ. ಏನು ಸುಂದರ ವಾತಾವರಣ! ಆಕಾಶದಲ್ಲಿ ಹಕ್ಕಿಗಳು ದೂರಕ್ಕೆ ಹಾರಿ ಹಾರಿ ಮತ್ತೆ ಮರಗಳಿಗೆ ಬಂದು ಕೂರುವ ಸಮಯ. ಸೂರ್ಯ ಕೆಳಗಿಳಿಯುತ್ತಿದ್ದಾನೆ. ಮೇಘಗಳಿವೆ. ಸೂರ್ಯನ ಹೊನ್ನಿನ ಕಿರಣಗಳು ಬೆಳಗಿವೆ, ಹಕ್ಕಿಗಳ ಸುಂದರ ಧ್ವನಿ ಇದೆ. ಏನು ಸುಂದರ ವಾತಾವರಣ. ಅದನ್ನು ಹಣ ಕೊಟ್ಟು ಪಡೆಯೋಕೆ ಆಗುವುದಿಲ್ಲ, ಹೃದಯ ಕೊಟ್ಟು ಪಡೆಯಬೇಕು.

ರವೀಂದ್ರನಾಥ್ ಠಾಕೂರ್ ಕುಳಿತಿರುವ ಆ ಸಮಯದಲ್ಲಿ ಅಲ್ಲಿಗೆ ಅವರ ಗೆಳೆಯ ಬರುತ್ತಾನೆ. "ರವೀಂದ್ರರೇ,ನೀವು ಶ್ರೇಷ್ಠ ಜ್ಞಾನಿಗಳು, ಕವಿಗಳು, ಎಂಥ ಸಾಧನೆ ಮಾಡಿದ್ದೀರಿ! ಆದರೆ ನಿಮ್ಮನ್ನು ಜನ ಎಷ್ಟು ಟೀಕೆ ಮಾಡುತ್ತಿದ್ದಾರೆ. ಪತ್ರಿಕೆಗಳಲೆಲ್ಲ ಅವಹೇಳನ ಮಾಡುತ್ತಿದ್ದಾರೆ. ನೀವು ನೋಡಿದಿರೇನು?"

ರವೀಂದ್ರನಾಥ ಠಾಕೂರ್ ಹೇಳಿದರು: "ನೋಡಲಿಕ್ಕೆ ವೇಳೆ ಇಲ್ಲ".

ನಮ್ಮಂಥವರಾದರೆ ಓದಿ ಮರು ಟೀಕೆಗೆ ತೊಡಗುತ್ತಿದ್ದೆವು. ಆದರೆ ಇವರಿಗೆ ಅವುಗಳನ್ನು ಓದುವುದಕ್ಕೂ ವೇಳೆ ಇಲ್ಲ. ನಿಸರ್ಗ ಅಷ್ಟು ಶ್ರೀಮಂತವಾಗಿದೆ.
Hundred years are not sufficient for enjoying the beauty.
ರವೀಂದ್ರರಿಗೆ ಏಕೆ ಋಷಿ ಅಂಥ ಕರೆದೆವು? ಅವರು ಪುಸ್ತಕ ಬರೆದಿದ್ದಾರೆ ಅಂಥ ಅಲ್ಲ. ಅವರಲ್ಲಿ ಅಂಥ ಶಾಂತ ವ್ಯಕ್ತಿತ್ವ ಇತ್ತು. ಇಂಥವರನ್ನು ನೆನೆಯುವುದು ನಮ್ಮಂಥವರಿಗೆ ಪರಮ ಸುಖ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.          ಸಂಗ್ರಹ: ವೀರೇಶ್ ಅರಸಿಕೆರೆ. ****************************************** 🌻🌻 *ದಿನಕ್ಕೊಂದು ಕಥೆ*🌻🌻

💐 *ಕತ್ತೆಯ ಉಪಾಯ*💐

ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ. ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆ ಮೇಲೆ ಕುಳಿತು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ. ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ "ಎಂಥಾ ಜನ್ಮವಪ್ಪಾ ನಿಂದೂ? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಸಾಗೋದೇ ನಿನ್ನ ಹಣೆ ಬರಹವಾಯ್ತು ಅಲ್ವಾ! ಇಂತಹ ದುರ್ಗತಿ ಯಾರಿಗೂ ಬೇಡಪ್ಪಾ. ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ." ಎಂದು ಪರಿಹಾಸ್ಯ ಮಾಡಿ ನಕ್ಕಿತು.

ಈ ಮಾತು ಕೇಳಿ ಕತ್ತೆಗೆ ತುಂಬಾ ಅವಮಾನವಾಯಿತು. ಸೊಕ್ಕಿನ ಕುದುರೆಗೆ ಬುದ್ಧಿ ಕಲಿಸುವ ಹುನ್ನಾರ ಮಾಡಿತು. ಕೆಲ ಹೊತ್ತಿನ ನಂತರ ವ್ಯಾಪಾರಿ ಪ್ರಯಾಣ ಮುಂದುವರಿಸಲು ಸರಕನ್ನು ಕತ್ತೆಯ ಮೇಲೆ ಏರಿಸಿದಾಗ ಕತ್ತೆ ಅದನ್ನು ಬೀಳಿಸಿ ತಾನೂ ನೆಲಕ್ಕೆ ಬಿದ್ದು ಒದ್ದಾಡತೊಡಗಿತು. ಇದರಿಂದ ವ್ಯಾಪಾರಿ ತುಂಬಾ ದಿಗಿಲಾಯಿತು. "ಅಯ್ಯೋ ಪಾಪ! ಕತ್ತೆಯ ಆರೋಗ್ಯ ಸರಿಯಿಲ್ಲವೆಂದು ತೋರುತ್ತದೆ" ಎಂದುಕೊಂಡು ಆ ಭಾರವಾದ ಬಟ್ಟೆ ಮೂಟೆಗಳನ್ನು ಕುದುರೆ ಮೇಲೆ ಹೊರಿಸಿ ಪ್ರಯಾಣ ಮುಂದುವರಿಸಿದ. ಕತ್ತೆಯನ್ನು ನಿಂದಿಸಿದ ತಪ್ಪಿಗೆ ಕುದುರೆಗೆ ತಕ್ಕ  ಶಿಕ್ಷೆಯಾಯಿತು.


ನೀತಿ
ನಾವು ಇನ್ನೊಬ್ಬರನ್ನು ಅವಮಾನಗೊಳಿಸಿದಾಗ, ಆ ಅವಮಾನದ ಜೊತೆಗೆ ಶಿಕ್ಷೆಯನ್ನು ಸಹ ನಾವು ಒಂದು ದಿನ  ಅನುಭವಿಸಬೇಕಾಗಿರುತ್ತದೆ.


No comments:

Post a Comment