Wednesday, November 14, 2018

Independence speech



ನಿಸರ್ಗದ ಪುಟ್ಟ ಕೌತುಕ ‘ಕಿರು ಮಿಂಚುಳ್ಳಿ’ಯ ಮಣ್ಣಿನ ಮನೆ ನೋಡಿದ್ದೀರಾ?

ನಿಮ್ಮ ಊರಿನ ಕೆರೆ, ಕಟ್ಟ, ಹೊಂಡಗಳು, ತಲಪೂರಿಕೆ ಹಾಗೂ ಮೀನುಗಳನ್ನು ಸಾಕಿಕೊಂಡಿರುವ ಮಾನವ ನಿರ್ಮಿತ ಕೃಷಿ ಹೊಂಡಗಳ ಬದುವುಗಳಲ್ಲಿ, ನೀರಿನಿಂದ ತುಸು ಮೇಲೆ ನೆಲದಿಂದ ಅತಿ ಕಡಿಮೆ ಎತ್ತರದಲ್ಲಿ ಮಣ್ಣನ್ನು ಕೊರೆದು ಪಕ್ಷಿಯೊಂದು ಮನೆ ಕಟ್ಟಿಕೊಂಡಿದ್ದು ಗಮನಿಸಿದ್ದೀರಾ? ನಮ್ಮ ಊರು ಧಾರವಾಡದ ಹೊರವಲಯದಲ್ಲಿ ಕೆಲ ದಶಕಗಳ ಹಿಂದೆ ಗಣಿಗಾರಿಕೆ ನಡೆಸಲಾಗುತ್ತಿತ್ತು. ಹಾಗೆ ಗಣಿಗಾರಿಕೆ ನಡೆಸಿ, ನಿರ್ಮಿತವಾದ ಹೊಂಡಗಳಲ್ಲಿ ಇತ್ತೀಚಿನ ಮಳೆಯಿಂದಾಗಿ ಚಿಕ್ಕ ಕೆರೆಗಳು ನಿರ್ಮಾಣಗೊಂಡಿವೆ. ಇಲ್ಲಿ ದನಗಾಹಿಗಳು ನಿತ್ಯ ತಮ್ಮ ಜಾನುವಾರುಗಳ ಮೈ ತೊಳೆಯಲು ಆಗಮಿಸುವುದರಿಂದ ಈ ಪಕ್ಷಿ ಗಣಿಯ ಇಕ್ಕೆಲಗಳ ಗೋಡೆಯಂತಹ ಮಣ್ಣಿನಲ್ಲಿ ಅತ್ಯಂತ ಎತ್ತರದಲ್ಲಿ ತನ್ನ ಗೂಡು ಮಾಡಿಕೊಂಡಿದ್ದನ್ನು ನಾನು ಗಮನಿಸಿದ್ದೇನೆ.
ಕೆಲವೊಮ್ಮೆ ವಿದ್ಯುತ್ ತಂತಿಯ ಮೇಲೂ ಬೇಟೆಗಾಗಿ ಕಾಯ್ದು ಕುಳಿತು ಈ ಹಕ್ಕಿ ಗಮನ ಸೆಳೆಯುತ್ತದೆ. ಅತ್ಯಂತ ಚುರುಕಾದ, ಮಿರಿ ಮಿರಿ ಮಿಂಚುವ ನೀಲಿ ಮೈಬಣ್ಣ ಹೊಂದಿದ ಗುಬ್ಬಚ್ಚಿ ಗಾತ್ರದ ಈ ಹಕ್ಕಿಗೆ ‘ಕಿರು ಮಿಂಚುಳ್ಳಿ’- ‘Small Blue Kingfisher’ ಎಂದು ಕರೆಯುತ್ತಾರೆ. ಮೊನ್ನೆ ಛಾಯಾಪತ್ರಕರ್ತ-ಮಿತ್ರ ಜೆ.ಜಿ.ರಾಜ್ ಅವರೊಂದಿಗೆ ಧಾರವಾಡದಿಂದ ಮುಕುಟಖಾನ್ ಹುಬ್ಬಳ್ಳಿ (ಎಂ.ಕೆ. ಹುಬ್ಬಳ್ಳಿ ಸಕ್ಕರೆ ನಾಡು ಕೂಡ ಹೌದು.) ವರೆಗೆ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಕೆರೆಗಳ ಸ್ಥಿತಿ-ಗತಿ, ಬದುಕು-ಬವಣೆ ಗುರುತಿಸಲು ತೆರಳಿದ್ದೆವು. ಆಗ ಈ ಅಪರೂಪದ ಮಿತ್ರ ಮೀನು ಬೇಟೆಗಾರನಾಗಿ ನಮ್ಮ ಕಣ್ಣಿಗೆ ಕಂಡ. ಐತಿಹಾಸಿಕ ಮಹತ್ವದ ಕಿತ್ತೂರು ಸಮೀಪದ ‘ಕೆಂಪಗೇರಿ ಕಟ್ಟೆ’ ಕೆರೆಯಲ್ಲಿ ಈ ‘ಕಿರು ಮಿಂಚುಳ್ಳಿ’ ಕಿತ್ತೂರಿನ ಮೀನುಗಾರ ಶಿವಪ್ಪ ಅವರೊಂದಿಗೆ ಮೀನು ಬೇಟೆಯಲ್ಲಿ ತೊಡಗಿದ್ದ.
ಬಿಳಿ ಮಿಂಚುಳ್ಳಿ (ಪೈಡ್ ಕಿಂಗಫಿಷರ್), ಗದ್ದೆ ಮಿಂಚುಳ್ಳಿ (ವೈಟ್ ಬ್ರೆಸ್ಟೆಡ್ ಕಿಂಗಫಿಷರ್), ಹೆಮ್ಮಿಂಚುಳ್ಳಿ (ಸ್ಟ್ರೋಕ್ ಬಿಲ್ಡ್ ಕಿಂಗಫಿಷರ್) ಇವುಗಳಲ್ಲಿ ನಾವು ಕೆಂಪಗೇರಿ ಕಟ್ಟೆಯಲ್ಲಿ ಕಂಡ ಕಿರು ಮಿಂಚುಳ್ಳಿ (ಸ್ಮಾಲ್ ಬ್ಲೂ ಕಿಂಗಫಿಷರ್) ಅತ್ಯಂತ ಉಜ್ವಲ ವರ್ಣದ ಆಕರ್ಷಕ ಹಕ್ಕಿ. ಕುತ್ತಿಗೆ ಮತ್ತು ಹೊಟ್ಟೆಗೆ ಹೊಂಬಣ್ಣದ ಚೆಲುವು. ಬಲವಾದ ನೀಲಿ ಮಿಶ್ರಿತ ಕಪ್ಪು ಬಣ್ಣದ ಉದ್ದ ಕೊಕ್ಕು, ಚೋಟುದ್ದ ಕಾಲುಗಳು ಮಿಂಚುಳ್ಳಿಯ ದುಂಡನೆಯ ಆಕೃತಿಗೆ ಮೆರಗು ತೊಡಿಸಿವೆ.ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಭರ್ಮಾಗಳಲ್ಲಿ ಕಾಣಸಿಗುವ ಕಿರು ಮಿಂಚುಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಪಕ್ಷಿಗಳಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸಗಳಿಲ್ಲ. ಮಾರ್ಚ್ ನಿಂದ ಜೂನ್ ತಿಂಗಳುಗಳಲ್ಲಿ ಹೊಳೆ-ಹಳ್ಳಗಳ ಕಡಿದಾದ ದಂಡೆಗಳಲ್ಲಿ ನೆಲಕ್ಕೆ ಸಮಾನಾಂತರವಾಗಿ ಪೊಟರೆ ಕೊರೆದು ಗೂಡು ಕಟ್ಟುತ್ತವೆ. ಸುಮಾರು ೫೦ ಸೆಂ.ಮೀ. ಉದ್ದದ ಈ ಮಣ್ಣಿನ ಪೊಟರೆಯಲ್ಲಿ ೫ ರಿಂದ ೭ ಮೊಟ್ಟೆಗಳನ್ನು ಹೆಣ್ಣು ಮಿಂಚುಳ್ಳಿ ಹಾಕುತ್ತದೆ. ಮೊಟ್ಟೆಗಳು ಶುಭ್ರ ಬಣ್ಣದ, ಮಿರಿ ಮಿರಿ ಮಿಂಚುವ ಗೋಲಿಯಂತೆ ದುಂಡಗಿರುತ್ತವೆ.

ಮೊಟ್ಟೆ ಇರುವ ಗೂಡಿನ ಜಾಗ ಮಾತ್ರ ಅಗಲವಾಗಿದ್ದು, ತಾಯಿ-ತಂದೆ ಹಕ್ಕಿ ಜೋಡಿಯಾಗಿ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲು ಅನುವಾಗುವಂತೆ ಇರುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ ಜೋಡಿಯಾಗಿ ಕಾಣುವ ಕಿರು ಮಿಂಚುಳ್ಳಿ, ಬಹುತೇಕ ಒಂಟಿಯಾಗಿಯೇ ಇರಲು, ಬೇಟೆಯಾಡಲು ಬಯಸುತ್ತದೆ.ಮಿತ್ರ ರಾಜ್, ಕಲ್ಲು ಬಂಡೆಯ ಮೇಲೆ ನಿಶ್ಚಲವಾಗಿ ಕುಳಿತಿದ್ದ ಮಿಂಚುಳ್ಳಿ ಮಹಾಶಯನನ್ನು ದೂರದಿಂದಲೇ ಗುರುತಿಸಿದರು. ದೂರದಿಂದ ಕೆಲ ಫೋಟೊ ಕ್ಲಿಕ್ಕಿಸಿದ ಮೇಲೆ ಮತ್ತೂ ಹತ್ತು ಹೆಜ್ಜೆಯಷ್ಟು ಹತ್ತಿರ ನಮ್ಮ ರಾಜ್ ಹೋದರೂ ಕಿಂಚಿತ್ತೂ ಹೆದರದೇ ಕ್ಯಾಮೆರಾಕ್ಕೆ ಮಿಂಚುಳ್ಳಿ ಪೋಜು ನೀಡಿದ ರೀತಿ ನನ್ನಲ್ಲಿ ಬೆರಗು ಹುಟ್ಟಿಸಿತು. ದೂರದಿಂದಲೇ ನಾನು ‘ಲೆನ್ಸ್ ಬಳಸಿ ಸ್ವಾಮಿ..ಅಷ್ಟು ಸಮೀಪ ಹೋಗಬಾಡ್ರೀ..ಹಾರಿ ಹೋದ್ರ ಮುಗೀತು ಕಥೆ’ಎಂದು ಎಚ್ಚರಿಸುತ್ತಿದ್ದೆ.
ಮಿತ್ರ ಜೆ.ಜಿ.ರಾಜ್ ನನ್ನ ಮಾತಿಗೆ ಕಿವಿ ಗೊಡದೇ ‘ನಾ ಅವಗ ಪಬ್ಲಿಸಿಟಿ ಕೊಡಸಾಕ ಹೊಂಟೇನಿ ಅಂತ ಗೊತ್ತೈತಿ’ ಅನ್ನುವ ಹಾಗೆ ಮುಂಗೈ ಜೋರಿನಿಂದ ಮೈಮೇಲೇರಿ ಹೋಗಿ ಫೊಟೋ ಕ್ಲಿಕ್ಕಿಸಿದರು. ಆತ ತಪಸ್ಸಿಗೆ ಕುಳಿತಂತೆ ಯಾವುದೋ ಅಮೂರ್ತದಲ್ಲಿ ದೃಷ್ಟಿ ನೆಟ್ಟುಕೊಂಡು, ಸಂಸಾರ ತಾಪತ್ರಯಕ್ಕೆ ಪರಿಹಾರ ಹುಡುಕುತ್ತ ಮೈ ಮರೆತಂತೆ ನನಗೆ ಭಾಸವಾಯಿತು! ಆದರೆ ಕುಳಿತಲ್ಲೇ ಪದೇ ಪದೇ ತನ್ನ ಕುತ್ತಿಗೆಯನ್ನು ಮತ್ತು ಬಾಲವನ್ನು ಮೇಲೆ-ಕೆಳಕ್ಕೆ ನಿಕ್ಕುಳಿಸುವುದು ಅವನ ಹವ್ಯಾಸವಾಗಿ ನನಗೆ ಕಂಡಿತು. ಈ ಮಧ್ಯೆ ಆಗಾಗ ನೆಲದ ಮೇಲೆ ಹಾಗೂ ನೀರಿನ ಮೇಲೂ ಅತ್ಯಂತ ಕೆಳ ಮಟ್ಟದಲ್ಲಿ ಹಾರಿ ತನ್ನ ಬೇಟೆಯ ಕೌಶಲ್ಯಗಳನ್ನು ಪ್ರದರ್ಶಿಸಿ ಬೆರಗು ಹುಟ್ಟಿಸಿದ. ಯುದ್ಧ ವಿಮಾನದ ಥಳಕು-ಬಳುಕು, ವಯ್ಯಾರ, ಚಾಕಚಕ್ಯತೆ ಅವನಲ್ಲಿ ಮನೆ ಮಾಡಿತ್ತು.
ನಾನು ಎಣಿಸುತ್ತಿದ್ದಂತೆ ಏಕಾಏಕಿ ಹಾರಿಯೇ ಬಿಟ್ಟ! ಹಾರಿದ ದಿಕ್ಕಿನಲ್ಲಿಯೇ ಸ್ಪೀಡಾಗಿ ‘ಟೇಕ್ ಆಫ್’ಆಗಿ, ರಾಕೆಟ್ ನಂತೆ ನೀರಿನಲ್ಲಿ ಡೈವ್ ಹೊಡೆದ. ತತ್ ಪರಿಣಾಮವಾಗಿ ನೀರಿನಲ್ಲಿ ಅಲೆಯ ಉಂಗುರುಗಳೆದ್ದ ದೂರ ದೂರಕೆ ತೇಲಿದವು. ಕ್ಷಣ ಮಾತ್ರದಲ್ಲಿ ನೀರಿನಿಂದ ನಭಕ್ಕೆ ಚಿಮ್ಮಿ ಅತ್ಯಂತ ಎತ್ತರದಲ್ಲಿ ಹೆಲಿಕಾಪ್ಟರ್ ನಂತೆ ಜೋರಾಗಿ ರೆಕ್ಕೆ ಬಡಿಯುತ್ತ ನಿಶ್ಚಲವಾಗಿ ನಿಂತ. ಹೀಗೆ ರಭಸವಾಗಿ ರೆಕ್ಕೆ ಬಡಿಯುವುದರಿಂದ ಗರಿಗಳಿಗೆ ಸಿಲುಕಿದ್ದ ನೀರ ಹನಿಗಳನ್ನು ಜಾರಿಸಿಕೊಂಡಂತಾಯಿತು; ರೆಕ್ಕೆಗಳನ್ನೂ ಒಣಗಿಸಿಕೊಂಡಂತಾಯಿತು! ಎಂದು ನಾನು ಎಣಿಸಿದ್ದೆ. ಆದರೆ ನನ್ನ ಲೆಕ್ಕ ತಪ್ಪಿ ಅದೇ ಸ್ಪೀಡಿನಲ್ಲಿ ತಲೆ ಕೆಳಗೆ ಮಾಡಿ `Nose Dive' ಹೊಡೆದ! ಈ ಬಾರಿ ಆತನ ಪ್ರಯತ್ನ ಹುಸಿ ಹೋಗಲಿಲ್ಲ. ಮೋರಂಗಿ ಮೀನು ಆತನ ಕೊಕ್ಕಿನಲ್ಲಿ ಬಂಧಿಯಾಗಿತ್ತು. ‘ರೊಂಯ್..’ಎಂದು ಒಂದೇ ನೆಗೆತಕ್ಕೆ ನಮ್ಮ ರಾಜ್ ಸಾಹೇಬರ ಪಕ್ಕದ ಕಲ್ಲಿನ ಮೇಲೆ ಬಂದು ಕುಳಿತು, ಕೊಕ್ಕಿನಲ್ಲಿ ಬಂಧಿಯಾದ ಮೀನು ಭುಜಿಸಲು ಶುರು ಮಾಡಿದ.
ಹಾಗೆ ಮಾಡುವ ಮೊದಲು ತಾನು ಕುಳಿತ ಕಲ್ಲು ಬಂಡೆಗೆ ಮೋರಂಗಿಯನ್ನು ಕುಕ್ಕಿ ಕುಕ್ಕಿ ನಿರ್ಜೀವವಾಗಿಸಿದ. ಆಗ ನೋಡಿ..ರಾಜ್ ಸಾಹೇಬರ ಫೊಟೋಗ್ರಫಿಗೆ ಕಳೆ ಬಂದಿದ್ದು! ಇವರು ಕೋನ ಬದಲಿಸಿದಂತೆ ಆತನೂ ಗೋಣು ಓರೆಯಾಗಿಸಿ ಪೋಜು ನೀಡಿ ಮೋರಂಗಿ ಮೀನನ್ನು ನುಂಗಿಬಿಟ್ಟ! ಮಧ್ಯದಲ್ಲಿ ತನ್ನ ಖುಷಿ ವ್ಯಕ್ತಪಡಿಸಲು ರೆಕ್ಕೆ ಅಗಲಿಸಿ ‘ಚೀ..ಚೀ..ಚೀ’ ಎಂದು ಕೂಗಿ ಆನಂದ ಪಟ್ಟ.ಎರಡನೇ ಬಾರಿ ನಭಕ್ಕೆ ನೆಗೆದಾಗ ಇದೇ ಕ್ರಿಯೆ ಪುನರಾವರ್ತನೆಯಾದರೂ, ಆಗ ಕೊಕ್ಕಿನಲ್ಲಿ ಬಂಧಿಯಾದ ಮೀನನ್ನು ಆತ ಹೊತ್ತೊಯ್ದಿದ್ದು ತನ್ನ ಮಣ್ಣಿನ ಗೂಡಿಗೆ. ಅತ್ಯಂತ ಆಳವಾಗಿ, ಕತ್ತಲಿನ ಕೂಪದಂತೆ ಕಂಡ ಆ ಗೂಡಿನಲ್ಲಿ ಯಾರು ಯಾರು ಇದ್ದರೂ ಎಂಬುದು ಮಾತ್ರ ನಮಗೆ ನಿಗೂಢ. ನಾವೇನಾದರೂ ಹೆಚ್ಚು ಉತ್ಸುಕತೆ ತೋರಿದ್ದರೆ ದನಗಾಹಿ ಮಕ್ಕಳು ತಮ್ಮ ಕೈಯಲ್ಲಿನ ಬಡಿಗೆಯನ್ನು ಆ ಗೂಡಿನೊಳಗೆ ತೂರಿಸಿ, ಮನೆ ಅಸ್ತವ್ಯಸ್ಥಗೊಳಿಸಿ ಸತ್ಯಾನ್ವೇಷಣೆ ಮಾಡುತ್ತಿದ್ದರು! ಆ ಪರಿಯ ಸತ್ಯ ಹಾಗೂ ಅನ್ವೇಷಣೆ ನಮಗೆ ಬೇಕೂ ಇರಲಿಲ್ಲ.
ಆ ಪುಟ್ಟ ಜೀವಿಯಲ್ಲಿ ಭಗವಂತ ತುಂಬಿರುವ ಜೀವ ಚೈತನ್ಯ, ಚಾಲಕ ಶಕ್ತಿ, ಬದುಕಿನ ಪ್ರತಿ ಪ್ರೀತಿ, ಬದುಕುವ ಜೀವನೋತ್ಸಾಹ, ತನ್ನ ಸೌಂದರ್ಯದಿಂದ ಸುತ್ತಲಿನ ಪರಿಸರವನ್ನು ಖುಷಿಯಾಗಿರಿಸಿದ ಸಾರ್ಥ್ಯಕ್ಯ, ಪ್ರತಿ ಕ್ಷಣವನ್ನೂ ಆನಂದತುಂದಿಲನಾಗಿ ಬದುಕಿದ ಸಂತುಷ್ಠತೆ, ಜವಾಬ್ದಾರಿಯಿಂದ ತನ್ನ ಕುಟುಂಬ ಪೊರೆಯುವ ಮಾತೃ ವಾತ್ಸಲ್ಯ, ಮಕ್ಕಳನ್ನು ಲಾಲಿಸುವ-ಪಾಲಿಸುವ ಯಜಮಾನಿಕೆ...ಕಿರು ಮಿಂಚುಳ್ಳಿ ಪಕ್ಷಿಗಳ ಲೋಕದ ‘ನಾಗರಿಕ’ನಾಗಿ ನನಗೆ ಕಂಡ.

Friday, September 21, 2018

*🌻ದಿನಕ್ಕೊಂದು ಕಥೆ🌻                                                  ತಾನೊಬ್ಬನೇ ತಿನ್ನಬೇಕೆನ್ನುವುದು ನರಕವಾದರೆ, ಸ್ವರ್ಗ ಯಾವುದು?*

ಸ್ವರ್ಗ ನರಕಗಳ ಕತೆಗಳನ್ನು ಹೇಳುವವರನ್ನು ನೀವು ಅವುಗಳನ್ನು ನೋಡಿದ್ದೀರಾ ಎಂದು ಕೇಳಿ ನೋಡಿ. ಬೇರೆಯವರು ತಲೆ ಆಡಿಸುವಂತೆ ಕತೆ ಹೇಳುವ ಅವರು ಇಲ್ಲವೆಂದು ತಲೆ ಅಲ್ಲಾಡಿಸುತ್ತಾರೆ. ಕತೆ ಹೇಳುವವರು ಯಾರೂ ಅವುಗಳನ್ನು ಹೋಗಿ ನೋಡಿಲ್ಲ. ಹೋಗಿದ್ದಿದ್ದರೆ ಕತೆ ಹೇಳಲು ಅವರು ಇಲ್ಲಿ ಇರುತ್ತಿರಲಿಲ್ಲ. ನಮಗೂ ಅವರಿಗೂ ಗೊತ್ತಿರುವುದೆಲ್ಲ ಕಲ್ಪನೆಯ ಕತೆಗಳು ಮಾತ್ರ! ಈಗ ಅಂತಹದ್ದೇ ಒಂದು ಅರ್ಥಪೂರ್ಣ ಕಾಲ್ಪನಿಕ ಕತೆ ಇಲ್ಲಿದೆ!

ಒಮ್ಮೆ ವಿದ್ವಜ್ಜನರ ಸಮಿತಿಯಲ್ಲಿ ಸ್ವರ್ಗ–ನರಕಗಳು ಎಂದರೆ ಏನೆಂದು ಚರ್ಚೆ ನಡೆಯಿತು. ಜನ ಎಲ್ಲಿ ನರಳುತ್ತಾರೋ ಅದು ನರಕವೆಂದೂ, ಜನ ಎಲ್ಲಿ ಆನಂದದಿಂದ ಇರುತ್ತಾರೋ ಅದು ಸ್ವರ್ಗವೆಂದೂ ಸಮಿತಿ ಒಮ್ಮತದಿಂದ ಒಪ್ಪಿಕೊಂಡರಂತೆ. ಸ್ವರ್ಗ–ನರಕಗಳನ್ನು ನೋಡಿ ಮಾಡುವ ಅಪರೂಪದ ಅವಕಾಶ ಅವರಿಗೆ ಕಲ್ಪಿಸಿಕೊಡಲಾಯಿತಂತೆ!

ಅವರ ಮೊದಲ ಭೇಟಿ ನರಕಕ್ಕೆ. ಅವರಿಗೆ ಆಶ್ಚರ್ಯ ಉಂಟುಮಾಡಿದ ವಿಷಯವೆಂದರೆ ಅದಕ್ಕೆ ನರಕವೆಂಬ ಹೆಸರಿದ್ದರೂ, ಅದೂ ಶ್ರೀಮಂತ ಪ್ರದೇಶವಾಗಿತ್ತು. ಊಟದ ಮನೆಯಲ್ಲಿ ಯಥೇಚ್ಚ ತಿಂಡಿ–ತಿನಿಸುಗಳಿದ್ದವು. ಆದರೆ ಅಲ್ಲಿದ್ದ ಜನ ಮಾತ್ರ ಹಸಿವೆಯಿಂದ ಸೊರಗಿದ್ದರು. ಯಾರ ಮುಖದ ಮೇಲೂ ಕಳೆಯೇ ಇಲ್ಲ. ಸಿಟ್ಟು ಸೆಡವು ಎದ್ದು ತೋರುತ್ತಿದ್ದವು. ಪರಸ್ಪರ ಜಗಳವಾಡುತ್ತಿದ್ದರು. ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಿದ್ದರು. ಯಾರೂ ಊಟ ಮಾಡುತ್ತಿರಲಿಲ್ಲ. ಇದು ಹೀಗೇಕೆಂದು ಸಮಿತಿಯವರು ಗಮನಿಸಿದಾಗ, ಗಮನಕ್ಕೆ ಬಂದದ್ದೇನೆಂದರೆ ಅಲ್ಲಿದ್ದ ಜನರಿಗೆಲ್ಲ ಒಂದು ದೈಹಿಕ ದೌರ್ಬಲ್ಯವಿತ್ತು. ಎಲ್ಲರ ತೋಳುಗಳೂ ಭುಜದಿಂದ ಕೈವರೆಗೆ ನೇರವಾಗಿದ್ದವು. ಮೊಣಕೈ ಮಡಿಸಲಾಗುತ್ತಿರಲಿಲ್ಲ. ಹೀಗಾಗಿ ಕೈತುಂಬ ತಿನಿಸು ತೆಗೆದುಕೊಂಡರೂ ಅದನ್ನು ಬಾಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಷ್ಟಪಟ್ಟು ಬಾಯ ಬಳಿ ಕೈ ಬಂದರೂ ಒಂದೆರಡು ಅಗಳು ಬಾಯಿ ಸೇರುತ್ತಿತ್ತು. ಉಳಿದದ್ದೆಲ್ಲ ನೆಲದ ಮೇಲೆ ಚೆಲ್ಲಿಹೋಗುತ್ತಿತ್ತು. ಹೊಟ್ಟೆ ತುಂಬುವಷ್ಟು ತಿಂಡಿ–ತಿನಿಸು ಇದ್ದರೂ ತಿನ್ನಲಾಗುತ್ತಿರಲಿಲ್ಲ. ಎಲ್ಲರೂ ಹಸಿದುಕೊಂಡೇ ಊಟದ ಮನೆಯಿಂದ ಹೊರಗೆ ಹೋಗುತ್ತಿದ್ದರು. ‘ತಿನ್ನಲು ಬೇಕಾದಷ್ಟಿದ್ದರೂ ಇವರಿಗೆ ತಿನ್ನಲಾಗುತ್ತಿಲ್ಲವಲ್ಲ. ನಿರ್ದಯ ಅನ್ಯಾಯ’ ಎಂದು ಸಮಿತಿಯವರಿಗೆ ಬಹಳ ಬೇಸರವಾಯಿತು.

ಸಮಿತಿಯವರು ಅಲ್ಲಿಂದ ಸ್ವರ್ಗಕ್ಕೆ ಹೋದರು. ನರಕಕ್ಕೂ ಸ್ವರ್ಗಕ್ಕೂ ಅಂತಹ ವ್ಯಾತ್ಯಾಸವೇನೂ ಕಾಣಲಿಲ್ಲ. ಎರಡೂ ಶ್ರೀಮಂತ ಸುಂದರ ಪ್ರದೇಶಗಳೇ! ಆದರೆ ಸಮಿತಿಯವರು ಎಲ್ಲೂ ನಿಲ್ಲದೆ ನೇರ ಊಟದ ಮನೆಗೆ ಹೋದರು. ಅಲ್ಲಿ ಕೂಡಾ ಊಟದ ಮೇಜಿನ ತುಂಬಾ ತಿಂಡಿ ತಿನಿಸುಗಳಿದ್ದವು. ಆದರೆ ಜನ ಅಲ್ಲಿ ಆನಂದವಾಗಿದ್ದರು. ಪರಸ್ಪರ ಸ್ನೇಹದ ಪ್ರೀತಿಯ ಮಾತುಗಳನ್ನಾಡುತ್ತ ಊಟ ಮಾಡುತ್ತಿದ್ದರು. ಇಲ್ಲಿಯೂ ಸಮಿತಿಯವರಿಗೆ ಆಶ್ಚರ್ಯ ಕಾದಿತ್ತು. ಇಲ್ಲಿನ ಮೊಣಕೈ ಬಗ್ಗುತ್ತಿರಲಿಲ್ಲ. ನೇರವಾಗಿ ತಿಂಡಿಯನ್ನು ಬಾಯಲಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಯಾರೂ ಹಸಿವೆಯಿಂದ ಬಳಲುತ್ತಿರಲಿಲ್ಲ. ಎಲ್ಲರೂ ಆನಂದವಾಗಿ ಊಟ ಮಾಡುತ್ತಿದ್ದರು. ತಮ್ಮ ಕೈ ಬಳಸಿ ತಾವೇ ತಿನ್ನಲು ಸಾಧ್ಯವಿಲ್ಲವಾದುದರಿಂದ ಅವರು ತಮ್ಮ ಕೈ ಬಳಸಿ ಮತ್ತೊಬ್ಬರಿಗೆ ತಿನ್ನಿಸುತ್ತಿದ್ದರು. ತಿನ್ನಿಸುವಾಗ ಒಳ್ಳೆಯ ಮಾತಗಳನ್ನಾಡುತ್ತಿದ್ದರು. ಉಪಚಾರ ಮಾಡುತ್ತಿದ್ದರು. ಊಟದ ಮನೆಯಲ್ಲಿ ಆನಂದದ ವಾತಾವರಣವಿತ್ತು!

ಸಮಿತಿಯವರು ಹಿಂತಿರುಗಿ ಬಂದು ಒಂದು ಒಳ್ಳೆಯ ವರದಿ ಸಲ್ಲಿಸಿದರು. ಅದೇನೆಂದರೆ ಸ್ವರ್ಗ–ನರಕಗಳಿಗೆ ಬಹಳ ವ್ಯತ್ಯಾಸವೇನಿಲ್ಲ. ತಾನೊಬ್ಬನೇ ತಿನ್ನಬೇಕು. ಬೇರೆಯವರ ಎನಗೇಕೆ ಎಂದು ಪ್ರಯತ್ನಿಸುವ ಜನರಿದ್ದರೆ ಅದು ನರಕ! ಇತರರಿಗೆ ತಿನಿಸಿ ಸಂತೋಷ ಪಡುವುದಾದರೆ, ಅವರು ನಮಗೂ ತಿನಿಸುತ್ತಾರೆ ಎಂದು ಅರಿತು ಬಾಳುವ ಜನರಿದ್ದರೆ ಅದು ಸ್ವರ್ಗ! ಕತೆ ಕಾಲ್ಪನಿಕವಿರಬಹುದು! ಆದರೆ ಅದರ ಹಿಂದಿನ ತತ್ವ ಮಾತ್ರ ಸತ್ವಪೂರ್ಣ ಅಲ್ಲವೇ ? ನಾವಿರುವಲ್ಲಿಯೇ ಸ್ವರ್ಗ ನರಕಗಳನ್ನು ಸೃಷ್ಠಿಸಿಕೊಳ್ಳುವ ಹಠ ಯೋಗ ನಾವು ಬೆಳೆಸಿಕೊಳ್ಳುವುದು ನಮಗೆ ಸಾಧ್ಯವಲ್ಲವೇ?
ಕೃಪೆ ಷಡಕ್ಷರಿ.ವಿಶ್ವ ವಾಣಿ.

Tuesday, September 4, 2018

*🌻🌻ದಿನಕ್ಕೊಂದು ಕಥೆ🌻🌻*

ರವೀಂದ್ರನಾಥ್ ಠಾಕೂರ್ ಅವರನ್ನು ಋಷಿ ಅಂಥ ಕರೆದಿದ್ದೇವೆ. ಆತ ಮಹಾನ್ ವಿದ್ವಾಂಸ. ಒಮ್ಮೆ ಶಾಂತಿನಿಕೇತನದಲ್ಲಿ ಕುಳಿತಿರುತ್ತಾರೆ. ಶಾಂತಿನಿಕೇತನ ಹೆಸರು ಎಷ್ಟು ಚೆಂದವಾಗಿದೆ. ಶಾಂತಿನಿಕೇತನದಲ್ಲಿ ಗಿಡಗಳು ಹಸಿರಿನಿಂದ ತುಂಬಿವೆ. ನೀರಿನ ಸಣ್ಣಸಣ್ಣ ಝರಿಗಳಿವೆ. ಏನು ಸುಂದರ ವಾತಾವರಣ! ಆಕಾಶದಲ್ಲಿ ಹಕ್ಕಿಗಳು ದೂರಕ್ಕೆ ಹಾರಿ ಹಾರಿ ಮತ್ತೆ ಮರಗಳಿಗೆ ಬಂದು ಕೂರುವ ಸಮಯ. ಸೂರ್ಯ ಕೆಳಗಿಳಿಯುತ್ತಿದ್ದಾನೆ. ಮೇಘಗಳಿವೆ. ಸೂರ್ಯನ ಹೊನ್ನಿನ ಕಿರಣಗಳು ಬೆಳಗಿವೆ, ಹಕ್ಕಿಗಳ ಸುಂದರ ಧ್ವನಿ ಇದೆ. ಏನು ಸುಂದರ ವಾತಾವರಣ. ಅದನ್ನು ಹಣ ಕೊಟ್ಟು ಪಡೆಯೋಕೆ ಆಗುವುದಿಲ್ಲ, ಹೃದಯ ಕೊಟ್ಟು ಪಡೆಯಬೇಕು.

ರವೀಂದ್ರನಾಥ್ ಠಾಕೂರ್ ಕುಳಿತಿರುವ ಆ ಸಮಯದಲ್ಲಿ ಅಲ್ಲಿಗೆ ಅವರ ಗೆಳೆಯ ಬರುತ್ತಾನೆ. "ರವೀಂದ್ರರೇ,ನೀವು ಶ್ರೇಷ್ಠ ಜ್ಞಾನಿಗಳು, ಕವಿಗಳು, ಎಂಥ ಸಾಧನೆ ಮಾಡಿದ್ದೀರಿ! ಆದರೆ ನಿಮ್ಮನ್ನು ಜನ ಎಷ್ಟು ಟೀಕೆ ಮಾಡುತ್ತಿದ್ದಾರೆ. ಪತ್ರಿಕೆಗಳಲೆಲ್ಲ ಅವಹೇಳನ ಮಾಡುತ್ತಿದ್ದಾರೆ. ನೀವು ನೋಡಿದಿರೇನು?"

ರವೀಂದ್ರನಾಥ ಠಾಕೂರ್ ಹೇಳಿದರು: "ನೋಡಲಿಕ್ಕೆ ವೇಳೆ ಇಲ್ಲ".

ನಮ್ಮಂಥವರಾದರೆ ಓದಿ ಮರು ಟೀಕೆಗೆ ತೊಡಗುತ್ತಿದ್ದೆವು. ಆದರೆ ಇವರಿಗೆ ಅವುಗಳನ್ನು ಓದುವುದಕ್ಕೂ ವೇಳೆ ಇಲ್ಲ. ನಿಸರ್ಗ ಅಷ್ಟು ಶ್ರೀಮಂತವಾಗಿದೆ.
Hundred years are not sufficient for enjoying the beauty.
ರವೀಂದ್ರರಿಗೆ ಏಕೆ ಋಷಿ ಅಂಥ ಕರೆದೆವು? ಅವರು ಪುಸ್ತಕ ಬರೆದಿದ್ದಾರೆ ಅಂಥ ಅಲ್ಲ. ಅವರಲ್ಲಿ ಅಂಥ ಶಾಂತ ವ್ಯಕ್ತಿತ್ವ ಇತ್ತು. ಇಂಥವರನ್ನು ನೆನೆಯುವುದು ನಮ್ಮಂಥವರಿಗೆ ಪರಮ ಸುಖ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.          ಸಂಗ್ರಹ: ವೀರೇಶ್ ಅರಸಿಕೆರೆ. ****************************************** 🌻🌻 *ದಿನಕ್ಕೊಂದು ಕಥೆ*🌻🌻

💐 *ಕತ್ತೆಯ ಉಪಾಯ*💐

ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ. ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆ ಮೇಲೆ ಕುಳಿತು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ. ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ "ಎಂಥಾ ಜನ್ಮವಪ್ಪಾ ನಿಂದೂ? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಸಾಗೋದೇ ನಿನ್ನ ಹಣೆ ಬರಹವಾಯ್ತು ಅಲ್ವಾ! ಇಂತಹ ದುರ್ಗತಿ ಯಾರಿಗೂ ಬೇಡಪ್ಪಾ. ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ." ಎಂದು ಪರಿಹಾಸ್ಯ ಮಾಡಿ ನಕ್ಕಿತು.

ಈ ಮಾತು ಕೇಳಿ ಕತ್ತೆಗೆ ತುಂಬಾ ಅವಮಾನವಾಯಿತು. ಸೊಕ್ಕಿನ ಕುದುರೆಗೆ ಬುದ್ಧಿ ಕಲಿಸುವ ಹುನ್ನಾರ ಮಾಡಿತು. ಕೆಲ ಹೊತ್ತಿನ ನಂತರ ವ್ಯಾಪಾರಿ ಪ್ರಯಾಣ ಮುಂದುವರಿಸಲು ಸರಕನ್ನು ಕತ್ತೆಯ ಮೇಲೆ ಏರಿಸಿದಾಗ ಕತ್ತೆ ಅದನ್ನು ಬೀಳಿಸಿ ತಾನೂ ನೆಲಕ್ಕೆ ಬಿದ್ದು ಒದ್ದಾಡತೊಡಗಿತು. ಇದರಿಂದ ವ್ಯಾಪಾರಿ ತುಂಬಾ ದಿಗಿಲಾಯಿತು. "ಅಯ್ಯೋ ಪಾಪ! ಕತ್ತೆಯ ಆರೋಗ್ಯ ಸರಿಯಿಲ್ಲವೆಂದು ತೋರುತ್ತದೆ" ಎಂದುಕೊಂಡು ಆ ಭಾರವಾದ ಬಟ್ಟೆ ಮೂಟೆಗಳನ್ನು ಕುದುರೆ ಮೇಲೆ ಹೊರಿಸಿ ಪ್ರಯಾಣ ಮುಂದುವರಿಸಿದ. ಕತ್ತೆಯನ್ನು ನಿಂದಿಸಿದ ತಪ್ಪಿಗೆ ಕುದುರೆಗೆ ತಕ್ಕ  ಶಿಕ್ಷೆಯಾಯಿತು.


ನೀತಿ
ನಾವು ಇನ್ನೊಬ್ಬರನ್ನು ಅವಮಾನಗೊಳಿಸಿದಾಗ, ಆ ಅವಮಾನದ ಜೊತೆಗೆ ಶಿಕ್ಷೆಯನ್ನು ಸಹ ನಾವು ಒಂದು ದಿನ  ಅನುಭವಿಸಬೇಕಾಗಿರುತ್ತದೆ.


Saturday, September 1, 2018

ತ್ರಿವೇಣಿ

ತ್ರಿವೇಣಿಯವರು ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರರು. ಅವರು ತಮ್ಮ ಕಥೆ ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬರಹಗಾರ್ತಿಯರಲ್ಲಿ ಪ್ರಮುಖರು.  ಸುಮಾರು ಒಂದು ದಶಕದ ಅವಧಿಯಲ್ಲಿ ರಚಿತವಾದ ಅವರ ಕಥೆ-ಕಾದಂಬರಿಗಳು ಕನ್ನಡದಲ್ಲಿ ಓದುಗರ ಒಂದು ವರ್ಗವನ್ನೇ ಸೃಷ್ಟಿಸಿತು. 

ಬಿ. ಎಂ. ಶ್ರೀ ಅವರ ತಮ್ಮ ಬಿ. ಎಂ. ಕೃಷ್ಣಸ್ವಾಮಿಯವರ ಎರಡನೆಯ ಮಗಳಾದ ತ್ರಿವೇಣಿ ಅವರು ಜನಿಸಿದ್ದು ಸೆಪ್ಟೆಂಬರ್ 1, 1928ರಲ್ಲಿ.  ಅವರ ಹುಟ್ಟು ಹೆಸರು ಭಾಗೀರಥಿ.  ಅವರು ಶಾಲೆಗೆ ಸೇರಿದಾಗ ಅವರ ಹೆಸರು ‘ಅನಸೂಯ’ ಎಂದಾಯಿತು.   ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು.   ಅಂದಿನ ದಿನಗಳಲ್ಲಿ ನಮಗೆ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀ ಶಂಕರ್ ಅವರ ಪತಿ.  ಮದುವೆಯ ನಂತರ ‘ಅನಸೂಯ ಶಂಕರ್’ ಆದರು.  ಮನೆಯೊಳಗಿನ ಅನಸೂಯ ಶಂಕರ್ ಸಣ್ಣಕಥೆಗಳ ಮೂಲಕ ಕನ್ನಡ ಸಾಹಿತ್ಯ ರಂಗವನ್ನು ಪ್ರವೇಶಿಸಿ ಕಾದಂಬರಗಾರ್ತಿಯಾಗಿ ‘ತ್ರಿವೇಣಿ’ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದರು.

 ‘ಶರಪಂಜರ, ‘ಬೆಳ್ಳಿಮೋಡ’, ‘ಕೀಲುಗೊಂಬೆ, ‘ಹೃದಯ ಗೀತೆ, ‘ಬೆಕ್ಕಿನಕಣ್ಣು’, ‘ಬಾನುಬೆಳಗಿತು, ‘ಅವಳ ಮನೆ’, ‘ಕಾಶೀಯಾತ್ರೆ, ‘ಹಣ್ಣೆಲೆ ಚಿಗುರಿದಾಗ’, ‘ಹೂವು ಹಣ್ಣು’,  ‘ಮುಕ್ತಿ’,  ‘ದೂರದ ಬೆಟ್ಟ’,  ‘ಅಪಸ್ವರ’, ‘ಅಪಜಯ’, ‘ತಾವರೆ ಕೊಳ’, ‘ಸೋತು ಗೆದ್ದವಳು’, ‘ಕಂಕಣ’, ‘ಮುಚ್ಚಿದ ಬಾಗಿಲು’, ‘ಮೊದಲ ಹೆಜ್ಜೆ’, ‘ವಸಂತಗಾನ’, ‘ಅವಳ ಮಗಳು’ ಇವು ತ್ರಿವೇಣಿಯವರ  ಕಾದಂಬರಿಗಳಾಗಿವೆ.

‘ಎರಡು ಮನಸ್ಸು, ‘ಸಮಸ್ಯೆಯ ಮಗು’, ‘ ಹೆಂಡತಿಯ ಹೆಸರು’  ಇವು ತ್ರಿವೇಣಿ ಅವರ  ಕಥಾಸಂಕಲನಗಳಾಗಿವೆ.   ಇವುಗಳಲ್ಲಿ ಒಟ್ಟು ನಲವತ್ತೊಂದು ಕಥೆಗಳಿವೆ.  ಮಾನಸಿಕ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚಿತ್ರಿಸುವ ಅವರ ‘ಹೆಂಡತಿಯ ಹೆಸರು’, ‘ಚಂಪಿ’, ‘ಅತಿಥಿ ಬರಲಿಲ್ಲ’, ‘ಸಮಸ್ಯೆಯ ಮಗು’, ‘ಸಲಹೆ’ ಮತ್ತು ಎರಡು ಮನಸ್ಸು’ ಮೊದಲಾದ ಕಥೆಗಳು ಗಮನ ಸೆಳೆಯುತ್ತವೆ. 

ತ್ರಿವೇಣಿಯವರ  ಸಣ್ಣ ಕತೆಗಳ ಸಂಕಲನವಾದ ‘ಸಮಸ್ಯೆಯ ಮಗು’ವಿಗೆ 1962ರಲ್ಲಿ ‘ದೇವರಾಜ ಬಹದ್ದೂರ್  ಪ್ರಶಸ್ತಿ’ ಮತ್ತು 1960ರಲ್ಲಿ ‘ಅವಳ ಮನೆ’ ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರಕಿದವು. ‘ಅಪಸ್ವರ’ ಮತ್ತು ‘ಅಪಜಯ’ ಕಾದಂಬರಿಗಳನ್ನು ಮತ್ತು ‘ತ್ರಿವೇಣಿ ಸಪ್ತಕ್’ ಎಂಬ ಹೆಸರಿನಲ್ಲಿ ಏಳು ಸಣ್ಣ ಕತೆಗಳನ್ನು ಹಿಂದಿಗೆ ಎಸ್.ಎಮ್.ರಾಮಸ್ವಾಮಿ ಅವರು ಅನುವಾದ ಮಾಡಿದ್ದಾರೆ. ಮೀರಾ ನರ್ವೆಕರ್ ಎನ್ನುವವರು ‘ಶರಪಂಜರ’ವನ್ನು ‘The mad women’ ಎಂಬ ಹೆಸರಿನಲ್ಲಿ ಇಂಗ್ಳೀಷ್ ಗೆ ಅನುವಾದಿಸಿದ್ದಾರೆ. ‘ಬೆಕ್ಕಿನ ಕಣ್ಣು’ ಕಾದಂಬರಿಯನ್ನು ಶರ್ವಾಣಿಯವರು ತೆಲುಗಿಗೆ ಅನುವಾದಿಸಿದ್ದಾರೆ.

ತ್ರಿವೇಣಿಯವರ ‘ಹಣ್ಣೆಲೆ ಚಿಗುರಿದಾಗ’, ‘ಬೆಳ್ಳಿಮೋಡ’, ‘ಶರಪಂಜರ’, ‘ಮುಕ್ತಿ’, ‘ಹೂವು ಹಣ್ಣು’ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರೇಕ್ಷಕವರ್ಗದಲ್ಲಿ  ಅವರನ್ನು ಅಮರವಾಗಿಸಿವೆ. 

ತ್ರಿವೇಣಿ ಅವರು ಬರೆದ ಮೊದಲ ಕಾದಂಬರಿ ‘ಅಪಸ್ವರ’ವಾದರೂ ಮೊದಲು ಪ್ರಕಟವಾದದ್ದು ‘ಹೂವು ಹಣ್ಣು’.  ವಿಧವೆಯಾಗಿ ಬಡತನಕ್ಕೆ ಸಿಕ್ಕಿದ ಅನಾಥೆಯೊಬ್ಬಳು ತನ್ನ ವಂಶದ ಕುಡಿಯನ್ನು ಸಾಕಲು ನಡೆಸುವ ಹೋರಾಟದ ಬದುಕು, ಆ ಹಾದಿಯಲ್ಲಿ ಆಕೆ ಒಳಪಡುವ  ಶೋಷಣೆ ಮತ್ತು  ದಾರುಣ ಪರಿಸ್ಥಿತಿಗಳನ್ನು  ಈ ಕಾದಂಬರಿ ಚಿತ್ರಿಸುತ್ತದೆ.  ಸ್ವಾವಲಂಬಿಯಾಗಿ, ಸ್ವತಂತ್ರಳಾಗಿ ಬಾಳಬೇಕೆಂಬ ಹಿರಿಯಾಸೆ ಹೊತ್ತು ಬಂದ ಹೆಣ್ಣು ಪರಾವಲಂಬಿಯಾದರೆ ಅವಳ ಬಾಳು ಎಷ್ಟು ಅಸಹನೀಯವಾಗುತ್ತದೆ ಎಂಬುದನ್ನು ‘ಅಪಸ್ವರ’, ‘ಅಪಜಯ’ ಕಾದಂಬರಿಗಳು ಚಿತ್ರಿಸುತ್ತವೆ. 

‘ಗೃಹಿಣಿಯ ಬದುಕೇ ಹೆಣ್ಣಿನ ಆದರ್ಶ’ ಎಂಬುದನ್ನು ತ್ರಿವೇಣಿ ಅವರ ಕಾದಂಬರಿಗಳು ತೀರ ಸರಳವಾಗಿ ಚಿತ್ರಿಸುತ್ತವೆ.  ಒಲವಿನ ಪತಿ, ತಾಯ್ತನದ ಹಿಗ್ಗು, ತನ್ನದೇ ಆದ ಪುಟ್ಟ ಮನೆ-ಇವನ್ನು ಹೆಣ್ಣು ಎಷ್ಟರಮಟ್ಟಿಗೆ ಬಯಸುತ್ತಾಳೆ ಎಂಬುದನ್ನು ಹೆಣ್ಣಿನ ದೃಷ್ಟಿಯಿಂದ ನಿರೂಪಿಸುವ ಅವರ ಕೆಲವು ಕಾದಂಬರಿಗಳು ಕೇವಲ ಮನೋರಂಜನೆಯನ್ನು ಮಾತ್ರ ನೀಡುತ್ತವೆ.  ‘ವಸಂತ ಗಾನ’, ‘ಬಾನು ಬೆಳಗಿತು’, ಅವಳ ಮನೆ’, ‘ಹೃದಯ ಗೀತೆ’ ಇವು ಈ ಬಗೆಯ ಕಾದಂಬರಿಗಳು. 

ಆಸ್ತಿಗಾಗಿ ಮದುವೆಯಾಗುವುದಾಗಿ ಮಾತು ಕೊಟ್ಟು ಆಸ್ತಿಗೆ ಹಕ್ಕುದಾರ ಬಂದಾಗ ಕೊಟ್ಟ ಮಾತಿನಿಂದ ಹಿಂಜರಿದ ಸ್ವಾರ್ಥಿ ಯುವಕನಿಂದ ಭಗ್ನ ಪ್ರೇಮಿಯಾದ ಸರಳ ಸ್ವಭಾವದ ಮುಗ್ಧಯುವತಿಯ ಮನಸ್ಸನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಕಾದಂಬರಿ ‘ಬೆಳ್ಳಿ ಮೋಡ’. 

ಕಾಮದ ಅರಗಿಣಿಯಾಗಿ ಬಾಳೆಲ್ಲ ಕಣ್ಣೀರಿನಿಂದ ತೊಳೆಯುವ ಹೆಣ್ಣಿನ ಅಸಹಾಯಕ ಚಿತ್ರಣ ‘ಕೀಲುಗೊಂಬೆ’ ಕಾದಂಬರಿಯಲ್ಲಿದೆ.  ‘ಮೊದಲ ಹೆಜ್ಜೆ’ಯಲ್ಲಿ ಪುರುಷ ಪ್ರಧಾನ ಸಮಾಜದ ಕಪಿಮುಷ್ಟಿಗೆ ಸಿಲುಕಿ ಬಾಳಿನಲ್ಲಿ ಕಹಿಯನ್ನೇ ಉಂಡ ದುರ್ದೈವಿ ಹೆಣ್ಣಿನ ಚಿತ್ರಣವಿದೆ. 

‘ತಾವರೆ ಕೊಳ’ ಗಂಭೀರವಾದ ವಸ್ತುವನ್ನುಳ್ಳ  ಕಾದಂಬರಿ.  ಮನುಷ್ಯ ಕೇವಲ ಅನ್ನ, ನೀರು, ಗಾಳಿಯಿಂದ ಮಾತ್ರವೇ ಜೀವಿಸಲಾರ, ಅವನ ಜೀವನ ಹಸನಾಗಬೇಕಾದರೆ ಅವನಿಗೆ ಪ್ರೀತಿ, ವಿಶ್ವಾಸ ಅತ್ಯವಶ್ಯಕವಾಗಿ ಬೇಕು ಎಂಬುದನ್ನು ಈ ಕಾದಂಬರಿ ಧ್ವನಿಸುತ್ತದೆ. 

ನಿವೃತ್ತರಾದ ರಾಯರ ಸಂಸಾರದ ಸುತ್ತ ರಚಿತವಾದ ಒಂದು ಸುಂದರ ಕಾದಂಬರಿ ‘ಹಣ್ಣೆಲೆ ಚಿಗುರಿದಾಗ’.  ವಯಸ್ಸಾದರೂ ಮಕ್ಕಳಂತಾಡುವ, ನಾಲಿಗೆ ಚಪಲ ಬಿಡದ, ಮರೆವಿನ ಸ್ವಭಾವದ ರಾಯರ ಪಾತ್ರ ಪುಟದಿಂದ ಪುಟಕ್ಕೆ ಹಾಸ್ಯದ ಹೊನಲನ್ನು ಹರಿಸುತ್ತಾ ಬೆಳೆದು ಬಂದಿದೆ.  ತ್ರಿವೇಣಿಯವರಿಗೆ ಪಾತ್ರ ಚಿತ್ರಣದ ಕಲೆ ಸಿದ್ಧಿಸುತ್ತಿತ್ತು ಎಂಬುದರ ಕುರುಹು ಈ ಕಾದಂಬರಿಯ ರಾಯರ ಪಾತ್ರ ಚಿತ್ರಣದಿಂದ ಗೋಚರವಾಗುತ್ತದೆ.  ಎರಡು ಮೂರು ತಲೆಮಾರಿನವರಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಚಿತ್ರಿಸುವುದು ಈ ಕಾದಂಬರಿಯ ಉದ್ದೇಶ. 

ಮನೋವೈಜ್ಞಾನಿಕ ಸಮಸ್ಯೆಗಳನ್ನು ತಮ್ಮ ಕಾದಂಬರಿಯ ವಸ್ತುವನ್ನಾಗಿ ಆಯ್ದುಕೊಂಡು ತ್ರಿವೇಣಿಯವರು ಕನ್ನಡದ ಕಥೆ-ಕಾದಂಬರಿಗಳಿಗೆ ಹೊಸ ತಿರುವನ್ನು ಕೊಟ್ಟರು.  ದೈಹಿಕ ಸ್ವಾಸ್ಥ್ಯದೊಂದಿಗೆ ಮಾನಸಿಕ ಸ್ವಾಸ್ಥ್ಯವೂ ಸೇರಿದಾಗ ವ್ಯಕ್ತಿಯ ಬಾಳು ಸಹನೀಯ ಎಂದು ತಮ್ಮ ಮನೋವೈಜ್ಞಾನಿಕ ಕಾದಂಬರಿಗಳ ಮೂಲಕ ತೋರಿಸಿಕೊಟ್ಟರು.  ‘ಬೆಕ್ಕಿನ ಕಣ್ಣು’, ‘ದೂರದ ಬೆಟ್ಟ’, ‘ಮುಚ್ಚಿದ ಬಾಗಿಲು’, ಮತ್ತು ‘ಶರಪಂಜರ’ ಮೊದಲಾದ ಕಾದಂಬರಿಗಳಲ್ಲಿ ಕೆಲವು ರೀತಿಯ ಮನೋವೈಪರೀತ್ಯಗಳನ್ನು ಚಿಕಿತ್ಸಕ ದೃಷ್ಟಿಯಿಂದ ಕಂಡಿದ್ದಾರೆ. 
 
“ಮನಶ್ಯಾಸ್ತ್ರ ಮನುಷ್ಯನ ಅಧ್ಯಯನದ ವಿಶಿಷ್ಟ ಕ್ಷೆತ್ರವಾಗುವ ಮುನ್ನವೇ ಸಾಹಿತ್ಯ ರಚನೆ ಮಾಡಿದ ಕವಿಗಳು ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದರು.  ಸಾಹಿತ್ಯ ಕೃತಿಯಲ್ಲಿ ಪಾತ್ರಗಳ ಸ್ವಭಾವ, ನಡೆನುಡಿಯಲ್ಲಿ ಜೀವನವನ್ನು ಎದುರಿಸುವ ಅಥವಾ ಎದುರಿಸಲು ಹಿಂಜರಿಯುವ ರೀತಿಯಲ್ಲಿ ಪ್ರಕಟವಾಗಬೇಕು ಎಂಬುದು ನೆನಪಿಡಬೇಕಾದ ಅಂಶ.  ತ್ರಿವೇಣಿಯವರು ಮನಶ್ಯಾಸ್ತ್ರವನ್ನು ಕ್ರಿಯೆಯಲ್ಲಿ ಅರಗಿಸಿಕೊಳ್ಳಲು ಶಕ್ತರಾದಾಗ ಯಶಸ್ವಿಯಾಗುತ್ತಾರೆ.  ‘ಬೆಕ್ಕಿನ ಕಣ್ಣು’, ‘ಶರಪಂಜರ’ ಇಂತಹ ಕಾದಂಬರಿಗಳಲ್ಲಿ ಈ ಅಭಿಪ್ರಾಯ ಸಮಂಜಸವೆನಿಸುತ್ತದೆ” ಎಂಬ ಡಾ. ಎಲ್. ಎಸ್. ಶೇಷಗಿರಿರಾಯರ ಅಭಿಪ್ರಾಯಗಳು ಉಲ್ಲೇಖನೀಯವಾಗಿವೆ. 

ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ಮನೋವಿಜ್ಞಾನವನ್ನು ಬಳಸಿದುದರಿಂದ ಅವರು ಹೊಸ ಹಾದಿಯಲ್ಲಿ ನಡೆದರು. ಎಂದು ತೋರಿದರೂ ಅವರ ಕಾದಂಬರಿಗಳ ಮೌಲ್ಯಗಳು ಅಂದಿನವರೆಗೆ ಕಂಡು ಬಂದಿದ್ದ ಮೌಲ್ಯಗಳಿಂದ ಬಿನ್ನವಾಗಿರಲಿಲ್ಲ ಕನ್ನಡ ಕಾದಂಬರಿ, ಕಥೆಗಳ ಚರಿತ್ರೆಯಲ್ಲಿ ಮಹಿಳೆಯರ ಉತ್ಸಾಹದ ಅಧ್ಯಾಯವನ್ನೇ ಅವರು ತೆರೆದರು ಎನ್ನಬೇಕು. ಸಾಮಾನ್ಯವಾಗಿ ಕೌಟುಂಬಿಕ ಜೀವನ ಇವರ ಕಥಾವಸ್ತು. ಹೃದಯದ ಶ್ರೀಮಂತಿಕೆ ಇವರ ವಸ್ತು.

ಜೀವನದಲ್ಲಿ ಹೆಣ್ಣಿಗೆ ಇರಬೇಕಾದ ಸುಖ, ಸಂಪತ್ತು, ಭೋಗ ಭಾಗ್ಯಗಳು ತ್ರಿವೇಣಿಯವರಿಗೆ ಹೇರಳವಾಗಿದ್ದವು.  ಅವರಿಗೆ ಜೀವನದಲ್ಲಿ ಆಸಕ್ತಿ, ಮೋಹವಿತ್ತು.  ಇದು ಅವರ ಕೃತಿಗಳಲ್ಲಿ ಉದ್ದಕ್ಕೂ ಕಾಣುತ್ತದೆ.  ಒಲವಿನ ಪತಿ, ತಮ್ಮದೇ ಆದ ಮನೆ, ಪ್ರೀತಿಸುವ ಬಂಧು ಬಾಂಧವರು, ಆತ್ಮೀಯ ಸ್ನೇಹಿತರ ಬಳಗ, ಜನಪ್ರಿಯತೆ, ಅಚ್ಚುಮೆಚ್ಚಿನ ವಾಚಕ-ವರ್ಗ ಇಷ್ಟೆಲ್ಲಾ ಇದ್ದರೂ “ತಾನು ತಾಯಿಯಾಗಲಿಲ್ಲ, ತಾವು ಸೇರಿದ ಮನೆಗೆ ಬೆಳಕಾಗಿ ಒಂದು ಮಗುವನ್ನು ಕೊಡಲಿಲ್ಲ” ಎಂಬ ಕೊರಗು ಅವರನ್ನು ಬಾಧಿಸುತ್ತಿತ್ತು.  ದೈಹಿಕವಾಗಿ ದುರ್ಬಲರಾಗಿದ್ದ ತ್ರಿವೇಣಿ ಮೂರು ಸಲ ಗರ್ಭಿಣಿಯಾದಾಗಲೂ ನಿರೀಕ್ಷಿಸಿದ ಅತಿಥಿ ಬರದೆ ತಪ್ಪಿಸಿಕೊಂಡು ಹೋದ ಕಾರಣ ಅವರಿಗೆ ನಿರಾಶೆ ಇಮ್ಮಡಿಸುತ್ತಿತ್ತು.  ಈ ಸಮಯದಲ್ಲಿ ಅವರು ಅನುಭವಿಸಿದ ನಿರಾಶೆ, ಕಾತರ, ದುಃಖ, ಹೆರಿಗೆಯ ನೋವು, ಮೂಕ ಸಂಕಟ – ಇವೆಲ್ಲವನ್ನೂ ಅವರ ‘ಅತಿಥಿ ಬರಲಿಲ್ಲ’ ಎಂಬ ಸಣ್ಣಕಥೆಯಲ್ಲಿ ಹೃದಯಸ್ಪರ್ಶಿಯಾಗಿ ಬಣ್ಣಿಸಿದ್ದಾರೆ.  ಸ್ವಾನುಭವದ ಮೂಸೆಯಿಂದ ಮೂಡಿಬಂದಿರುವ ಈ ಕಥೆ ಓದುಗರ ಮನಸ್ಸನ್ನು ಕಲಕುತ್ತದೆ.

ತಾಯಿಯಾಗಲೆಬೇಕೆಂಬ ಹಠದಿಂದ ‘ಮಗು ಕೊಡು’ ಎಂದು ವಿಧಿಗೆ ಸವಾಲಾಗಿ ನಿಂತ ಅವರು ನಾಲ್ಕನೆಯ ಬಾರಿಗೆ ಗರ್ಭಿಣಿಯಾದಾಗ, ಅವರು ಬಹುದಿನದಿಂದ ಕಾತರಿಸುತ್ತಿದ್ದ ಅತಿಥಿಯೇನೋ ಕಡೆಗೂ ಬಂದಳು.  ಆದರೆ ಅವಳನ್ನು ಸ್ವಾಗತಿಸಿದ ಕೆಲವೇ ದಿನಗಳಲ್ಲಿ ಅತಿಥೇಯಳು ಕಣ್ಮರೆಯಾದುದು ದುರಂತ.  ತಮ್ಮ ಬೆಲೆಯುಳ್ಳ ಬರಹದ ಬಾಳಿನ ಅಂತಿಮ ಅಧ್ಯಾಯವನ್ನೇ ಕಡೆಯ ಕಾದಂಬರಿಯ ವಸ್ತುವಾಗುವಂತೆ ಬಿಟ್ಟುಹೋದರು.  ತಾರುಣ್ಯದ ಹೆಬ್ಬಯಕೆಗಳು ಇನ್ನೂ ಚಿಗುರೊಡೆಯುತ್ತಿರುವಾಗಲೇ ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿ 29 ಜುಲೈ 1963ರಲ್ಲಿ ನಿಧನರಾದರು.  ಹೀಗೆ ಕನ್ನಡ ಕಾದಂಬರಿಯ ಸಾಹಿತ್ಯದಲ್ಲಿ ಬಹುಬೇಗ ವಿಶಿಷ್ಟ ಸ್ಥಾನ ಗಳಿಸಿಕೊಂಡ ತ್ರಿವೇಣಿ ಜನಪ್ರಿಯ ಸಾಹಿತಿ ಆಗಿಹೋದರು. 

ತ್ರಿವೇಣಿಯವರಿಂದ ಇನ್ನೂ ಮಹತ್ವದ ಕೃತಿಗಳು ಬರುತ್ತವೆ ಎನ್ನುವ ನಿರೀಕ್ಷೆಗಳಿದ್ದ ಸಮಯದಲ್ಲಿ ಅವರು ಈ ಲೋಕವನ್ನಗಲಿದ್ದು ಕನ್ನಡನಾಡಿಗಾದ ನಷ್ಟ.  ಅಂತಹ ಶ್ರೇಷ್ಠತೆಗೆ ಬೇಕಾದ ಸಕಲ ಉಪಕರಣಗಳೂ ತ್ರಿವೇಣಿ ಅವರಲ್ಲಿತ್ತು ಎಂಬುದು ವಿದ್ವಾಂಸರ ಅಭಿಮತ.  ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸಕಾರರು ತ್ರಿವೇಣಿಯವರನ್ನು ‘ಪ್ರತಿಭಾವಂತ ಲೇಖಕಿ’, ‘ಜನಪ್ರಿಯ ಲೇಖಕಿ’ ಎಂದು ಗುರುತಿಸಿ ಅವರಿಗೆ ಸಲ್ಲಬೇಕಾದ ಗೌರವಯುತ ಸ್ಥಾನವನ್ನು ನೀಡಿದ್ದಾರೆ.  ಬದುಕನ್ನು ಒಳ್ಳೆಯ ನಿಲುವಿನಿಂದ ನೋಡುವ ಆರೋಗ್ಯಕರ ಧೋರಣೆಯನ್ನು ಪ್ರತಿಪಾದಿಸುವ ಅವರ ಕೃತಿಗಳು ಬಹಳ ಕಾಲದವರೆಗೆ ಕನ್ನಡಿಗರ ಹೃದಯಗಳಲ್ಲಿ ನೆಲೆಸಿರುತ್ತವೆ.  ಈ ಮಹಾನ್ ಲೇಖಕಿಯ ನೆನಪಿಗೆ ನಮ್ಮ ಗೌರವಯುತ ನಮನ. 

Thursday, August 30, 2018

  1. ರಾಷ್ಟ್ರೀಯ ವಿಜ್ಞಾನ ದಿನಾಚರಣೆ

                                                               ಅಹಮದ್ ಹಗರೆ
                                                  ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ

    ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಎಷ್ಟು ಜನರಿಗೆ ನೆನಪಿದೆ? ಹು. ಹು ಯಾರಿಗೂ ನೆನಪಿರಲಾರದು! ಎಷ್ಟು ಶಾಲಾ-ಕಾಲೇಜುಗಳಲ್ಲಿ ಈ ದಿನಾಚರಣೆ ಆಚರಿಸಲಾಗುತ್ತಿದೆ.
    ನಮ್ಮ ಶಾಲಾ-ಕಾಲೇಜುಗಳು ಸೌಂದರ್ಯ ಸ್ಪರ್ಧೆ ನಡೆಸಲು ತಲೆ ಕೆಡಿಸಿಕೊಂಡಿರುವಾಗ, ವಿದ್ಯಾರ್ಥಿಗಳು ವ್ಯಾಲೆಂಟೇನ್ಸ್ ಡೇ ಸಂಬ್ರಮದ ಅಮಲಿನಲ್ಲಿ ತೇಲುತ್ತಿರುವಾಗ ವಿಜ್ಞಾನದ ನೆನಪಾದರೂ ಬರುದಾದರು ಹೇಗೆ ಸಾಧ್ಯ? ಅಲ್ಲದೆ ಈ ದಿನಾಚರಣೆ ಪರೀಕ್ಷಾ ವೇಳೆಯಲ್ಲಿ ಬರುವುದರಿಂದ ಅಂಕ ಕಬಳಿಸಲು ಉರುಹಚ್ಚುವ ಬ್ರಮಾಲೋಕದಲ್ಲಿ ಪೋಷಕರು, ಶಿಕ್ಷಕರು ತೊಳಲಾಡುತ್ತಿರುವಾಗ ಈ ದಿನಾಚರಣೆ ಬಗ್ಗೆ ತಲೆಕೆಡಿಸಿ ಕೊಳ್ಳುವುದಾದರೂ ಹೇಗೆ?
    ಈ ದೇಶಕ್ಕೆ ಈ ದೇಶದ ಜನರಿಗೆ ರಾಷ್ಟ್ರೀಯ ದಿನಾಚರಣೆ ಈ ನಾಲ್ಕು ಅಂಶಗಳಲ್ಲಿ ಮಹತ್ತರವಾದುದು.

    ಮೊದಲನೆಯದಾಗಿ ವಿಶ್ವ ಭೂಪಟದಲ್ಲಿ ಈ ದೇಶಕ್ಕೆ ಮಹತ್ತರ ಸ್ಥಾನಮಾನ ನೀಡಿದಂತಹ ದಿನ, ಇಂಗ್ಲೇಂಡ್, ಅಮೇರಿಕ, ರಷ್ಯದಂತಹ ದೇಶಗಳ ಸಾಲಿನಲ್ಲಿ ನಿಲ್ಲಿಸಿದ ದಿನ. ಕೇವಲ ಶ್ರೀಮಂತ ಬಂಡವಾಳಶಾಹಿ ರಾಷ್ಟ್ರಗಳಿಗೇ ಸೀಮಿತವಾಗಿದ್ದ ವಿಜ್ಞಾನದ ಸಾಧನೆಯ ಫಲಶೃತಿಯನ್ನು ಮೊದಲಬಾರಿಗೆ ಮೂರನೆ ಜಗತ್ತಿನ ದೇಶವೊಂದು ತನ್ನದಾಗಿಸಿಕೊಂಡ ದಿನ.
    ಎರಡನೆಯದಾಗಿ ಜಗತ್ತಿನ ಬಹುತೇಕ ಪ್ರಜಾಪ್ರಭುತ್ವೀಯ ದೇಶಗಳು ರಾಜಕೀಯ ಅಸ್ಥಿರತೆಯನ್ನು ಎದುರಿಸಿದಾಗ ಮಿಲಿಟರಿ ಹಿಡಿತಕ್ಕೆ ಹೋಗುವುದು ಸಾಮಾನ್ಯ, ಹೋಗಿರುವುದು ಇತಿಹಾಸ ಆದರೆ ಕಳೆದ 60ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚುಬಾರಿ ಈ ದೇಶ ರಾಜಕೀಯ ಅಸ್ಥಿರತೆ ಅನುಭವಿಸಿದ್ದರೂ, ಈಗಲೂ ಅನುಭವಿಸುತ್ತಿದ್ದರೂ ಈ ದೇಶ ಮಿಲಿಟರಿ ತೆಕ್ಕೆಗೆ ಬೀಳದಿರಲು ಕಾರಣ ಈ ರಾಷ್ಟ್ರದ ಪ್ರಜಾಸತ್ತೆಯ ತಳಹದಿ ವೈಜ್ಞಾನಿಕ ಮನೋಧರ್ಮದ್ದು ಆ ವೈಜ್ಞಾನಿಕ ಮನೋಧರ್ಮವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಆದರ ನೇತಾರರಿಗೆ  ಅಚ್ಚೊತ್ತಿಸಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಮೂಲಭೂತ ಕರ್ತವ್ಯ ಎಂದು ಸಂವಿಧಾನದ ಪುಟಗಳಲ್ಲಿ ಸೇರಿಸಲು ಪ್ರೇರಣೆ ನೀಡಿದ ದಿನ. ನೆಹರೂರಂತಹ ಪ್ರಧಾನಿಗಳಿಗೆ ರಾಷ್ಟ್ರ ನಿರ್ಮಾಣಕ್ಕೆ ವೈಜ್ಞಾನಿಕ ಹಾದಿಯ ಆಧಾರ ಒದಗಿಸಿದ ದಿನ.

    ಮೂರನೆಯದಾಗಿ ಈ ದೇಶದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಪದವಿ, ಪಿಎಚ್‍ಡಿ ಪಡೆದು ಸಧೃಡ ಕಾಯ ಬೆಳೆಸಿಕೊಂಡು ಈ ದೇಶದಲ್ಲಿ ಏನೂ ಇಲ್ಲ, ಇಲ್ಲೇ ಇದ್ದರೆ ಏನೂ ಸಾಧನೆ ಮಾಡಲಿಕ್ಕಾಗುವುದಿಲ್ಲ ಎಂದು ಸಾಗರೋಲ್ಲಂಗನ ಮಾಡುವ ಸೋಕಾಲ್ಡ್ ಪ್ರತಿಭಾವಂತರಿಗೆ ನಾಚಿಸುವಂತಹ ದಿನ, ದೇಶ ಪ್ರೇಮ ಎಂದರೆ ಏನು ಎಂದು ತಿಳಿಸಿ ತೋರಿಸುವ ದಿನ, ರಾಮನ್ ಎಂದರೆ ಏನು ಮತ್ತು ಯಾರು ಎಂದು ತೋರಿಸುವ ದಿನ.

    ನಾಲ್ಕನೆಯದಾಗಿ ಭಾರತದ ಬೆಳವಣಿಗೆ ವಿಜ್ಞಾನದ ಬೆಳವಣಿಗೆಯಲ್ಲಿ ಮತ್ತು ವೈಜ್ಞಾನಿಕ ಮನೋಧರ್ಮ ಬಿತ್ತುವಲ್ಲಿ ಇದೆ ಎಂದು ಎತ್ತಿ ತೋರಿಸುವ ದಿನ

    ನಮ್ಮ ಪ್ರಜಾಸತ್ತೆ ಕಾಲ ಉರುಳಿದಂತೆ ಬಲವಾಗುತ್ತಾ ಬಂದರೂ ಅನಕ್ಷರತೆ, ಅನೈರ್ಮಲ್ಯ, ಅನಾರೋಗ್ಯ ಇತ್ಯಾದಿಗಳಿಂದ ಬಳಲಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾರದಂತಹ ಸ್ಥಿತಿ ಒಂದು ಕಡೆ. ಮಧ್ಯಮ ಶಿಕ್ಷಿತರಿಗೆ ಉದ್ಯೋಗ ಅವಕಾಶ ಸೃಷ್ಠಿಸಲಾರದಂತಹ ಸ್ಥಿತಿ ಇನ್ನೊಂದು ಕಡೆ, ಉತ್ತಮ ಶಿಕ್ಷಿತ ವರ್ಗ ಪಲಾಯನ ಮಾಡುವ ಪರಿಸ್ಥಿತಿ ಮತ್ತೊಂದು ಕಡೆ ಇದ್ದಾಗ ಬೆಳೆಯಲಿಕ್ಕೆ ಹಾಗೂ ಬಲಿಯಲಿಕ್ಕೆ ಸಾಧ್ಯವಾಗುವುದಾದರೂ ಹೇಗೆ? ರಾಷ್ಟ್ರ ಪ್ರೇಮ ಸೆಲೆಬ್ರಿಟಿ ಕಾರ್ಯಕ್ರಮಗಳ ಗುಣವಾಚಕದಲ್ಲಿ ಹೊರಹೊಮ್ಮುವ ನಾಲಗೆ ತುದಿಯಲ್ಲಿರದೆ ಕ್ರಿಯಾತ್ಮಕ ರೂಪದಲ್ಲಿ ಕೃದಯಾಂತರಾಳದಲ್ಲಿ ಅರಳಿದಾಗ ಮಾತ್ರ ಈ ಮೂರೂ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯ. ಈ ಸಾದ್ಯತೆಗೆ ಪ್ರತಿಯೊಬ್ಬರೂ ವೈಜ್ಞಾನಿಕ ಮನೋಧರ್ಮ ಬೆಳಸಿಕೊಳ್ಳಲೇ ಬೇಕು ಅದನ್ನೇ ಸರ್.ಸಿ.ವಿ.ರಾಮನ್ ತಮ್ಮ ಪ್ರಯೋಗ ಹಾಗೂ ತದನಂತರದ ಚಟುವಟಿಕೆಗಳಲ್ಲಿ ಪ್ರತಿಪಾದಿಸಿದ್ದು. ಹಾಗಾಗಿಯೇ ಭಾರತ ಸರ್ಕಾರ ಕಲಿಕಾ ಹಂತಗಳಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಬೆಳಸಿಕೊಳ್ಳಲು ನೆರವಾಗಲು ವಿಜ್ಞಾನ ಸಂಘ ಸಂಸ್ಥೆಗಳನ್ನು ನಿರ್ಮಿಸಲಿಕ್ಕೆ ಪ್ರೋತ್ಸಾಹ ನೀಡಿ ಅವುಗಳಿಗೆ ಧನ ಸಹಾಯ ಮಾಡಲು ಶುರುಮಾಡಿತು ಅದಸರ ಫಲವಾಗಿಯೇ ಅಖಿಲ ಭಾರತ ಜನವಿಜ್ಞಾನ ಸಂಘಟನೆಗಳ ಜಾಲ, ರಾಷ್ಟ್ರೀಯ ಸಾಕ್ಷರತಾ ಮಿಷನ್, ವಿಜ್ಞಾನ ಪರಿಷತ್ ಗಳು, ವಿಜ್ಞಾನ ಕೇಂದ್ರಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ವಿಜ್ಞಾನ ಸಂಘಗಳು ಹುಟ್ಟಿಕೊಂಡವು ಮಾತ್ರವಲ್ಲ ಪ್ರತೀ ಸಂಘ-ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳು ವಿಜ್ಞಾನದ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಅನ್ನುವ ಉದ್ದೇಶದಿಂದ ಸರ್.ಸಿ.ವಿ.ರಾಮನ್ನರ ಜನ್ಮ ಶತಾಬ್ಧಿ ವರ್ಷವಾದ 1988 ರಲ್ಲಿ ಅವರ ಮೂಲಕ ಈ ದೇಶಕ್ಕೆ ವಿಜ್ಞಾನ ಪ್ರಗತಿಯಲ್ಲಿ ನೊಬೆಲ್ ಪಾರಿತೋಷಕ ಪಡೆಯಲು ಅವರ ಬೆಳಕಿನ ಚದುರುವಿಕೆ ಸಂಶೋಧನೆ ನಿಖರತೆ ಪಡೆದು ಪ್ರಕಟಿಸಿದ ದಿ£ವಾದÀ(ನೊಬೆಲ್ ಪಾರಿತೋಷಕ ಪಡೆದ ದಿನ ಅಲ್ಲ ತಮ್ಮ ಸಂಶೋಧನೆಯನ್ನು ಪ್ರಕಟ ಮಾಡಿದ ದಿನ ಫೆ-28) ಫೆಬ್ರವರಿ 28ರಿಂದ ಮೊದಲ್ಗೊಂಡು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲು ತೀರ್ಮನಿಸಿ ಪ್ರಾರಂಬಿಸಲಾಯಿತು. ಅಂದಿನಿಂದ ಪ್ರತಿ ವರ್ಷದ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ ಆದರೆ ಅದರ ಪರಿಮಾಣ ಮಾತ್ರ ತೀರಾ ಶೋಚನೀಯ.
    ರಾಷ್ಟ್ರೀಯ ವಿಜ್ಞಾನ ದಿನ ರಾಮನ್ನರನ್ನು ನೆನಪಿಸಿಕೊಳ್ಳದೆ ಅವರ ಪರಿಚಯ ಮಾಡಿಕೊಳ್ಳದೆ, ಅವರ ಸಂಶೋಧನೆನ್ನು ತಿಳಿದುಕೊಳ್ಳದೆ ಪೂರ್ಣವಾಗುವುದಿಲ್ಲ.

    ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ಸೇರುವ ಕೆಲವೇ ವಿಜ್ಞಾನಿಗಳಲ್ಲಿ ಸಿ.ವಿ.ರಾಮನ್ ಒಬ್ಬರು. ಏಕೆಂದರೆ ತನ್ನ ದೇಶದ ಪ್ರಜೆಯಾಗಿಯೇ ಇದ್ದುಕೊಂಡು, ಅದೇ ದೇಶದ ಸಲಕರಣೆಗಳನ್ನು ಬಳಸಿಕೊಂಡು ಅದೇ ನೆಲದಲ್ಲಿ ಸಂಶೋಧನೆ ಮಾಡಿ ನೊಬೆಲ್ ಪಾರಿತೋಷಕ ಪಡೆದ ಮೊದಲ ಹಾಗೂ ಏಕೈಕ ಏಷ್ಯದ ವಿಜ್ಞಾನಿ ಇವರು, ಇವರ ನಂತರ ಹಲವಾರು ವಿಜ್ಞಾನಿಗಳು ಪಾರಿತೋಷಕಗಳಿಸಿದÀರೂ ಅವರು ವಿದೇಶಿ ಪ್ರಜೆಗಳಾಗಿ ಇಲ್ಲವೆ ವಿದೇಶಿ ನೆಲದಲ್ಲಿ ಜಂಟಿಯಾಗಿ ಸಂಶೋಧನೆ ಮಾಡಿ ಪಡೆದಿದ್ದಾರೆ.

    ಈ ದೇಶ ಹಲವಾರು ವಿಜ್ಞಾನಿಗಳನ್ನ ಕಂಡಿದೆ ಆದರೆ ಸಮಾಜ ವಿಜ್ಞಾನಿಗಳು ಕೆಲವರು ಮಾತ್ರ ಅವರುಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯ, ಆಚಾರ್ಯ ಪಿ.ಸಿ.ರೇ, ಮೇಘನಾದ ಸಹಾ ಹಾಗೂ ಸರ್.ಸಿ.ವಿ. ರಾಮನ್ ಈ ದೇಶದ ಆರ್ಥಿಕ, ಶೈಕ್ಷಣಿಕ ಹಾಗೂ ಕೈಗಾರಿಕಾಬ್ಯುದಯದ ಆಧಾರ ಸ್ಥಂಬಗಳು.
    ಸಿ.ವಿ.ರಾಮನ್ ವಿಜ್ಞಾನಿಗಳಿಗೆ ಕೇವಲ ವಿಜ್ಞಾನಿಯಾಗಿರದೆ ಸಮಾಜ ವಿಜ್ಞಾನಿಗಳಾಗಿ ಎಂದು ಕರೆನೀಡಿ ಸಮಾಜದ ಅಬ್ಯುದಯಕ್ಕೆ ಸಂಶೋಧನಾ ಕೇಂದ್ರಗಳನ್ನು ತೆರೆಯುವಲ್ಲಿ ಬಹಳಷ್ಟು ಶ್ರಮಿಸಿದರು.

    ಬಹುಮುಖ ವ್ಯಕ್ತಿತ್ವದ ಚಂದ್ರಶೇಖರ ವೆಂಕಟರಾಮನ್ 1888ರ ನವೆಂಬರ್ 7ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಅಧ್ಯಾಪಕರ ಮಗನಾಗಿ ಜನಿಸಿ ಹದಿನಾರು ವರ್ಷ ತುಂಬುವುದೊರಳಗಾಗಿ ಬಿ.ಎ.ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದರು, ಹತ್ತೊಂಬತ್ತು ವರ್ಷ ತುಂಬುವುದರೊಳಗೆ ಒಂದು ಸಂಶೋಧನಾ ಪ್ರಬಂಧ ಬರೆದು ಲಂಡನ್ನಿನ ಫಿಲಾಸಫಿಕಲ್ ಮ್ಯಾಗಝೈನ್‍ನಲ್ಲಿ ಪ್ರಕಟಿಸಿದರು, ಎಫ್.ಸಿ.ಎಸ್( ಫೈನಾನ್ಷಿಯಲ್ ಸಿವಿಲ್ ಸರ್ವಿಸ್) ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ ಇಪ್ಪತ್ತು ವರ್ಷ ತುಂಬುವುದರೊಳಗೆ(1905) ಭಾರತ ಸಕಾರದ ಹಿರಿಯ ಅಧಿಕಾರಿಯಾದರು. ತಮ್ಮ ಈ ಅತಿ ಒತ್ತಡ ಕೆಲಸದ ನಡುವೆಯೂ ಸಂಶೋಧನಾ ಕೆಲಸ ಮುಂದುವರೆಸಿದ ರಾಮನ್ (ನಮ್ಮಲ್ಲಿ ಅನೇಕ ಜನ ಕೇವಲ ಓದಲಿಕ್ಕೆ ಟೈಮೇ ಇಲ್ಲಾ ಆಂತಾರೆ) 1917ರಲ್ಲಿ ಕಲ್ಕತ್ತಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾಗಿ, 1924ರಲ್ಲಿ ಇಂಗ್ಲೇಂಡಿನ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು 1930ರಲ್ಲಿ ಬೆಳಕಿನ ಚದುರುವಿಕೆಯ ಕುರಿತು ನಡೆಸಿದ ಸಂಶೋಧನೆ ಜಗನ್ಮನ್ನಣೆ ಪಡೆದು ನೊಬೆಲ್ ಪಾರಿತೋಷಕಗಳಿಸಿತು ನಂತರ ರಾಯಲ್ ಸೊಸೈಟಿ ಸರ್ ಪದವಿ ಹಾಗೂ ಭಾರತ ಸರ್ಕಾರದ ಭಾರತ ರತ್ನ ಇವರ ಕೊರಳ ಬಳಸಿ ತಮ್ಮ ಗೌರವವನ್ನು ಹೆಚ್ಚಿಸಿಕೊಂಡವು. 1933ರಲ್ಲಿ ಬೆಂಗಳೂರಿಗೆ ಬಂದು ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಸೈನ್ಸ್(ಭಾರತೀಯ ವಿಜ್ಞಾನ ಮಂದಿರ) ಟಾಟಾರ ನೆರವಿನೊಂದಿಗೆ ಸ್ಥಾಪಿಸಿ ತಾವು ಗತಿಸುವವರೆಗೂ(1970) ಅದರ ಅಭಿವೃದ್ಧಿಯತ್ತ ತಮ್ಮ ಕಾಲ ಸವೆಸಿದರು.

    ಅಚಲ ವಿಶ್ವಾಸವುಳ್ಳ, ಅತ್ಯಂತ ಆತ್ಮವಿಶ್ವಾಸ ಬಲ ಹೊಂದಿದ್ದ ತ್ಯಾಗ ಮತ್ತು ಪರಿಶ್ರಮದ ಚೇತನ ರಾಮನ್ ಆಗಿದ್ದರು. ವಿದೇಶಕ್ಕೆ ಆಮಂತ್ರಣ ಬಂದಾಗ ತಾವು ಹೋಗಲೊಪ್ಪದೆ ಇಲ್ಲಿಯೇ ತಳವೂರಿ ಸಂಶೋಧನೆ ಆರಂಬಿಸಿದರು. ತಮ್ಮ ಸಂಶೋಧನೆಗೆ ವಿದೇಶಿಯರ ಅಂಗೀಕಾರದ ಅಗತ್ಯ ಇಲ್ಲ ಎಂದು ಖಚಿತ ನಿಲುವು ತಳೆಯುವ ಮೂಲಕ ತಮ್ಮ ದೇಶೀಯ ಸ್ವಾಭಿಮಾನವನ್ನು ಪ್ರದರ್ಶಿಸಿದರು ವಿದೇಶಕ್ಕೆ ಹಾರಲು ತುದಿಗಾಲಿನಲ್ಲಿ ನಿಂತಿರುವ ನಮ್ಮ ಈಗಿನ ಪ್ರತಿಭೆಗಳಿಗೂ ಇವರಿಗೂ ಎಷ್ಟು ಅಂತರ ಅಲ್ಲವೆ?

    ರಾಮನ್ ಕಡಿಮೆ ಎಂದರೆ ನೂರುಬಾರಿ ನನಗೆ ನೊಬೆಲ್ ಬಹುಮಾನ ಬಂದೇ ಬರುತ್ತದೆ ಎಂದು ಜಗಜ್ಜಾಹೀರು ಪಡಿಸಿದ್ದರು ಆದರೆ ಅವರ ಮಾತಿಗೆ ಅವರ ಆಪ್ತರು ಅಪಹಾಸ್ಯ ಮಾಡುತ್ತಿದ್ದರು ಆದರೂ ಅದನ್ನು ನಿರೂಪಿಸಲು ಹೊರಟಾಗ ನೊಬೆಲ್ ಬಹುಮಾನ ತರುತ್ತೇನೆ ಎಂದು ಹೇಳಿಯೇ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದರು ಅಷ್ಟು ಆತ್ಮ ವಿಶ್ವಾಸವಿತ್ತು ಅವರಿಗೆ ಅವರ ಸಂಶೋಧನೆಯ ಮೇಲೆ ಆದರೆ ಆ ಪಾರಿತೋಷಕವನ್ನು ಬ್ರಿಟೀಷ್ ಧ್ವಜದಡಿಯಲ್ಲಿ ಪಡೆಯಬೇಕಾಗಿ ಬಂದಂತಹ ಅನಿವಾರ್ಯತೆಗೆ ಅವರಲ್ಲಿ ವಿಷಾದ ಕೊನೆಯವರೆಗೂ ಇತ್ತು ಇದು ಅವರ ವೈಯುಕ್ತಿಕ ವಿಜಯದಲ್ಲೂ ದೇಶಕ್ಕೊಂದು ಸ್ಥಾನವಿಲ್ಲದ ಬಗ್ಗೆ ಕೊರಗು ರಾಮನ್ನರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
    ರಾಮನ್ ಪ್ರಯೋಗಗಳಿಗೆ ಬಳಕೆ ಮಾಡಿದ ಉಪಕರಣಗಳನ್ನು ಬಹುತೇಕ ತಾವೇ ರೂಪಿಸಿಕೊಳ್ಳುತ್ತಿದ್ದರು ಹಾಗೂ ಸರಳವಾಗಿಯೂ ಇರುತ್ತಿತ್ತು ಅದರ ಬೆಲೆ ಕೇವಲ 150ರೂಗಳು ಮಾತ್ರ ಅಲ್ಲದೆ ಅವರೆಂದೂ ತಮ್ಮ ಸಂಶೋಧನೆಗಳ ಮೇಲೆ ಪೇಟೆಂಟ್ ಪಡೆಯಲೇ ಇಲ್ಲ. ಅತ್ಯಂತ ನಿಷ್ಠುರವಾದಿಯಾಗಿದ್ದ ರಾಮನ್ ಒಮ್ಮೆ ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ ಅನ್ನು ಉದ್ಘಾಟಿಸಲು ಪ್ರಧಾನ ಮಂತ್ರಿಯನ್ನು ಆಹ್ವಾನಿಸಬೇಕೆಂದು ಬೇರೆ ವಿಜ್ಞಾನಿಗಳು ಅಭಿಪ್ರಾಯ ಪಟ್ಟಾಗ ಅದನ್ನು ಬಲವಾಗಿ ಖಂಡಿಸಿ ವಿರೋಧಿಸಿದಾಗ ಅವರ ಮಾತಿಗೆ ಬೆಲೆಸಿಗದಿದ್ದಾಗ ವಿಜ್ಞಾನ ಕಾಂಗ್ರೇಸ್‍ಗಳಿಗೆ ಹೋಗುವುದನ್ನೇ ಬಿಟ್ಟರು ರಾಮನ್ನರಿಲ್ಲದ ವಿಜ್ಞಾನ ಕಾಂಗ್ರೇಸ್ ಇಂದಿನ ಸಾಹಿತಿಗಳಿಲ್ಲದ ಸಾಹಿತ್ಯ ಸಮ್ಮೇಳನದಂತಾಯಿತು.

    ರಾಮನ್ನರಿಗೆ ಜಗನ್ಮನ್ನಣೆ ತಂದು ಕೊಟ್ಟ ಸಂಶೋಧನೆಯ ಸಾರವೇನು?

    ಬೆಳಗಿನ ಬಿಸಿಲು ಕೋಲಿನಲ್ಲಿ ಧೂಳಿನ ಕಣಗಳು ಮಿನುಗುತ್ತಾ ತೇಲಾಡುತ್ತಿರುವುದನ್ನು ಕಾಣುತ್ತೇವೆ, ಅಂದರೆ ಆ ಧೂಳೀನ ಕಣಗಳು ಬೆಳಕನ್ನು ಚದುರಿಸುತ್ತವೆ ಎಂದಾಯಿತು ಹಾಗೆ ಚದುರಿದ ಬೆಳಕು ನಮ್ಮ ಕಣ್ಣನ್ನು ತಲುಪುವುದರಿಂದ ಕಣಗಳು ನಮಗೆ ಕಾಣಿಸುತ್ತವೆ. ನಮ್ಮ ವಾತಾವರಣದಲ್ಲಿ ಧೂಳಿನ ಕಣಗಳು ಸೂಕ್ಷ್ಮಾತಿ ಸೂಕ್ಷ್ಮ ಆಮ್ಲಜನಕ, ಸಾರಜನಕದ ಕಣಗಳು ಸೂರ್ಯನ ಕಿರಣವನ್ನು ಚದುರಿಸಬಲ್ಲವು ಸೂರ್ಯನ ಬಿಳಿ ಬಣ್ಣ ನೀಲಿಯಿಂದ ಕೆಂಪಿನವರೆಗೆ ಏಳು ಬಣ್ಣಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುತ್ತದೆ ಅದರಲ್ಲಿನ ನೀಲಿ ಹಾಗೂ ನೇರಳೆ ಬಣ್ಣಗಳನ್ನು ಧೂಳಿನ ಕಣಗಳು ಹೆಚ್ಚಾಗಿ ಚದುರಿಸುತ್ತವೆ, ಕಿತ್ತಳೆ ಹಾಗೂ ಕೆಂಪು ಬಣ್ಣಗಳನ್ನು ಕಡಿಮೆ ಚದುರಿಸುತ್ತವೆ, ನೀಲಿ ಬಣ್ಣ ಹೆಚ್ಚು ಚದುರುವುದರಿಂದ ಆಕಾಶ ನೀಲಿಯಾಗಿ ಕಾಣುತ್ತದೆ. ಬೆಳಕು ಹೆಚ್ಚಾಗಿ ಚದುರಲಿ ಅಥವ ಕಡಿಮೆ ಚದುರಲಿ ಈ ಎರೆಡೂ ಸಂದರ್ಬಗಳಲ್ಲಿ ಚದುರಿದ ಬೆಳಕಿನ ಬಣ್ಣ ಬದಲಾಯಿಸುವುದಿಲ್ಲ ಚದುರಿ ಬಂದ ಬೆಳಕು ಅದೇ ಬಣ್ಣದ್ದಾಗಿರುತ್ತದೆ ಈ ಬಗೆಯ ಚದುರುವಿಕೆಯನ್ನು ಬ್ರಟಿಷ್ ವಿಜ್ಞಾನಿ ರಾಲೆ ಕಂಡು ಹಿಡಿದ ಅದಕ್ಕಾಗಿ ಇದಕ್ಕೆ ರಾಲೆ ಚದುರಿಕೆ (ರಾಲೆ ಎಫೆಕ್ಟ್) ಎಂದು ಹೆಸರು.

    ಅನಿಲದ ಅಥವ ದ್ರಾವಣದ ಅಣುಗಳ ಮೇಲೆ ಬೀಳುವ ಬೆಳಕಿನ ಬಹುಭಾಗ ರಾಲೆ ಚದುರಿಕೆಗೆ ಒಳಗಾಗುವುದಾದರೂ ಅದರ ಸ್ವಲ್ಪ ಭಾಗ ಮಾತ್ರ ಬೇರೊಂದು ಬಗೆಯ ಚದುರಿಕೆಗೆ ಒಳಗಾಗುತ್ತದೆ ಆಗ ಚದುರಿದ ಬೆಳಕು ಬಣ್ಣವನ್ನು ಬದಲಾಯಿಸುತ್ತದೆ ಆ ಬೆಳಕು ಮಸುಕಾಗಿರುವುದರಿಂದ ಕಾಣಿಸುವುದಿಲ್ಲ ಅದಕ್ಕೆ ತಕ್ಕ ಸಲಕರಣೆಗಳನ್ನು ತಯಾರಿಸಿ ಮೊದಲ ಬಾರಿಗೆ 1928ರಲ್ಲಿ ರಾಮನ್ ತೋರಿಸಿದರು ಈ ಬಗೆಯ ಚದುರುವಿಕೆಗೆ ರಾಮನ್ ಚದುರಿಕೆ, ಚದುರಿಕೆಯ ಪರಿಣಾಮವಾಗಿ ಬಣ್ಣ ಬದಲಾಯಿಸುವುದಕ್ಕೆ ರಾಮನ್ ಪರಿಣಾಮ(ರಾಮನ್ ಎಫೆಕ್ಟ್) ಎಂದು ಹೆಸರು ಬಂತು. ಈ ಸಂಶೋಧನೆ ಬೆಳಕಿನ ಕಿರಣಗಳ ಚಲನೆಗೆ ಕ್ರಿಶ್ಚಿಯನ್ ಹೈಗೆನ್ಸ್, ನ್ಯೂಟನ್ ಮತ್ತು ಮ್ಯಾಕ್ಸ್ ಫ್ಲಾಂಕರ ನಡುವೆ ತಿಕ್ಕಾಟ ನಡೆಯುತ್ತಿದ್ದಾಗ ಸಹಾಯಕ್ಕೆ ಬಂದಿತು. ಅದೇನೆಂದರೆ ಬೆಳಕಿನ ಕಿರಣ ಎಂಬುದು ಕಣಗಳು ವೇಗವಾಗಿ ಚಲಿಸುತ್ತಿರುವ ಪ್ರವಾಹ ಎಂದು ನ್ಯೂಟನ್ ಅಭಿಪ್ರಾಯ ಪಟ್ಟ ಆದರೆ ಆತನ ಸಮಕಾಲೀನ ವಿಜ್ಞಾನಿ  ಹೈಗೆನ್ಸ್ ಬೆಳಕು ಅಲೆರೂಪದ ಪ್ರವಾಹ ಎಂದ ಬಹು ಕಾಲ ಕಣ ಮತ್ತು ಅಲೆ ಸಿದ್ಧಾಂತಗಳ ನಡುವೆ ಸಂಘರ್ಷ ಏರ್ಪಟ್ಟು 19ನೇ ಶತಮಾನದಂಚಿನ ವೇಳೆಗೆ ವಿಜ್ಞಾನಿಗಳು ಹೈಗೆನ್ಸ್‍ನ ಅಭಿಪ್ರಾಯವನ್ನು ಎತ್ತಿ ಹಿಡಿದರು.

    ಒಂದು ಕೊಳಕ್ಕೆ ಕಲ್ಲೆಸೆದರೆ ಅಲೆಗಳು ಉಂಟಾಗಿ ಚಲಿಸಲಾರಂಬಿಸುತ್ತದೆ ಆ ಚಲನಾ ಹಾದಿಗೆ ಏನಾದರು ಅಡ್ಡ ಬಂದರೆ ಆ ಅಡಚಣೆಯ ಎರೆಡೂ ಬದಿಗಳಲ್ಲಿ ಅಲೆ ಬಾಗಿ ಮುಂದುವರೆಯುವುದನ್ನು ನೋಡಬಹುದು ಹಾಗೆಯೇ ಶಬ್ದದ ಅಲೆಗಳೂ ಕೂಡ ಅಡಚಣೆಯ ಅಂಚಿನಲ್ಲಿ ಬಾಗಿ ಮುಂದುವರೆಯುವುದರಿಂದ ಗೋಡೆ ಆಚೆ ಮಾತನಾಡುವವರ ಧ್ವನಿ ನಮಗೆ ಕೇಳಿಸುವುದು. ಬೆಳಕೂ ಕೂಡ ಈ ಮಾದರಿಯ ಲಕ್ಷಣವನ್ನು ಪ್ರಯೋಗ ಮಾಡಿದಾಗ ತೋರಿ ಬಂದದ್ದರಿಂದ ಅಲೆ ಸಿದ್ಧಾಂತಕ್ಕೆ ಮನ್ನಣೆ ನೀಡಿದರು.

    ಆದರೆ ಜರ್ಮನ್ ಭೌತವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಈ ಎರೆಡೂ ಸಿದ್ಧಾಂತಗಳು ಸರಿ ಆದರೆ ಪೂರ್ಣ ಸತ್ಯವಲ್ಲ ಎಂದು ಅಭಿಪ್ರಾಯ ಪಟ್ಟರು. ಸೂರ್ಯನಿಂದ ಶಕ್ತಿ ಶಾಖ ಹಾಗೂ ಬೆಳಕಿನ ರೂಪದಲ್ಲಿ ಹೊರಸೂಸುತ್ತದೆ ಆದರೆ ಈ ಶಕ್ತಿ ಅವಿಚ್ಛಿನ್ನವಾಗಿ ಹೊರಸೂಸದೆ ಬಿಡಿ ಬಿಡಿಯಾದ ಪೊಟ್ಟಣಗಳಾಗಿ ( ಬೆಂಕಿ ಪೊಟ್ಟಣದ ಬಂಡಲಿನಿಂದ ಬೆಂಕಿ ಪೊಟ್ಟಣಗಳು ಹೊರತೆಗೆದಂತೆ) ಹೊರಸೂಸುವುದೆಂದು ಪ್ರಾಯೋಗಿಕಾವಾಗಿ ತಿಳಿಸಿದರು ಶಕ್ತಿಯ ಅಂತಹ ಪೊಟ್ಟಣಗಳಿಗೆ ಕ್ವಾಂಟಮ್ ಎಂದು ಕರೆದರು. ಆದರೆ ಈ ಸಿದ್ದಾಂತವನ್ನು ಸಾಬೀತುಮಾಡಲು ಪರದಾಡುತ್ತಿದ್ದಾಗ ರಾಮನ್ ಪರಿಣಾಮ ಸಹಾಯಕ್ಕೆ ಬಂತು. ಅಲೆ ರೂಪದ ಬೆಳಕು ಕ್ವಾಂಟಮ್ ರೂಪದಲ್ಲಿ ಬರಲು ಬೆಳಕಿನ ರಶ್ಮಿ ಅಣುಗಳ ಮೇಲೆ ಚದುರಿದಾಗ ಬಣ್ಣ ಬದಲಾಯಿಸುವದೇ ಕಾರಣ ಎಂದು ಬಯಲಾಯಿತು.

    ಈ ಮೂರೂ ಸಿದ್ಧಾಂತಗಳು ಒಂದಕ್ಕೊಂದು ಪೂರಕ ಎಂದು ತೀರ್ಮಾನಿಸಿ ಅಂತಿಮವಾಗಿ ಕ್ವಾಂಟಮ್ ಸಿದ್ಧಾಂತ ಬೆಳಕು ಕಂಡು ಭೌತ ಪ್ರಪಂಚಕ್ಕೆ ಕ್ರಾಂತಿಕಾರಿ ತಿರುವು ಕೊಡಲು ರಾಮನ್ ಪರಿಣಾಮ ಮಹತ್ತರ ಪಾತ್ರವಹಿಸಿತು.

    ರಾಮನ್ನರ ಸಂಶೋಧನೆ ಪ್ರಕಟಗೊಂಡ ಹತ್ತು ವರ್ಷಗಳಲ್ಲಿ ರಾಮನ್ನರ ಪರಿಣಾಮದ ಮೇಲೆ ಎರೆಡು ಸಾವಿರ ಸಂಶೋಧನೆಗಳು ಪ್ರಕಟಗೊಂಡವು ರಾಮನ್ ಗತಿಸುವ ವೇಳೆಗೆ ಆ ಸಂಖ್ಯೆ ಸಹಜವಾಗಿಯೇ ಹತ್ತು ಸಾವಿರ ದಾಟಿತ್ತು. ವಿಜ್ಞಾನ ಕ್ಷೇತ್ರಕ್ಕೆ ವಿಜ್ಞಾನಿಯೊಬ್ಬನ ಕೊಡುಗೆಯ ವಿಷಯ ಬಂದಾಗ ಆತನ ಸಂಶೋಧನೆ ಸೋದರ ವಿಜ್ಞಾನಿಗಳ ಮೇಲೆ ಹಾಗೂ ಪ್ರಪಂಚದ ಒಟ್ಟು ವಿಜ್ಞಾನದ ಬೆಳವಣಿಗೆಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿರುತ್ತದೆ ಎನ್ನುವುದಾಗಿರುತ್ತದೆ ಈ ದಿಸೆಯಲ್ಲಿ ರಾಮನ್ನರ ಕೊಡುಗೆ ರಾಮನ್ ಪರಿಣಾಮದಷ್ಟೇ ದೊಡ್ಡದು.

    ಅರಿಸ್ಟಾಟಲ್ ಕಾಲದ ವಿಜ್ಞಾನಿಗಳ ಧೋರಣೆಗಳಿಗೂ ಇಂದಿನ ಕಾಲದ ವಿಜ್ಞಾನಿಗಳ ಧೋರಣೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ನಿಸರ್ಗದ ಗುರಿ ನಿಸರ್ಗದ ವಿದ್ಯಮಾನಗಳನ್ನು ಗುರುತಿಸಿ, ಅರಿತು ಅರ್ಥೈಸುವ ಆನಂದದಾಯಕ ಚಟುವಟಿಕೆ. ಅಂದಿನ ವಿಜ್ಞಾನಿಗಳನ್ನು ನೈಸರ್ಗಿಕ ವಿಜ್ಞಾನಿಗಳು ಹಾಗೂ ಸೈದ್ಧಾಂತಿಕ ವಿಜ್ಞಾನಿಗಳು ಆಗಿದ್ದರು ಇಂದಿನ ವಿಜ್ಞಾನಿಗಳ ಸಂಶೋಧನೆಗಳು ಮಿಲಿಟರಿ ಹಾಗೂ ವೈಯುಕ್ತಿಕ ಲಾಭಕ್ಕಾಗಿ ಮೀಸಲಾಗಿದೆ ಹಿಂದಿನ ವಿಜ್ಞಾನಿಗಳಿಗೆ ಇದ್ದ ಸ್ವಾತಂತ್ರ್ಯ, ಸರಳತೆ, ಆನಂದ ಮಾಯವಾಗಿ ವಾಣಿಜ್ಯೀಕರಣಗೊಂಡಿದ್ದಾರೆ ಈ ದಿಸೆಯಲ್ಲಿ ಪರಿಶೀಲಿಸಿದಾಗ ಸಿ.ವಿ.ರಾಮನ್ ಈ ಭೂಮಿ ಮೇಲಿನ ಕಟ್ಟ ಕಡೆಯ ನೈಸರ್ಗಿಕ ತತ್ವಜ್ಞಾನಿ ಎಂದು ಬಣ್ಣಿಸಲಾಗಿದೆ.
    ಜಗತ್ತು ವಾಣಿಜ್ಯೀಕರಣಗೊಳ್ಳುತ್ತಿರುವ ಮತ್ತು ಮಿಲಿಟರೀಕರಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಮನ್ನರು ಪ್ರತಿಪಾದಿಸಿದ ಧೋರಣೆ ಎಷ್ಟು ಅಮೂಲ್ಯ ಹಾಗೂ ಮೌಲಿಕವಾದುದು ಎಂದು ಗುರುತಿಸಬೇಕಾಗಿದೆ ಹಾಗೂ ಜಾತಿ ಧೃವೀಕರಣಗೊಂಡು ಗಲ್ಲಿ ಗಲ್ಲಿಗಳಲ್ಲಿ ಏಳುತ್ತಿರುವ ವ್ಯಾಪಾರಿ ದೇವಸ್ಥಾನಗಳ ಜಾಗದಲ್ಲಿ ವೈಜ್ಞಾನಿಕ ಸಂಶೋಧನೆಯ ವಿಜ್ಞಾನ ಮಂದಿರಗಳು ಬೆಳೆದು ಬರಲಿ ಎಂಬುದೇ ನಿಜವಾದ ಭಾರತೀಯರ ಆಶಯವಾಗಲಿ ಇದೇ ರಾಮನ್ನರಿಗೆ ಕೊಡುವ ಗೌರವ.

    Loading
    ಧ್ಯಾನ್ ಚಂದ್

    ಧ್ಯಾನ್ ಚಂದ್ ವಿಶ್ವ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯರು.  ಧ್ಯಾನ್ ಚಂದ್  ಜನಿಸಿದ್ದು ಆಗಸ್ಟ್ 29, 1905ರಲ್ಲಿ.  ಸ್ಥಳ ಉತ್ತರ ಪ್ರದೇಶದ ಪ್ರಯಾಗ.  ಅವರ ತಂದೆ ಭಾರತೀಯ ಬ್ರಿಟಿಷ್ ಸೈನ್ಯದಲ್ಲಿ ಹವಾಲ್ದಾರರಾಗಿದ್ದರು. 

    ಧ್ಯಾನ್ ಚಂದ್ ಶಾಲೆಯಲ್ಲಿ ಓದಿದ್ದು ಅತೀ ಕಡಿಮೆ.  ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು.  ಕ್ರೀಡೆಯಲ್ಲೂ ಅಂತಹ ವಿಶೇಷ ಪರಿಣತಿ ಇರಲಿಲ್ಲ.  ಸೈನ್ಯದಲ್ಲಿ ಸ್ನೇಹ ಪೂರ್ಣ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು.  ಈತ ಆಡುವ ಆಟದಲ್ಲಿ ಏನೋ ವಿಶೇಷವಿದೆ ಎಂದು ಕಂಡ ಸುಭೇದಾರ್ ಮೇಜರ್ ಭೋಲೇ ತಿವಾರಿ ಎಂಬುವರು ಧ್ಯಾನ್ ಚಂದ್ ಅವರಿಗೆ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗೆಗೆ ಉತ್ತಮ ತರಬೇತಿ ನೀಡಿದರು. 

    ಅಂದಿನ ಭಾರತೀಯ  ಸೈನ್ಯದಲ್ಲಿ  ಹಾಗೂ ವಿವಿಧ ವಲಯಗಳ  ತಂಡಗಳ ಮಟ್ಟದಲ್ಲಿ ಆಡತೊಡಗಿದ ಧ್ಯಾನ್ ಚಂದ್,  ಹಲವು ಅಂತರರಾಷ್ಟ್ರೀಯ ಪಂದ್ಯಗಳ ಬಳಿಕ ಒಲಿಂಪಿಕ್ಸ್ ಪಂದ್ಯಾವಳಿಗೆ ತಲುಪಿ ತಾವು  ಆಡಿದ ಮೂರೂ ಒಲಿಂಪಿಕ್ಸ್ ಕ್ರೀಡೆಗಳಲ್ಲೂ ಭಾರತಕ್ಕೆ ಚಿನ್ನದ ಪದಕ ದೊರಕುವಲ್ಲಿ ಮಹತ್ತರವಾದ ಪಾತ್ರ ವಹಿಸಿದರು.

    ಆಡಿದ ಮೂರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಒಟ್ಟು ಹನ್ನೆರಡು ಪಂದ್ಯಗಳಲ್ಲಿ ಧ್ಯಾನ್ ಚಂದ್ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 33.

    ಧ್ಯಾನ್ ಚಂದ್ ಎಂಬ ಹೆಸರು ಒಂದು ರೀತಿಯಲ್ಲಿ ದಂತ ಕಥೆಯೇಆಗಿದೆ. ಆ ಕಾಲದಲ್ಲಿ ಫುಟ್ ಬಾಲ್ ಆಟದಲ್ಲಿ ಪೀಲೆ, ಕ್ರಿಕೆಟ್ಟಿನಲ್ಲಿ ಡೊನಾಲ್ಡ್ ಬ್ರಾಡ್ ಮನ್ ಅವರ ಸಾಧನೆಗಳು ಎಂತಿವೆಯೋ ಅಂತದ್ದೇ ಮಟ್ಟದ ಹೆಸರು ಧ್ಯಾನ್ ಚಂದ್ ಅವರದ್ದು.

    ಅವರ ಬಗೆಗಿರುವ ಕೆಲವು ಕಥಾನಕಗಳು ಹೀಗಿವೆ. 

    ಒಮ್ಮೆ ಧ್ಯಾನ್ ಚಂದ್ ಅವರು ಆಡಿದ ಪಂದ್ಯದಲ್ಲಿ ಅವರಿಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲವಂತೆ.  ಕಡೆಗೆ ಧ್ಯಾನ್ ಚಂದ್ ಅವರು ಮ್ಯಾಚ್ ರೆಫರಿ ಅವರೊಂದಿಗೆ ವಾಗ್ವಾದ ಹೂಡಿ ನೇರವಾಗಿ “ಈ ಕ್ರೀಡಾಂಗಣದಲ್ಲಿ ಇರುವ 'ಗೋಲ್ ಪೋಸ್ಟ್' ಅಳತೆ ಅಸಮರ್ಪಕವಾದುದು, ಹಾಕಿ ಆಟದ ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ವ್ಯತಿರಿಕ್ತವಾದದ್ದು” ಎಂದು ನುಡಿದರಂತೆ.  ಧ್ಯಾನ್ ಚಂದ್ ಅವರ ಅಭಿಪ್ರಾಯವನ್ನು ಮನ್ನಿಸಿ ನಿಜವಾದ ಅಳತೆ ಮಾಡಿದಾಗ ಧ್ಯಾನ್ ಚಂದ್ ಅವರ ಅಭಿಪ್ರಾಯ ಅಕ್ಷರಷಃ ನಿಜವಾಗಿತ್ತು.

    1936ರ ಒಲಿಂಪಿಕ್ಸ್ ಪಂದ್ಯದಲ್ಲಿ  ಭಾರತ ತಂಡವು ಜಯಗಳಿಸಿದ ನಂತರದಲ್ಲಿ, ಎಲ್ಲೆಡೆಯಲ್ಲೂ ಧ್ಯಾನ್ ಚಂದ್ ಅವರ ಹಾಕಿ ಮಾಂತ್ರಿಕತೆಯ ಆಟ ಪ್ರಸಿದ್ಧಿ ಪಡೆದು, ಪ್ರೇಕ್ಷಕರು ಇವರ ಆಟ ನೋಡಲು ಮುಗಿಬೀಳುತ್ತಿದ್ದರು.  ಒಂದು ಜರ್ಮನ್ ಪತ್ರಿಕೆ ನೀಡಿದ ವರದಿ ಹೀಗಿತ್ತು.  "ಹಾಕಿ ಆಟ ಇದೀಗ ಮ್ಯಾಜಿಕ್ ಷೋ ಕೂಡಾ ಆಗಿದೆ.  ಭಾರತೀಯ ಹಾಕಿ ಆಟದ ಮ್ಯಾಜಿಕ್ ವ್ಯಕ್ತಿಯಾದ  ಧ್ಯಾನ್ ಚಂದ್ ಅವರ ಆಟ ನೋಡಲಿಕ್ಕೆ ಇಂದು ಹಾಕಿ ಕ್ರೀಡಾಂಗಣಕ್ಕೆ  ತಪ್ಪದೆ ಬನ್ನಿ".

    ಬರ್ಲಿನ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಧ್ಯಾನ್ ಚಂದ್ ಅವರ ಆಟ ಕಂಡ ಅಡೋಲ್ಫ್ ಹಿಟ್ಲರ್ ಧ್ಯಾನ್ ಚಂದ್ ಅವರಿಗೆ ಜರ್ಮನಿ ತಂಡದ ಪರವಾಗಿ ಆಡಲು ನೀಡಿದ ಪ್ರಲೋಭನೆಗಳೆಂದರೆ "ಬ್ರಿಟಿಷ್ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ, ಕೊಲೋನೆಲ್ ಗೌರವದ ಕೊಡುಗೆ.  ಆದರೆ ಇದನ್ನು ಧ್ಯಾನ್ ಚಂದರು ಸ್ವೀಕರಿಸಲಿಲ್ಲ.   

    ಕ್ರಿಕೆಟ್ ಆಟದ ಸಾರ್ವಕಾಲಿಕ ತಾರೆ ಡಾನ್ ಬ್ರಾಡ್ ಮನ್,  ಒಮ್ಮೆ ಅಡಿಲೈಡ್ ನಲ್ಲಿ ಧ್ಯಾನ್ ಚಂದ್ ಅವರನ್ನು ಮುಖಾ ಮುಖಿಯಾದಾಗ ಕೇಳಿದರಂತೆ "ಏನಪ್ಪಾ, ನಾವು ಕ್ರಿಕೆಟ್ನಲ್ಲಿ ರನ್ ಬಾರಿಸುವಂತೆ ನೀನು ಗೋಲುಗಳನ್ನು ಬಾರಿಸುತ್ತೀಯಲ್ಲ" ಎಂದು.

    ಧ್ಯಾನ್ ಚಂದ್ ಅವರಿಗೆ ಭಾರತದಲ್ಲಿ ಒಂದು ಪುತ್ಥಳಿ ಇರುವುದು ಏನೂ ವಿಶೇಷವಲ್ಲ ಬಿಡಿ.  ಅವರ ಪುತ್ಥಳಿಯನ್ನು ಮೊದಲು ಸ್ಥಾಪಿಸಿದ್ದು  ಆಸ್ಟ್ರಿಯಾದ ವಿಯೆನ್ನಾದಲ್ಲಿ ಎಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಸಿದ್ಧಿ ಎಷ್ಟಿತ್ತೆಂಬುದನ್ನು ಊಹಿಸಬಹುದಾಗಿದೆ. 

    ಹೀಗೆ ಭಾರತದ ಒಬ್ಬ ಆಟಗಾರ ತನ್ನ ಮಹೋನ್ನತ ಸಾಧನೆಗಳಿಂದ ದಂತಕತೆಯಾಗಿರುವುದು ಭಾರತೀಯರಿಗೆಲ್ಲಾ ಮಹೋನ್ನತವಾದ ಹೆಮ್ಮೆ.  ಒಂದು ದುರದೃಷ್ಟವೆಂದರೆ,  ಆ ನಂತರದ ತಲೆಮಾರಿನವರು ಅಂತಹ ಆಟಗಾರನನ್ನು ಕಾಣಲಾಗದಿದ್ದುದು.  ಅವರು 1979ರ ಡಿಸೆಂಬರ್ 3ರಂದು ನಿಧನರಾದರು. 

    ಈ ಮಹಾನ್ ಹಾಕಿ ಗಾರುಡಿಗರಿಗೆ ನಮ್ಮ ನಮನ.


    ಟಿ ಆರ್ ಅನಂತರಾಮು

    ಕನ್ನಡ ಭಾಷೆಯಲ್ಲಿನ  ವೈಜ್ಞಾನಿಕ ಬರವಣಿಗೆಗಳಲ್ಲಿ  ಕಳೆದ ನಾಲ್ಕು  ದಶಕಗಳಿಗೂ ಹೆಚ್ಚು ಕಾಲದಿಂದ  ಗಣನೀಯ ಸೇವೆಯ ಕೊಡುಗೆ ನೀಡುತ್ತಾ ಬಂದಿರುವ ಡಾ. ತಾಳಗುಂದ ರಾಮಣ್ಣ ಅನಂತರಾಮು ಅವರು ಆಗಸ್ಟ್ 30, 1949ರಂದು ಶಿರಾ ತಾಲ್ಲೂಕಿನ ತಾಳಗುಂದದಲ್ಲಿ ಜನಿಸಿದರು.  1972ರ ವರ್ಷದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಟಿ. ಆರ್ ಅನಂತರಾಮು ಅವರು   ಮೊದಲಿಗೆ ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಸೂರತ್ಕಲ್ಲಿನಲ್ಲಿ ಅಧ್ಯಾಪಕರಾಗಿ  ಭೂ-ವಿಜ್ಞಾನವನ್ನು ಬೋಧಿಸಿ, ನಂತರದಲ್ಲಿ 31 ವರ್ಷಗಳ ಸುದೀರ್ಘ ಅವಧಿಯವರೆಗೆ ಭಾರತೀಯ ಭೂ-ವಿಜ್ಞಾನ ಸರ್ವೇಕ್ಷಣ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿ ಸೇವೆ ಸಲ್ಲಿಸಿ 2008ರ ವರ್ಷದಲ್ಲಿ ಸೇವೆಯಿಂದ ನಿವೃತ್ತರಾದರು. 

    ಟಿ. ಆರ್. ಅನಂತರಾಮು ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ,  ಜನಪ್ರಿಯ, ಅಂಕಣಕಾರ, ವಿಜ್ಞಾನ ಲೇಖಕರು ಮತ್ತು ಸಂಪಾದಕರು. ವಿವಿಧ  ಪತ್ರಿಕೆಗಳಲ್ಲಿ ವಿಜ್ಞಾನ ಸಂಬಂಧಿತವಾದ ಸಾವಿರಕ್ಕೂ ಹೆಚ್ಚು ವಿಚಾರಪೂರ್ಣ ಲೇಖನಗಳನ್ನು ಅವರು ಬರೆದಿದ್ದಾರೆ.   ಐವತ್ತಕ್ಕೂ ಹೆಚ್ಚು ಸಂಖ್ಯೆಯ ಗ್ರಂಥಗಳನ್ನು ರಚಿಸಿದ್ದಾರೆ.   ಸಾಮಾನ್ಯ ಓದಿಗೆ ನಿಲುಕದ್ದು  ಎನಿಸಬಹುದಾದಂತಹ ವೈಜ್ಞಾನಿಕ ಚಿಂತನೆಗಳನ್ನೂ  ಆಸಕ್ತಿ ಹುಟ್ಟಿಸುವಂತೆ  ಜನರಿಗೆ  ಉಣಬಡಿಸುತ್ತಿರುವ  ಟಿ.ಆರ್.ಅನಂತರಾಮು ಅವರು   ’ಕನ್ನಡ ವಿಶ್ವಕೋಶ’, ’ಜ್ಞಾನ-ವಿಜ್ಞಾನ ಕೋಶ', 'ಕಿರಿಯರ ಕರ್ನಾಟಕ, ಕರ್ನಾಟಕ ಸಂಗಾತಿ', 'ಕರ್ನಾಟಕ ಕೋಶ’, ‘ವಿಜ್ಞಾನ-ತಂತ್ರಜ್ಞಾನ ನಿಘಂಟು’ ಮುಂತಾದ ಪರಾಮರ್ಶಿಕ ಗ್ರಂಥಗಳನ್ನು ಕನ್ನಡದಲ್ಲಿ ತಂದವರು. ಜಿ. ಟಿ. ಎನ್ ಅಂತಹ ಹಿರಿಯ ವಿದ್ವಾಂಸರ  ಮೆಚ್ಚುಗೆಗೆ ಪಾತ್ರರಾದವರು.  ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ಹಿಮದ ಸಾಮ್ರಾಜ್ಯ’, ‘ಕರ್ತಾರನಿಗೊಂದು ಕಿವಿ ಮಾತು’, ‘ಪಶ್ಚಿಮ ಮುಖಿ’ ಕೃತಿಗಳಿಗೆ  ಪ್ರಶಸ್ತಿಗಳು, 'ವಿಜ್ಞಾನದ ಹೆದ್ದಾರಿಯಲ್ಲಿನ ಮಹಾತಿರುವುಗಳು' ಕೃತಿಗೆ ನವದೆಹಲಿಯ ಪ್ರಕಾಶಕರ ಒಕ್ಕೂಟದ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿ,  ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿ,   ವಿಜ್ಞಾನ ಶಿಕ್ಷಕರು ಮತ್ತು ಸಂವಹಕರಿಗೆ ನೀಡಲಾಗುವ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರತಿಷ್ಠಾನ ಪ್ರಶಸ್ತಿ, ಪರಿಸರ ಸಂರಕ್ಷಣೆಗಾಗಿನ ಪತ್ರಿಕೋದ್ಯಮ ಪ್ರಶಸ್ತಿ, ತುಮಕೂರು  ವಿಶ್ವವಿದ್ಯಾಲಯದ  ಗೌರವ  ಡಾಕ್ಟೊರೇಟ್, ಶಿರಾ  ತಾಲ್ಲೂಕು  ಕನ್ನಡ  ಸಾಹಿತ್ಯ ಸಮ್ಮೇಳನದ  ಅಧ್ಯಕ್ಷತೆ   ಮುಂತಾದ ಅನೇಕ ಗೌರವಗಳು ಅನಂತರಾಮು ಅವರಿಗೆ ಸಂದಿವೆ. 

    'ಕನ್ನಡದಲ್ಲಿ ಭೂವಿಜ್ಞಾನ ಸಾಹಿತ್ಯ'. ’ಎಂ. ಎಸ್. ಕೃಷ್ಣನ್’, 'ಭೂಮಿಯ ಅಂತರಾಳ', ’ಬಿಸಿನೀರಿನ ಬುಗ್ಗೆಗಳು’, ’ಬದಲಾಗುತ್ತಿರುವ ಭೂಮಿ’, ’ಹಿಮದ ಸಾಮ್ರಾಜ್ಯದಲ್ಲಿ’,  ’ಭೂಮಿಯ ವಯಸ್ಸು’,  ’ಭೂಗರ್ಭ ಯಾತ್ರೆ’,  ’ಬೆಳೆಯುತ್ತಿರುವ ಹಿಮಾಲಯ’,  ’ರಾಜರ ಲೋಹ-ಲೋಹಗಳ ರಾಜ: ಚಿನ್ನ’,   ’ಜ್ವಾಲಾಮುಖಿ’,  ’ಪೆಡಂಭೂತಗಳು ಅಳಿದವೇಕೆ?’,  ’ವಿಶ್ವವಿಖ್ಯಾತ ನೈಸರ್ಗಿಕ ವಿಕೋಪಗಳು’,  'ರತ್ನಗಳು’,  ’ಭೂಕಂಪನಗಳು’,  ’ಮಳೆ’, ’ಆಲ್ಫ್ರೆಡ್ ವೆಗೆನರ್ ಕನ್ನಡ ಪುಸ್ತಕ’,  ’ಸಂಪನ್ಮೂಲಗಳಿಗಾಗಿ ಸಮುದ್ರ ಮಥನ’,  ’ನಮ್ಮ ಜಲ ಸಂಪನ್ಮೂಲಗಳು’,  ’ಪೆಡಂಭೂತಗಳು ಮಕ್ಕಳ ಸಚಿತ್ರಕೋಶ’,  ’ಪ್ರಿ ಹಿಸ್ಟಾರಿಕ್ ಅನಿಮಲ್ಸ್’,  ’ಕಾವೇರಿ ಹರಿದು ಬಂದು ದಾರಿ’,  ’ಭೂವಿಜ್ಞಾನ’ ,  ’ಅಂಟಾರ್ಕ್ ಟಿಕ್ ನಿರ್ದೇಶನಾಲಯ’,  ’ಚೌಚೌ ಚಾಕಿ’,  ’ಕಾಲಗರ್ಭಕ್ಕೆ ಕೀಲಿಕೈ’,  ’ಪ್ರಾಚೀನ ಭಾರತದಲ್ಲಿ ಲೋಹ ತಂತ್ರಜ್ಞಾನ’,  ’ಪೆಟ್ರೋಲ್’ , ’ವರಾಹಮಿಹಿರ’,  ’ಬಾನಂಗಳದ ಬತ್ತಳಿಕೆಯಲ್ಲಿ’,  ’ತ್ರಿವಿಕ್ರಮ ಹೆಜ್ಜೆಗಳು’,  ’ವಿಸ್ಮಯಗಳ ನಾಡಿನಲ್ಲಿ’,  ’ಬೀರ್ಬಲ್ ಸಾಹ್ನಿ’,  ’ಶಕ್ತಿಸಾರಥಿ ರಾಷ್ಟ್ರಪತಿ : ಅಬ್ದುಲ್ ಕಲಾಂ’,  ’ಸೃಷ್ಟಿವಾದಿಗಳ ಮುಷ್ಟಿಯಲ್ಲಿ ಡಾರ್ವಿನ್’,  ’ಕರ್ತಾರನಿಗೊಂದು ಕಿವಿಮಾತು’, ’ಪರಿಸರಸ್ಥಿತಿ ವರದಿ ಮತ್ತು ಕಾರ್ಯಯೋಜನೆ’,  ’ಸರಸ್ವತೀ ನದಿ’,  ’ದಿವ್ಯನೇತ್ರ’,  ’ಅಮೂಲ್ಯ ರೆಡ್ಡಿ’,  ’ದಣಿಯಿಲ್ಲದ ಧರಣೆ’,  ’ಸುನೀತಾ ವಿಲಿಯಮ್ಸ್’(ಅನುವಾದ), ’ಪಶ್ಚಿಮಮುಖಿ’(ಪ್ರವಾಸಕಥನ), ’ಲೋಹವಿದ್ಯಾಪಲಾರಂಗತ’ ,  ’ತಂತ್ರಪ್ರಪಂಚದಲ್ಲಿ ನ್ಯಾನೋ ಮಂತ್ರ’,  ’ಋಷಿನಮನ’,  ’ಅಂಟಾರ್ಕ್ಟಿಕ ಕಥೆ’,  ’ಸರ್ ಎಂ. ವಿಶ್ವೇಶ್ವರಯ್ಯ’ : ’ಸಾಧಕನ ಹೆಜ್ಜೆಗಳು’,  ’ಡಾರ್ವಿನ್ ಕಂಡ ಗಲಪಗಾಸ್ ದ್ವೀಪ’,  ’ದೂರದರ್ಶಕ ಕಂಡ ವಿಶ್ವರೂಪ’, ‘ವಿಜ್ಞಾನ ಜಗತ್ತು ೨೦೧೦’,  ‘ಮರ್ಫಿ ಲಾ: ಏಕೆ ಎಲ್ಲವೂ ಉಲ್ಟಾಪಲ್ಟ?’, ಪ್ರೊ.ಎಚ್. ಆರ್. ರಾಮಕೃಷ್ಣ ರಾವ್ ಜೊತೆ ಗೂಡಿ 'ಕನ್ನಡದಲ್ಲಿ ವಿಜ್ಞಾನ ಸಂವಹನೆ', ಬಿ.ಜಿ.ಎಲ್ ಸ್ವಾಮಿ ಅವರ ವಿಶಿಷ್ಟ ಬರಹಗಳ ಸಂಕಲನ 'ಮೀನಾಕ್ಷಿಯ ಸೌಗಂಧ' ಮುಂತಾದ ಅನೇಕ  ಕೃತಿಗಳು  ಹಾಗೂ  ನಿರಂತರವಾಗಿ  ಹರಿದುಬರುತ್ತಿರುವ  ವಿವಿಧ  ನಿಯತಕಾಲಿಕೆಗಳು ಮತ್ತು  ಅಂತರಜಾಲ  ಮಾಧ್ಯಮಗಳಲ್ಲಿ ಹರಿದು ಬರುತ್ತಿರುವ  ಚಿಂತನ ಮತ್ತು ವಿದ್ವತ್ ಪೂರ್ಣ ಬರಹಗಳು ಅನಂತರಾಮು ಅವರಿಗಿರುವ ಆಳವಾದ ಅಧ್ಯಯನ, ಆಸಕ್ತಿ, ಪಾಂಡಿತ್ಯ ಮತ್ತು ವಿಶಾಲ ಹರವುಗಳ ದ್ಯೋತಕವಾಗಿದೆ.  ಇತ್ತೀಚಿನ ಮಳೆಯ ವಿಕೋಪದಲ್ಲಿ ಉಂಟಾದ ಹಾನಿಯನ್ನೂ ಒಳಗೊಂಡ ಹಾಗೆ ಎಲ್ಲ ಪ್ರಸಕ್ತ ಸನ್ನಿವೇಶಗಳಿಗೆ ನಮ್ಮ ಬದುಕಿನಲ್ಲಿರುವ ಅವೈಜ್ಞಾನಿಕತೆಯ ತುಲನೆಯಾಗಿ ಕಾಣುವ ಅವರ ವಿಶಿಷ್ಟ ಬರಹಗಳು ನಿರಂತರವಾಗಿ ತಮ್ಮ ಪ್ರಸ್ತುತತೆಯನ್ನು ಕಾದುಕೊಂಡು ಬಂದಿವೆ.

    ಅನೇಕ ಉಪನ್ಯಾಸ, ಕಮ್ಮಟಗಳ ನಿರ್ವಹಣೆಗಳ ಮುಖಾಂತರ ನಾಡಿನಾದ್ಯಂತ ವಿಜ್ಞಾನದ ಬರಹಗಳತ್ತ  ಮತ್ತು ಚಿಂತನೆಗಳತ್ತ ಯುವ ಜನಾಂಗವನ್ನು ಪ್ರೇರೇಪಿಸುತ್ತಾ ಅನಂತರಾಮು  ಅಪಾರ ಕೆಲಸ ಮಾಡುತ್ತಿದ್ದಾರೆ.  ತಮಗೆ  ಸಂದ  ಬಹಳಷ್ಟು  ಹಣಕಾಸಿನ  ರೂಪದ  ಬಹುಮಾನಗಳನ್ನು  ಪರಿಸರ  ಸಂರಕ್ಷಣೆಯ  ಉದ್ದೇಶಗಳಿಗೆ  ಕೊಡುಗೆಯಾಗಿ  ನೀಡಿದ್ದಾರೆ.  ಇಷ್ಟೊಂದು ಸಾಧಿಸಿದ್ದರೂ ಅತ್ಯಂತ ಸಜ್ಜನಿಕೆ ವಿಧೇಯತೆ, ಆತ್ಮೀಯತೆಗಳೊಂದಿಗೆ ಎಲ್ಲರೊಂದಿಗೆ ಒಂದಾಗಿ ನಡೆಯುವ ಅವರ ಸದ್ಗುಣಗಳು ಮನಮುಟ್ಟುವಂತದ್ದು.

    ಈ ಸರಳ ಸಜ್ಜನಿಕೆಯ ವಿದ್ವತ್ಪೂರ್ಣ ವೈಜ್ಞಾನಿಕ ಚಿಂತಕ ವಿದ್ವಾಂಸರಿಗೆ ಹುಟ್ಟುಹಬ್ಬದ ಆತ್ಮೀಯ ಶುಭ ಹಾರೈಕೆಗಳನ್ನು ಸಲ್ಲಿಸೋಣ.


    ವಾರೆನ್ ಬಫೆಟ್

    ವಿಶ್ವದ ಮಹಾನ್ ಶ್ರೀಮಂತ, ಶ್ರೇಷ್ಠ ಹೂಡಿಕೆದಾರರಾಗಿದ್ದು ಮಹಾನ್ ದಾನಿಯಾಗಿ ರೂಪುಗೊಂಡ  ವಾರೆನ್ ಬಫೆಟ್ ಅವರ ಜನ್ಮದಿನ ದಿನಾಂಕ 30 ಆಗಸ್ಟ್ 1930.  ಪುಟ್ಟ ವಯಸ್ಸಿನಲ್ಲೇ ಕೋಕಾ ಕೋಲಾ ಕ್ಯಾನುಗಳನ್ನು ಲಾಭಕ್ಕೆ ಮಾರಿ, ಪೇಪರ್ ಹಾಕಿ ದುಡ್ಡು ಮಾಡಿ, ವಿಶ್ವದ ಹಣಕಾಸೆಂಬ ಮಾಯೆಯ ಲೋಕದಲ್ಲಿ ನಿರಂತರವಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಶ್ರೇಷ್ಠ ಹೂಡಿಕೆದಾರನಾಗಿಯೇ ಉಳಿದ ಈ ವಿಸ್ಮಯಕಾರಿ ಉದ್ಯಮಿಗಳ ಬಗ್ಗೆ ಲಕ್ಷಾಂತರ ಗ್ರಂಥಗಳೇ ಮೂಡಿ ಬಿಟ್ಟಿವೆ.  ಇವೆಲ್ಲದರ ನಡುವೆ ಆತ ತಾನು ಎಂದೋ ಕೊಂಡ ಹಳೆಯ ಮನೆಯಲ್ಲೇ ವಾಸವಾಗಿದ್ದಾರೆ.  ಮೊಬೈಲು, ಹಾಳು ಮೂಳು ಇತ್ಯಾದಿ ಉಪಯೋಗಿಸುವುದಿಲ್ಲ. ತಮ್ಮ ಕಾರನ್ನು ತಾವೇ ನಡೆಸುತ್ತಾರೆ.  ಮನೆಯಲ್ಲಿ ಆಳು ಕಾಳುಗಳ ಬಾಬತ್ತಿಲ್ಲ.   ಅವರಷ್ಟು ಸಮರ್ಥವಾಗಿ ವ್ಯಾಪಾರೀ ಉದ್ಯಮಗಳ ಜಾತಕವಾದ 'ಬ್ಯಾಲೆನ್ಸ್ ಷೀಟ್'ಗಳನ್ನು ಓದುವವರು ಮತ್ತೊಬ್ಬರಿಲ್ಲ.   2008ರ ವರ್ಷದಲ್ಲಿ  ವಿಶ್ವದಲ್ಲೇ  ಅತ್ಯಂತ  ಶ್ರೀಮಂತರೆನಿಸಿದ್ದ  ಈತ  ತಮ್ಮ ಬಹುಪಾಲು  ಶ್ರೀಮಂತಿಕೆಯನ್ನು  ಸಮಾಜಸೇವೆಗೆ  ಕೊಟ್ಟನಂತರವೂ  ಈಗಲೂ   66.4 ಬಿಲಿಯನ್  ಡಾಲರ್  ಮೌಲ್ಯವುಳ್ಳ  ವಿಶ್ವದ  ನಾಲ್ಕನೇ  ದೊಡ್ಡ  ಶ್ರೀಮಂತರಾಗಿದ್ದಾರೆ.

    ವಾರೆನ್ ಬಫೆಟ್ ಕೆಲವು   ವರ್ಷದ ಹಿಂದೆ  ಹೇಳಿದ ಒಂದು ಮಾತು ನೆನಪಾಗುತ್ತದೆ.  "ನನ್ನ ಮಕ್ಕಳಿಗೆ ಏನನ್ನೂ ಮಾಡಲಿಚ್ಚಿಸಿದರೂ ಅದಕ್ಕೆ ಬೇಕಾಗುವಷ್ಟು ಹಣವನ್ನು ನಾನು ಮುಡಿಪಾಗಿಡಬಯಸುತ್ತೇನೆ.  ಆದರೆ ಅವರಿಗೆ ಏನನ್ನೂ ಮಾಡದೆ ಇದ್ದು ಬಿಡೋಣ ಎಂದೆನಿಸುವ  ಕ್ಷುದ್ರ ರೀತಿಯ  ಬದುಕಿಗೆ ಮಾತ್ರ  ನಾನು ಕಾಸು ಕೊಡಲು ತಯಾರಿಲ್ಲ".  ಹಣ ಗಳಿಸಿದವನಿಗೆ ಮಾತ್ರ ಹಣದ ಬೆಲೆ ಗೊತ್ತಿರುತ್ತದೇನೋ.  ಇತ್ತೀಚಿನ ವರ್ಷಗಳಲ್ಲಿ ಈ ಮಹಾನ್ ಶ್ರೀಮಂತ ತಮ್ಮ ಬಹುತೇಕ ಸಂಪತ್ತನ್ನು ಮತ್ತೊಬ್ಬ ಮಹಾನ್ ಶ್ರೀಮಂತ ಬಿಲ್ ಗೇಟ್ಸ್ ಸ್ಥಾಪಿಸಿದ ಗೇಟ್ಸ್ ಮಿಲಿಂದ ಫೌಂಡೇಷನ್ನಿಗೆ ತನ್ನ ಬಹುತೇಕ ಆಸ್ತಿಯನ್ನು ಬರೆದುಕೊಟ್ಟರು.   ವಾರೆನ್ ಬಫೆಟ್, ಬಿಲ್ ಗೇಟ್ಸ್  ಮತ್ತು  ಫೇಸ್ಬುಕ್ ನಿಮಾತೃ ಮಾರ್ಕ್  ಜೂಕರ್  ಬರ್ಗ್ ತಮ್ಮ  ಗಳಿಕೆಯಲ್ಲಿ  ಕಡೇ ಪಕ್ಷ  ತಮ್ಮ ಸಂಪತ್ತಿನ ಶೇಕಡಾ  50ರಷ್ಟನ್ನು  ಸಮಾಜಕ್ಕೆ  ಕೊಡುಗೆಯಾಗುವ  ನೀಡುವ  ‘ಗಿವಿಂಗ್  ಪ್ಲೆಡ್ಜ್’ ಒಡಂಬಡಿಕೆಗೆ ಸಹಿ ಹಾಕಿದ್ದು, ಇದು  ವಿಶ್ವದ ಇತರ  ಸಂಪತ್ಭರಿತ ವ್ಯಕ್ತಿಗಳನ್ನು ಈ ನಿಟ್ಟಿನಲ್ಲಿ ಪ್ರೇರಿಸುವ  ಉದ್ಧೇಶವನ್ನು ಹೊಂದಿದೆ.  ವೈಯಕ್ತಿಕವಾಗಿ  ಬಫೆಟ್  ತಮ್ಮ ಶೇಕಡಾ  99ರಷ್ಟೂ  ಸಂಪತ್ತನ್ನೂ  ಸಮಾಜಕ್ಕೆ  ಮೀಸಲಿರಿಸುವುದಾಗಿ  ಘೋಷಿಸಿದ್ದಾರೆ.  ಇವಿಷ್ಟೇ  ಅಲ್ಲದೆ  ಪರಮಾಣು  ಭೀತಿ ನಿವಾರಣೆ,  ಹೆಣ್ಣು ಮಕ್ಕಳ  ಕ್ಷೇಮಾಭಿವೃದ್ಧಿಯಂತಹ  ಮಹತ್ವದ  ಧ್ಯೇಯಗಳಿಗಾಗಿ  ಸಹಾ  ಹಣಸಂಗ್ರಹ  ಮಾಡಿಕೊಟ್ಟಿದ್ದಾರೆ. 

    ವಾರೆನ್ ಬಫೆಟ್ ಅವರ ಬಗ್ಗೆ ಮತ್ತಷ್ಟು ಅಧ್ಯಯಿಸ ಹೊರಟಾಗ ಕಣ್ಣಿಗೆ ಬಿದ್ದದ್ದು ವಿಶ್ವೇಶ್ವರ ಭಟ್ಟರ ಈ ಲೇಖನ.

    ಹಣಗಳಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. 
    - ವಿಶ್ವೇಶ್ವರ್‌ ಭಟ್‌

    ಹಣದ ಹಿಂದೆ ಬಿದ್ದವ ಕೊನೆಗೆ ದುಡಿದಿದ್ದೆಲ್ಲವನ್ನೂ ದಾನ ಮಾಡಿ ಬಿಟ್ಟ!

    ಹಣ ಗಳಿಸುವ ಒಂದು ಅದ್ಬುತವೆಂದರೆ ಅದಕ್ಕೆ ಮಿತಿಯೆಂಬುದೇ ಇಲ್ಲ. ಎಲ್ಲದಕ್ಕೂ   ಹಣ ಟಣ ಅಂತಾರೆ. ಆದರೆ ಹಣಗಳಿಸುವ ವಿಷಯದಲ್ಲಿ ಅದಕ್ಕೂ ಮೀರಿ ಗಡಿ ಹಾಕಿದರೆ, ಅದನ್ನೂ ದಾಟಿ ಹೋಗಬಹುದು. ಅಂದರೆ ಎಷ್ಟು ಬೇಕಾದರೂ ಹಣ ಸಂಪಾದನೆ ಮಾಡಬಹುದು. ಈ ಮಾತು ಯಾರಿಗೆ ಬೇಕಾದರೂ ಅನ್ವಯಿಸಬಹುದು. ಹಣ ಗಳಿಸುವುದರಲ್ಲಿ ಮತ್ತೊಂದು ಮಜಾ ಏನೆಂದರೆ, ಇದಕ್ಕೆ ಯಾವುದೇ ಅರ್ಹತೆ ಬೇಕಿಲ್ಲ. ಡಿಗ್ರಿ ಆಗಿರಬೇಕೆಂದಿಲ್ಲ. ಸರ್ಟಿಫಿಕೇಟ್‌ನ ಅಗತ್ಯವಿಲ್ಲ. ಜಾತಿ ಕುಲದ ಭೇದ-ಭಾವವಿಲ್ಲ. ಯಾರಾದರೂ ಆಗಬಹುದು, ಎಷ್ಟು ಬೇಕಾದರೂ ಗಳಿಸಬಹುದು.

    ಹಣಗಳಿಕೆಗೆ ಮಾತ್ರ ಯಾವುದೇ, ಯಾರದೇ ನಿಯಂತ್ರಣ ಇಲ್ಲ. ಹಣ ಗಳಿಸದಿರುವುದಕ್ಕೆ ಸಹ ನೀವು ಮಾತ್ರ ಕಾರಣ ರಾಗಬಹುದು. ಈ ವಿಶ್ವದಲ್ಲಿ ಹಣಗಳಿಸುವ ಸ್ವಾತಂತ್ರ್ಯ ಹಾಗೂ ಅವಕಾಶ ಎಲ್ಲರಿಗೂ ಇದೆ. ಇದನ್ನು ಯಾರು ಗರಿಷ್ಠ ಬಳಸಿಕೊಳ್ಳುತ್ತಾರೋ ಅವರು ಗರಿಷ್ಠ ಸಂಪಾದಿಸುತ್ತಾರೆ.

    ನೀವು ವಾರೆನ್‌ ಬಫೆಟ್‌ ಹೆಸರನ್ನು ಕೇಳಿರಬಹುದು. ಬಿಲ್‌ಗೇಟ್ಸ್ ನಂತರ ವಿಶ್ವದ ಎರಡನೆ ಅತ್ಯಂತ ಶ್ರೀಮಂತ. ಬರ್ಕ್‌ಫೈರ್‌ ಹಾಥವೇ ಕಂಪೆನಿಯ ಮಾಲೀಕ.ಇದೊಂದು ಇನ್‌ವೆಸ್ಟ್‌ಮೆಂಟ್‌ ಕಂಪೆನಿ. ವಾರೆನ್‌ ಬಫೆಟ್‌ ಈಗ 66.4 ಶತಕೋಟಿ ಡಾಲರ್‌ ಶ್ರೀಮಂತ. ಅವನೆಷ್ಟೇ ಧನಿಕನಿರಬಹುದು ಇಂದಿಗೂ ಆತ 1958ರಲ್ಲಿ ಖರೀದಿಸಿದ ಪುಟ್ಟ ಮನೆಯಲ್ಲಿ ವಾಸವಾಗಿದ್ದಾನೆ. ಬಫೆಟ್‌ಗೆ ಹಣ ಗಳಿಸುವುದರ ಹೊರತಾಗಿ ಮತ್ತೇನೂ ಗೊತ್ತಿಲ್ಲ ಎಂದು ಹೇಳುವವರೂ ಅವನ ಜೀವನಶೈಲಿ ಕಂಡು ಬೆರಗಾಗುತ್ತಾರೆ.

    ಹಣವನ್ನು ಯಾರು ಮೋಹಿಸುತ್ತಾರೋ ಅವರು ಮಾತ್ರ ಹಣ ಮಾಡುತ್ತಾರೆ ಎಂಬುದು ಬಫೆಟ್‌ನೇ ಹೇಳಿದ ಮಾತು. ಹಣದ ಹಿಂದೆ ಬೀಳದೇ ಹಣ ಗಳಿಸುವುದು ಅಸಾಧ್ಯವೆಂಬುದು ಅವನದೇ ಘೋಷವಾಕ್ಯ. ಇದನ್ನು ಆತ ತನ್ನ ಜೀವನದಲ್ಲಿ ಅಕ್ಷರಶಃ ಪಾಲಿಸಿದ್ದರಿಂದ ಅವನಿಗೆ ಅಷ್ಟೊಂದು ಗಳಿಸಲು ಸಾಧ್ಯವಾಯಿತು.

    ಆದರೆ ಈ ಬಫೆಟ್‌ ಅದೆಂಥ ಆಸಾಮಿ ನೋಡಿ, ಒಂದು ದಿನ ಅವನಿಗೆ ಏನನಿಸಿತೋ ಏನೋ, ತಾನು ದುಡಿದಿದ್ದರಲ್ಲಿ ಶೇ.83ರಷ್ಟು ಹಣವನ್ನು ಅಂದರೆ ಸುಮಾರು 30 ಶತಕೋಟಿ ಡಾಲರ್‌ನ್ನು ಬಿಲ್‌ಗೇಟ್ಸ್ ಹಾಗೂ ಆತನ ಪತ್ನಿ ಸ್ಥಾಪಿಸಿದ `ಬಿಲ್‌ ಆ್ಯಂಡ್‌ ಮೆಲಿಂದಾ ಗೇಟ್ಸ್ ಫೌಂಡೇಶನ್‌'ಗೆ ದಾನ ನೀಡುವುದಾಗಿ ಘೋಷಿಸಿಬಿಟ್ಟ.

    ಅಮೆರಿಕದ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಮೊತ್ತದ ದಾನವನ್ನು ಇಂದಿಗೂ ಯಾರೂ ಮಾಡಿಲ್ಲ. ಅದೇನು ಸಣ್ಣ ಮಾತೇನು? ತನ್ನ ಜೀವಿತ ಅವಧಿಯಲ್ಲಿ ಗಳಿಸಿದ ಮುಕ್ಕಾಲು ಪಾಲು ಹಣವನ್ನು ಆತ ದಾನವಾಗಿ ನೀಡಿದ್ದ ಅಲ್ಲಿಯ ತನಕ ಹಣದ ಹಿಂದೆ ಬಿದ್ದ ಮನುಷ್ಯ, ಡಾಲರ್‌ ಡಾಲರ್‌ ಕೂಡಿಹಾಕಿದವ ಏಕಾಏಕಿ ತಾನು ದುಡಿದಿದ್ದೆಲ್ಲವನ್ನೂ ವಿಶ್ವದ ಅತಿ ಶ್ರೀಮಂತನ ಜೋಳಿಗೆಗೆ ಹಾಕುವುದಿದೆಯಲ್ಲ ಅದು ಅಸಾಧಾರಣ ಸಂಗತಿಯೇ.

    ಅಲ್ಲಿಯ ತನಕ ಹಣವೆಂದರೆ ಬಾಯಿಬಾಯಿ ಬಿಡುತ್ತಿದ್ದ ಬಫೆಟ್‌, ತಾನು ದುಡಿದಿದ್ದೆಲ್ಲವನ್ನೂ ಸಮಾಜ ಕಾರ್ಯಕ್ಕೆ ಧಾರೆಯೆರೆದಿದ್ದ. ಹಣದ ಹಿಂದೆ ಬಿದ್ದ ಬಫೆಟ್‌ನ ಆ ಶಕ್ತಿ ಯಾವುದು? ಹಣದ ಮೋಹ ತೊರೆಯುವಂತೆ ಮಾಡಿದ ಆತನ ಈ ಶಕ್ತಿ ಯಾವುದು? ಹಣದ ಹುಚ್ಚಿಗೆ ಬಿದ್ದವ, ಅದರಲ್ಲಿ ಯಶಸ್ವಿಯಾದವ, ಹೇಗೆ ಇದ್ದಕ್ಕಿದ್ದಂತೆ ಹಣದ ಬಗ್ಗೆ ಮೋಹ ಕಳಚಿಕೊಂಡ? ಹಣದ ಹುಚ್ಚಿಗೆ ಸಿಕ್ಕಿ ಬೀಳದಿದ್ದರೆ, ಹಣವನ್ನು ಬದುಕಿನಂತೆ, ಉಸಿರಿನಂತೆ, ರಕ್ತದಂತೆ ಪ್ರೀತಿಸಿದವನಿಗೆ, ಇದು ತನ್ನದಲ್ಲ ಎಂದು ಸುಮ್ಮನೆ ದಾನ ಮಾಡಲು ಹೇಗೆ ಸಾಧ್ಯವಾಯಿತು?  ಹಣದ ಕುರಿತು ಇದ್ದ ಹುಚ್ಚು ವೈರಾಗ್ಯವಾಗಿ ಹೇಗೆ ಪರಿವರ್ತಿತಗೊಂಡಿತು?

    ಹಣದ ಮಹಾತ್ಮೆಯೇ ಅದು. ಅದು ಎಂಥವನನ್ನಾದರೂ ಪರಿವರ್ತಿಸುತ್ತದೆ. ಅದು ಒಳ್ಳೆಯದೂ ಇರಬಹುದು, ಕೆಟ್ಟದ್ದೂ ಇರಬಹುದು. ಆದರೆ ಬಫೆಟ್‌ ಒಳ್ಳೆಯ ಉದ್ದೇಶಕ್ಕಾಗಿ ತನ್ನ ಹಣವನ್ನೆಲ್ಲ ದಾನ ಮಾಡಿದ. ಒಂದು ಹಂತದಲ್ಲಿ ಬಫೆಟ್‌ಗೆ ಅನಿಸಿರಬೇಕು. `ಸಾಕು ದುಡಿದಿದ್ದು, ಇನ್ನೆಷ್ಟು ದುಡಿಯಬೇಕು?' ಎಂದು. ಅಮೆರಿಕದಲ್ಲಿಯೇ `ಅತ್ಯಂತ ದೊಡ್ಡ ಕೊಡುಗೈ ದಾನಿ' ಎಂದು ಕರೆಸಿಕೊಳ್ಳುವ ಆಸೆ ಅವನಿಗೆ ಇದ್ದಿತ್ತಾ? ಇದ್ದಿರಲೂಬಹುದು. ಅದಕ್ಕಾಗಿಯೇ ಆ ಪರಿ ದುಡಿದನಾ? ಯಾಕಿರಲಿಕ್ಕಿಲ್ಲ?

    ಹಣವನ್ನು ಹಣವಂತರನ್ನು ಹೀಗೇ ಎಂದು ಹೇಳಲಾಗುವುದಿಲ್ಲ.


    ಪಿ. ಕಾಳಿಂಗರಾವ್

    ನಮ್ಮ ಪಿ. ಕಾಳಿಂಗರಾಯರು ಜನಿಸಿದ ದಿನ ಆಗಸ್ಟ್ 31, 1914. ಕಾಳಿಂಗರಾಯರು ಅಂದರೆ ಒಂದು ರೀತಿಯಲ್ಲಿ ಮೈ ಜುಮ್ಮೆನ್ನುತ್ತದೆ. ಅವರ ಕಾಲದಲ್ಲಿ ಅವರ ಹಾಡುಗಳನ್ನು ಸಂಗೀತ ಕಾರ್ಯಕ್ರಮಗಳಲ್ಲಿ, ರೇಡಿಯೋದಲ್ಲಿ, ಧ್ವನಿಮುದ್ರಿಕೆಗಳಲ್ಲಿ ಕೇಳಿದ್ದವರಿಗೆ ಕಾಳಿಂಗರಾಯರ ಗಾಯನವೆಂಬುದು ಒಂದು ಅವಿಸ್ಮರಣೀಯ ಅನುಭಾವ. ಹುಯಿಲಗೋಳ ನಾರಾಯಣರ ‘ಉದಯವಾಗಲಿ ನಮ್ಮ ಚೆಲುವ ನಾಡು’ ಎಂಬ ಕವಿತೆ ಹಾಡಿ ಕನ್ನಡದಲ್ಲಿನ ಬೆಳವಣಿಗೆಗೆ ಒಂದು ಕ್ರಾಂತಿ ತಂದವರು ಕಾಳಿಂಗರಾಯರು.

    ಸಿ. ಅಶ್ವತ್ಥರ ‘ಭಾವಯಾನ’ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು “ಸುಗಮ ಸಂಗೀತವೆಂಬ ಕಲೆ, ಸಕಲ ಭಾಷೆಗಳ ನಡುವೆ  ಕನ್ನಡದಲ್ಲಿ ಮಾತ್ರ ಕಾಣುವಂತ ಒಂದು ವಿಶಿಷ್ಟ ಕಲೆ” ಎಂದು ಹೇಳಿದ ಮಾತೊಂದು ನೆನಪಾಗುತ್ತಿದೆ. ಈ ವಿಶಿಷ್ಟ ಕಲೆಯ ಪ್ರವರ್ತಕರು ಪಾಂಡೇಶ್ವರ ಕಾಳಿಂಗರಾಯರು. ಕನ್ನಡದ ವಚನಕಾರರ, ದಾಸವರೇಣ್ಯರ, ವಿವಿಧ ನವ್ಯಕಾಲದ ಕವಿಗಳ ಕಾವ್ಯಗಳು ನಾದದ ಅಲೆಗಳ ತರಂಗಗಳೋಪಾದಿಯಲ್ಲಿ ಕನ್ನಡಿಗರ ಕಿವಿ, ಹೃದಯಗಳನ್ನು ಹೆಚ್ಚು ಹೆಚ್ಚು ತಲುಪಲು ಮೊದಲ್ಗೊಂಡದ್ದು ಕಾಳಿಂಗರಾಯರ ಇನಿದ್ವನಿಯಿಂದ. ನಮ್ಮ ಎಚ್. ಆರ್. ಲೀಲಾವತಿಯವರು ಬಣ್ಣಿಸುವಂತೆ ಕಾಳಿಂಗರಾಯರನ್ನು “ಕಿನ್ನರ ಕಂಠದ ಕನ್ನಡ ಕೋಗಿಲೆ” ಎಂದರೆ ಉತ್ಪ್ರೇಕ್ಷೆಯಾಗಲಾರದು.

    ಚಿಕ್ಕವಯಸ್ಸಿನಲ್ಲೇ ಸಂಗೀತದ ಆಸಕ್ತಿ ಮೂಡಿಸಿಕೊಂಡ ಕಾಳಿಂಗರಾಯರು ಮುಂದೆ ರಾಮಚಂದ್ರ ಬುವಾ ಅಂತಹ ಶ್ರೇಷ್ಠ ಸಂಗೀತಗಾರರ ಶಿಷ್ಯರಾಗಿ ಬೆಳೆದು ನಾಟಕಗಳಲ್ಲಿ ಹಾಡತೊಡಗಿದರು. ನಂತರದಲ್ಲಿ ಮದರಾಸಿಗೆ ಹೋಗಿ ಅಲ್ಲೊಂದು ಸಂಗೀತ ಶಾಲೆಯಲ್ಲಿನ ಅಧ್ಯಾಪಕರಾಗಿ, ಪ್ರಾಂಶುಪಾಲರೂ ಆದರು. ಮದ್ರಾಸೆಂದರೆ ಕೇಳಬೇಕೆ. ಅದು ಅಂದಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಪ್ರಧಾನ ಕೇಂದ್ರವಾಗಿತ್ತು. ಅಲ್ಲಿಂದಲೇ ಕಾಳಿಂಗರಾಯರಿಗೆ ಸಿನೆಮಾ ಒಡನಾಟ ಪ್ರಾರಂಭವಾದದ್ದು. ಇವರು ಮೊದಲು ಸಂಗೀತ ನೀಡಿದ್ದು ಹಿಂದಿಯ 'ಪ್ರೇಮ್ ಸಾಗರ್' ಎಂಬ ಚಿತ್ರಕ್ಕೆ. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕರೂ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ್ದ ಆರ್ ನಾಗೇಂದ್ರರಾಯರಿಗೆ ಕಾಳಿಂಗರಾಯರು ಪರಿಚಿತರಾದರು.

    ನಾಗೇಂದ್ರರಾಯರು ನಿರ್ಮಿಸಿದ ‘ವಸಂತಸೇನಾ’ ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶಿಸಿದ ಕಾಳಿಂಗರಾಯರು, ಅದೇ ಚಿತ್ರದಲ್ಲಿ ಜೈನ ಸನ್ಯಾಸಿಯ ಪಾತ್ರವನ್ನೂ ನಿರ್ವಹಿಸಿದ್ದರು. ನವಜ್ಯೋತಿ ಸ್ಟುಡಿಯೋದ ಮುಖ್ಯಸ್ಥರಾಗಿದ್ದ ಜಿ.ಆರ್.ರಾಮಯ್ಯನವರ ಕೋರಿಕೆಯ ಮೇರೆಗೆ ಅಲ್ಲಿ ತಯಾರಾಗುವ ಎಲ್ಲಾ ಚಿತ್ರಗಳಿಗೂ ಸಂಗೀತ ನೀಡಲು ಕಾಳಿಂಗರಾಯರು ಒಪ್ಪಿಕೊಂಡಿದ್ದರು. ಆದರೆ ಹೀಗೆ ಅವರು ಸಂಗೀತ ನೀಡಿದ್ದು ‘ಕೃಷ್ಣಲೀಲಾ’ ಚಿತ್ರಕ್ಕೆ ಮಾತ್ರ. ಈ ಚಿತ್ರದಿಂದ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರು ಗೀತರಚನಕಾರರಾಗಿ ಪರಿಚಿತರಾದರೆ, ಡಾ.ರಾಜ್ ಕುಮಾರ್ ಅವರ ಸಹೋದರ ವರದರಾಜ್ ಮತ್ತು ಸಹೋದರಿ ಶಾರದಮ್ಮ ಅವರುಗಳು ಬೆಳ್ಳಿತೆರೆಗೆ ಬಂದರು.

    ‘ಭಕ್ತ ರಾಮದಾಸ’ ಚಿತ್ರದಲ್ಲಿ ಸಂಗೀತ ನೀಡುವಾಗ, ಭಿಕ್ಷೆ ಬೇಡುತ್ತಿದ್ದ ಹುಡುಗಿಯೊಬ್ಬಳ ಕಂಠಸಿರಿಗೆ ಮನಸೋತ ಕಾಳಿಂಗರಾಯರು ಆಕೆಯಿಂದಲೂ ಹಾಡೊಂದನ್ನು ಹಾಡಿಸಿದ್ದರು. 1954ರಲ್ಲಿ ಸಿ.ವಿ.ರಾಜು ಅವರ ‘ನಟಶೇಖರ’ ಚಿತ್ರಕ್ಕೆ ಸಂಗೀತ ನೀಡಿದರು. ನಾಡಿಗೇರ ಕೃಷ್ಣರಾಯರ ಸಾಹಿತ್ಯವಿದ್ದ ಆ ಚಿತ್ರದ ಗೀತೆಗಳು ಜನಪ್ರಿಯವಾದವು. ಕಾಳಿಂಗರಾಯರು ‘ಅಬ್ಬಾ ಆ ಹುಡುಗಿ’, ‘ಮಹಾಶಿಲ್ಪಿ’, ‘ತರಂಗ’ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರಾದರೂ ಅವರ ಪ್ರತಿಭೆ ಹೆಚ್ಚಾಗಿ ಬೆಳಗಿದ್ದು ಸುಗಮ ಸಂಗೀತ ಕ್ಷೇತ್ರದಲ್ಲಿ. ‘ಕೈವಾರ ಮಹಾತ್ಮೆ’ ಚಿತ್ರದ ‘ಓಂ ನಮೋ ನಾರಾಯಣಾ’, ‘ಕಿತ್ತೂರು ಚೆನ್ನಮ್ಮ’ ಚಿತ್ರದ ‘ತಾಯಿ ದೇವಿಯನು ಕಾಣೆ ಹಂಬಲಿಸಿ’ ಮೊದಲಾದ ಜನಪ್ರಿಯ ಗೀತೆಗಳನ್ನು ಹಾಡಿ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಕಾಳಿಂಗರಾಯರನ್ನು, ಅವರ ಕಂಠಸಿರಿಗೆ ಪ್ರಸಿದ್ಧವಾದ 'ಅಂತಿಂಥ ಹೆಣ್ಣು ನೀನಲ್ಲ' ಗೀತೆಯನ್ನು ಅವರೇ ಹಾಡುತ್ತಿರುವಂತೆ ತುಂಬಿದ ಕೊಡ ಚಿತ್ರದಲ್ಲಿ ತೋರಿಸಲಾಗಿತ್ತು.

    ಕಾಳಿಂಗರಾಯರು ಚಿತ್ರರಂಗ ಮತ್ತು ಸುಗಮ ಸಂಗೀತದ ಕ್ಷೇತ್ರಕ್ಕೆ ಬರುವ ಮೊದಲು ತಮ್ಮ ಹದಿನಾರನೆಯ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನೀಡಿ ಜನಮೆಚ್ಚುಗೆ ಸಂಪಾದಿಸಿದ್ದರು. ಕಾಳಿಂಗರಾಯರ ಗಾಯನದ ಮೋಡಿಯಲ್ಲಿ ರಾಗವೂ ವೈವಿಧ್ಯಮಯವೇ; ಸಾಹಿತ್ಯವೂ ವೈವಿಧ್ಯಪೂರ್ಣವೆ. ಕಾಳಿಂಗರಾಯರು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತವನ್ನೂ ಅಭ್ಯಾಸ ಮಾಡಿದ್ದರು. ಆದ್ದರಿಂದ ಕವನಗಳನ್ನು ಉತ್ತರ, ದಕ್ಷಿಣ, ಪೌರ್ವಾತ್ಯ, ಪಾಶ್ಚಿಮಾತ್ಯ ಜಾನಪದ, ಶಾಸ್ತ್ರೀಯ ಸಂಗೀತದ ಉಡಿಗೆ ತೊಡಿಗೆಗಳಿಂದಲಂಕರಿಸಿ ಹಾಡಿದರು. ಒಂದೇ ಕವನವನ್ನು ನಾಲ್ಕಾರು ದಾಟಿಯಲ್ಲಿ ಹಾಡುವ ಚೈತನ್ಯ ಅವರಿಗಿತ್ತು. ಅದು ಕರ್ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಧಾಟಿ, ಪಾಶ್ಚಿಮಾತ್ಯ ಶೈಲಿ ಯಾವುದೂ ಆಗಬಹುದು. ಆದರೆ ಹೇಗೆ ಹಾಡಿದರೆ ಕವನದ ಭಾವಕ್ಕೆ ಇಂಬುಗೊಡುವುದೋ ಅದೇ ಮುಖ್ಯ ಎಂದು ಅವರು ಒತ್ತಿ ಹೇಳುತ್ತಿದ್ದರು.

    ಇಡೀ ಕರ್ನಾಟಕದ ಕಲಾಭಿಮಾನಿಗಳು ಕಾಳಿಂಗರಾಯರ ಆರಾಧಕರಾದರು. ಕಾಳಿಂಗರಾಯರ ಕಚೇರಿ ಎಂದರೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು. ಆ ಕಡೆ ಮೋಹನಕುಮಾರಿ, ಈ ಕಡೆ ಸೋಹನ ಕುಮಾರಿ ಮಧ್ಯೆ ಈ ದಿವ್ಯ ಚೇತನ ಹಾಡುತ್ತಿದ್ದರೆ ಕಲಿಯುಗ ದ್ವಾಪರವಾಗುತ್ತಿತ್ತು. ಮಿಂಚಿನ ಹೊಳೆ ಹರಿಯುತ್ತಿತ್ತು. ರಸಸ್ರೋತ ಪ್ರವಹಿಸುತ್ತಿತ್ತು.

    ಕಾಳಿಂಗರಾಯರು ಕನ್ನಡ ಭಾವಗೀತೆಗಳನ್ನು ಹಾಡಲು, ಅವರಿಗೆ ಪ್ರೇರಕ ಶಕ್ತಿಯಾಗಿದ್ದವರಲ್ಲಿ ಅತಿ ಮುಖ್ಯರಾದವರೆಂದರೆ ಅ. ನ. ಕೃಷ್ಣರಾಯರು. ಮಿತ್ರರ ಒತ್ತಾಯಕ್ಕೆ ಮಣಿದು 1946ರಲ್ಲಿ ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಹಾಡಿದರು. ಕನ್ನಡ ರಾಜ್ಯೋದಯದ ನಂತರ ಈ ಹಾಡನ್ನು ಹಾಡಿದ್ದ ಕಾಳಿಂಗರಾಯರಿಗೆ ಕರ್ನಾಟಕ ಸರ್ಕಾರ ಸನ್ಮಾನ ಮಾಡಿತು.

    ‘ತೂಗಿರೇ ರನ್ನವಾ, ತೂಗಿರೇ ಚಿನ್ನವಾ’, ‘ಬಾರಯ್ಯ ಬೆಳುದಿಂಗಳೇ’, ‘ಅಮ್ಮಕ ಜಮ್ಮಕದಿಂದ ಬರುತಾಳೇ ರತುನಾ’, ‘ಮೂಡಲ್‌ ಕುಣಿಗಲ್‌ ಕೆರೆ’, ‘ಬೆಟ್ಟ ಬಿಟ್ಟಿಳಿಯುತ್ತ ಬಂದಾಳೆ ಚಾಮುಂಡಿ’ ಒಂದೇ ಎರಡೇ. ಜಾನಪದ ಗೀತೆಗಳಿಗೇ ಹೊಸ ತಿರುವನ್ನು ಕೊಟ್ಟರು. ಈ ಧ್ವನಿ ಮುದ್ರಿಕೆಗಳನ್ನು ಕೇಳಿದವರು ಮೈಮರೆತರು. ಜಿ.ಪಿ. ರಾಜರತ್ನಂರವರ ‘ರತ್ನನ ಪದ’ಗಳನ್ನು ಭಾವಪೂರ್ಣವಾಗಿ ಹಾಡಬಹುದೆಂಬುದನ್ನು ತೋರಿಸಿಕೊಟ್ಟ ಮೊಟ್ಟ ಮೊದಲಿಗರೇ ಕಾಳಿಂಗರಾಯರು. “ಬ್ರಹ್ಮಾ ನಿಂಗೆ ಜೋಡಿಸ್ತೀನಿ ಯೆಂಡಾ ಮುಟ್ಟಿದ್‌ ಕೈನಾ” ಹಾಡನ್ನು ಕೇಳಿ ಮನಸೋಲದ ಕನ್ನಡಿಗನೇ ಇಲ್ಲ.

    ಕಾಳಿಂಗರಾಯರ ನಾಲಿಗೆಯ ಮೇಲೆ ದಾಸರು ನಲಿದರು. ವಚನಕಾರರು ಕುಣಿದರು, ಯೆಂಡ್ಕುಡ್ಕ ರತ್ನ ಮೆರೆದರು, ಜನಪದರು ಉಕ್ಕಿ ಹರಿದರು, ಭಾವಗೀತಕಾರರು ಮಿಂಚಿದರು. ‘ಎಲ್ಲಾದರು ಇರು, ಎಂತಾದರು ಇರು’, ‘ಏರಿಸಿ ಹಾರಿಸಿ ಕನ್ನಡದ ಬಾವುಟ’, ‘ಯಾರು ಹಿತವರು ನಿನಗೆ’, ‘ಮಾಡು ಸಿಕ್ಕದಲ್ಲ’, ‘ಮನವೆಂಬ ಸರಸಿಯಲಿ’, ‘ಪರಚಿಂತೆ ನಮಗೆ ಏಕೆ ಅಯ್ಯಾ’, ‘ಹೋದ ವರ್ಷ ಬಂದ ಹಬ್ಬ’, ‘ಮಂಕುತಿಮ್ಮನ ಕಗ್ಗ’, ‘ದೇಶಭಕ್ತಿಗೀತೆಗಳು’, ‘ಹರಿಹರನ ರಗಳೆ’ ಎಲ್ಲವನ್ನೂ ಹಾಡಿ ಸೈ ಎನಿಸಿಕೊಂಡರು. ಕರ್ನಾಟಕದಲ್ಲಿ ಮಾತ್ರವಲ್ಲದೆ ದೆಹಲಿ, ಕೊಲ್ಕತ್ತ, ಮುಂಬಯಿ, ಮದ್ರಾಸ್‌, ಪೂನಾ, ನಾಗಪುರ ಮುಂತಾದ ಕಡೆಗಳಲ್ಲೆಲ್ಲ ಹಾಡಿ ಭಾರತದ ಉದ್ದಗಲಕ್ಕೂ ತಮ್ಮ ಇನಿದನಿಯ ಗಾನಸುಧೆಯನ್ನು ಹರಿಸಿ ಕೀರ್ತಿ ಶಿಖರಕ್ಕೇರಿದರು. ಇವರ ಗಾಯನವನ್ನು ಧ್ವನಿ ಮುದ್ರಿಸಿಕೊಳ್ಳಲು ಎಚ್‌.ಎಂ.ವಿ. ಮತ್ತು ಸರಸ್ವತಿ ಸಂಸ್ಥೆಗಳು ಪೈಪೋಟಿಯನ್ನೇ ನಡೆಸಿದವು.

    ಕಾಳಿಂಗರಾಯರಿಗೆ ‘ಜಾನಪದ ಸಂಗೀತರತ್ನ’, ‘ಬಾಲಗಂಧರ್ವ’, ‘ಜಾನಪದ ಕಲಾ ಚಕ್ರವರ್ತಿ’, ‘ಗಾಯನ ಚಕ್ರವರ್ತಿ’, ‘ಗಾಯನ ಕಂಠೀರವ’, ‘ಕನ್ನಡ ಉದಯಗಾನ ಕೋಗಿಲೆ’, ‘ಸಂಗೀತ ರಸ ವಿಹಾರಿ’ ಮುಂತಾದ  ಅನೇಕ  ಜನಮೆಚ್ಚಿ ಕೊಟ್ಟ ಬಿರುದು ಬಾವಲಿಗಳು  ಸಂದಿದ್ದವು.

    ನಾವು ಪುಟ್ಟವರಿದ್ದಾಗ ಅವರ ಸಂಗೀತ ಕಾರ್ಯಕ್ರಮಗಳಿಗೆ ಜನ ಮುಗಿಬೀಳುತ್ತಿದ್ದ ರೀತಿ, ಕಾರ್ಯಕ್ರಮಕ್ಕೆ ಬಂದ ರಸಿಕರನ್ನು ಇವರು ತಮ್ಮ ಗಾಯನದಿಂಪಿನಲ್ಲಿ ತೇಲಿಸುತ್ತಿದ್ದ ರೀತಿ ಇಂದೂ ನೆನಪಾಗುತ್ತದೆ. ಸಂಗೀತ ಕ್ಷೇತ್ರದಲ್ಲಿ ಅನಭಿಷಿಕ್ತರಾದರೂ, ಸಾರ್ವಜನಿಕ ಜೀವನದಲ್ಲಿ ಅತ್ಯಂತ ಸರಳಜೀವಿ, ಸಹೃದಯರಾಗಿದ್ದರೂ, ವೈಯಕ್ತಿಕವಾಗಿ ಹಲವಾರು ಗೊಂದಲಗಳ ಜೀವನವನ್ನು ರಾಯರು ಅನುಭವಿಸಿದಂತೆ ತೋರುತ್ತದೆ. ಆದರೆ, ಇವೆಲ್ಲಕ್ಕೂ ಮೀರಿದ್ದು ಅವರ ಅಪ್ರತಿಮ ಪ್ರತಿಭೆ. ಕಾಳಿಂಗರಾಯರು 1981ರ ಸೆಪ್ಟೆಂಬರ್ 22ರಂದು ನಿಧನರಾದರು.

    ಅವರ ಹಾಡುಗಳನ್ನು ನಾವು ಎಷ್ಟು ಬಾರಿ ಕೇಳಿದ್ದೇವೋ. ಅವರು ಹಾಡಿದ್ದೆಲ್ಲಾ ವೈವಿಧ್ಯಪೂರ್ಣ. ಅವರು ಹಾಡಿದ ಪ್ರತಿಯೊಂದೂ ಹಾಡೂ ಕನ್ನಡಿಗರಿಗೆ ಸಾರ್ವಕಾಲಿಕವಾಗಿ ಪ್ರಿಯ. ಇಂಥಹ ಅವಿಸ್ಮರಣೀಯ ಗಾಯಕರೂ, ಸುಗಮ ಸಂಗೀತ ಪ್ರವರ್ತಕರೂ ಆದ ಕಾಳಿಂಗರಾಯರನ್ನು ಕನ್ನಡ ನಾಡು ನಿರಂತರವಾಗಿ ಅಭಿಮಾನಪೂರ್ವಕವಾಗಿ ನೆನೆಯುತ್ತಿದೆ. ಈ ಮಹಾನ್ ಚೇತನಕ್ಕೆ ನಮ್ಮ ನಮನ.


    ಜಾವಗಲ್ ಶ್ರೀನಾಥ್

    ನಮ್ಮ ಜಾವಗಲ್ ಶ್ರೀನಾಥ್ ಅವರು ಭಾರತದ ಕ್ರಿಕೆಟ್ ಆಟದಲ್ಲಿ ಬಿರುಸಿನ ಬೌಲಿಂಗ್ ಎಂಬ ಹೊಸ ಅಧ್ಯಾಯ ಬರೆದವರು.  ನಮ್ಮ ಮೈಸೂರು ಎಕ್ಸ್ಪ್ರೆಸ್, ಜಾವಗಲ್ ಎಕ್ಸ್ಪ್ರೆಸ್ ಎಂದು ಪ್ರಖ್ಯಾತರಾದ ಜಾವಗಲ್ ಶ್ರೀನಾಥ್ ಅವರು ಜನಿಸಿದ್ದು ಆಗಸ್ಟ್ 31, 1969ರ ವರ್ಷದಲ್ಲಿ.  ಮೈಸೂರಿನಲ್ಲಿ ಜನಿಸಿದ ಶ್ರೀನಾಥ್, ಮೂಲತಃ ಹಾಸನ ಜಿಲ್ಲೆಯ ಜಾವಗಲ್‌ನವರು. ಅವರು ಎಂಜಿನಿಯರಿಂಗ್ ಪದವೀಧರರೂ ಹೌದು.

    ಭಾರತದ ಕ್ರಿಕೆಟ್ಟಿನಲ್ಲಿ ಕಪಿಲ್ ದೇವ್ ಅವರು ಮಧ್ಯಮ ವೇಗದ ಬೌಲಿಂಗ್ನಲ್ಲಿ ಪ್ರಖ್ಯಾತಿ ಗಳಿಸುವವರೆಗೆ ವೇಗದ ಬೌಲರುಗಳ ಉಪಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಮಾದರಿಯಲ್ಲಿತ್ತು.  ಅಬಿದ್ ಆಲಿ, ಏಕನಾಥ ಸೋಲ್ಕರ್ ಅಂತಹವರು ಬೌಲಿಂಗ್ ಮಾಡುವ ದಿನಗಳಲ್ಲಿ ಒಂದು ಮೂರು ನಾಲ್ಕು ಓವರುಗಳ ನಂತರದಲ್ಲಿ ಚಂದ್ರಶೇಖರ್, ಪ್ರಸನ್ನ ಅಂತಹ ಸ್ಪಿನ್ನರುಗಳ ಬಳಿ ಚೆಂಡು ಸೇರುತ್ತಿತ್ತು.  ಅಂದಿನ ದಿನದಲ್ಲಿ ಪ್ರಾರಂಭಿಕ ಬೌಲರ್ ಆದ ಅಬಿದ್ ಆಲಿ ಅವರಿಗಿಂತ ಸ್ಪಿನ್ನರ್ ಚಂದ್ರು ಹೆಚ್ಚು ವೇಗವಾಗಿ ಬೌಲ್ ಮಾಡುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ.

    ಜಾವಗಲ್ ಶ್ರೀನಾಥರು 1991ರ ವರ್ಷದಲ್ಲಿ ಪ್ರಥಮ ಟೆಸ್ಟ್ ಪಂದ್ಯ ಮತ್ತು ಏಕದಿನ ಪಂದ್ಯಗಳನ್ನು  ಆಡುವುದರೊಂದಿಗೆ ಭಾರತಕ್ಕೆ ಇದುವರೆಗೆ ದೊರೆತಿರುವ ಅತ್ಯಂತ ವೇಗದ ಬೌಲರ್ ಎನಿಸಿದ್ದಾರೆ.   

    ಭಾರತದಲ್ಲಿ ವೇಗದ ಬೌಲಿಂಗ್ ಮಾಡುವುದೆಂದರೆ ಅದೊಂದು ದಿಟ್ಟ ಸಾಹಸವೇ ಸರಿ.  ವೇಗದ ಬೌಲರುಗಳಿಗೆ ಅಗತ್ಯವಾದ ಸ್ವಿಂಗ್ ಎಂಬುದು ಇಲ್ಲಿ ಕಾಣುವುದಕ್ಕೆ ಹೆಣಗಾಡಬೇಕಾದದ್ದು ಅಷ್ಟಿಷ್ಟಲ್ಲ.  ಹಾಗಾಗಿ ನಮ್ಮ ವೇಗದ ಬೌಲರುಗಳಾದ ಶ್ರೀನಾಥ್, ವೆಂಕಿ, ಜಹೀರ್ ಇವರೆಲ್ಲಾ ವಿದೇಶೀ ನೆಲದಲ್ಲಿ ಆಡಿದಾಗಲೇ ಉತ್ತಮ ಬೌಲರುಗಳಾಗಿ ನಮಗೆ ಕಂಡಿದ್ದಾರೆ.  ಈ ಮಾತನ್ನು ಯಾಕೆ ಹೇಳಬೇಕಾಗಿದೆ ಎಂದರೆ ಇಲ್ಲಿನ ಪಿಚ್ಚುಗಳನ್ನು ಬ್ಯಾಟುದಾರನಿಗೆ ಅಥವಾ ಹೆಚ್ಚೆಂದರೆ ಸ್ಪಿನ್ ಬೌಲರನಿಗೆ ಅನುಕೂಲವಾಗುವಂತೆ ರೂಪಿಸಲಾಗುತ್ತದೆ.  ವೇಗದ ಬೌಲರನ್ನು ದೂಷಿಸಲಾಗುತ್ತದೆ.  ಒಮ್ಮೆ ಶ್ರೀನಾಥರೇ ಇರಬೇಕು ಹೀಗೆ ಹೇಳಿದ್ದು "ಭಾರತದ ಪಿಚ್ಚುಗಳನ್ನು ನೋಡಿದರೆ ಅಳು ಬರುತ್ತದೆ!".  ಇಲ್ಲಿನ ಹವಾಮಾನ ಕೂಡಾ ಗಾಳಿಯಲ್ಲಿ ಸ್ವಿಂಗ್ ಮೂಡುವುದನ್ನು ಬೆಂಬಲಿಸುವುದಿಲ್ಲ ಎಂಬುದು ಕೂಡಾ ಮಹತ್ವದ ಅಂಶ.     

    ಶ್ರೀನಾಥರದು ಅಸಾಮಾನ್ಯ ಸಾಮರ್ಥ್ಯ.  1996ರ ವರ್ಷದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರು ಮಾಡಿದ ಬೌಲಿಂಗಿನ ವೇಗ  ಗಂಟೆಗೆ 156 ಕಿ.ಮೀಟರಿನದ್ದು ಎಂದು ದಾಖಾಲಾತಿ ಇದೆ.  ವಿಶ್ವಕಪ್ ಪಂದ್ಯದಲ್ಲಿ ಕೂಡಾ ಅವರು 154.5 ಕಿ.ಮೀ ವೇಗದಲ್ಲಿ  ಬೌಲಿಂಗ್ ಮಾಡಿದ್ದರ ದಾಖಲಾತಿ ಇದೆ.  ಆದರೆ ಅವರ ಈ ಸಾಮರ್ಥ್ಯ  ನಿರಂತರವಾಗಿ ಅವರಿಂದ ಹೊರಹೊಮ್ಮುತ್ತಿರಲಿಲ್ಲ ಎಂಬುದು ಕೂಡಾ ಅಷ್ಟೇ ನಿಜ.  ಶ್ರೀನಾಥರಿಗೆ ಸೀಮಿತತೆ ಇದ್ದದ್ದು ಬಹುಷಃ ಅವರ ದೈಹಿಕವಾದ ಬಲದಲ್ಲಿ.  ಸಾಮಾನ್ಯವಾಗಿ ನಾವು ವೇಗದ ಬೌಲರುಗಳಲ್ಲಿ ಕಾಣುವ ಮೈಕಟ್ಟು ಅವರದ್ದಾಗಿರಲಿಲ್ಲ.

    ಭಾರತದಲ್ಲಿನ ಪಿಚ್ಚುಗಳು ಮತ್ತು ವಾತಾವರಣಗಳು  ವೇಗದ ಬೌಲಿಂಗಿಗೆ ನೀಡುವ ಸೀಮಿತ ಅವಕಾಶಗಳ ದೆಸೆಯಿಂದಾಗಿ ಗಾಳಿಯಲ್ಲಿನ ಬೆಂಬಲವನ್ನು ಹೆಚ್ಚು ಅವಲಂಬಿಸದೆ ಹಳೆಯ ಚೆಂಡನ್ನು ವೇಗದಲ್ಲಿನ  ವೈವಿಧ್ಯಗಳ ದೆಸೆಯಿಂದಾಗಿ  ಉತ್ತಮವಾಗಿ ಬಳಸುವುದನ್ನು ಸಮರ್ಥವಾಗಿ ತೋರಿಸಿಕೊಟ್ಟವರು ಜಾವಗಲ್ ಶ್ರೀನಾಥ್.  1996-97ರ ವರ್ಷದಲ್ಲಿ ಅಹಮದಾಬಾದಿನಲ್ಲಿ ನಡೆದ ಟೆಸ್ಟ್ ಪಂದ್ಯದ ನಾಲ್ಕನೆಯ ಇನ್ನಿಂಗ್ಸ್ ನಲ್ಲಿ  ಶ್ರೀನಾಥ್ ಅವರು ದಕ್ಷಿಣ ಆಫ್ರಿಕಾ ತಂಡದ 6 ವಿಕೆಟ್ಟುಗಳನ್ನು ಉರುಳಿಸಿದ್ದು ಇಂಥಹ ಶ್ರೇಷ್ಠ ಬೌಲಿಂಗಿಗೊಂದು ನಿದರ್ಶನವಾಗಿದೆ. 

    ತಮ್ಮ ಕ್ರಿಕೆಟ್ ಜೀವನದ ಕೊನೆಯ ವರ್ಷಗಳಲ್ಲಿ ರಿವರ್ಸ್ ಸ್ವಿಂಗ್, ಲೆಗ್ ಕಟರ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡ ಶ್ರೀನಾಥ್, ಟೆಸ್ಟ್ ಪಂದ್ಯಗಳಲ್ಲಿ 236 ಮತ್ತು ಏಕದಿನ ಪಂದ್ಯಗಳಲ್ಲಿ 315 ವಿಕೆಟ್ಗಳನ್ನು ಪಡೆದಿದ್ದಾರೆ. ಮೊದಲ ದರ್ಜೆ ಮಟ್ಟದಲ್ಲಿ 500 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ.  ಭಾರತದ ವೇಗದ ಬೌಲರುಗಳಲ್ಲಿ ಕಪಿಲ್ ದೇವ್ ಅವರನ್ನು ಹೊರತು ಪಡಿಸಿದರೆ ಅತೀ ಹೆಚ್ಚು ವಿಕೆಟ್ ಗಳಿಸಿರುವವರು ಶ್ರೀನಾಥ್. ಭಾರತದಲ್ಲಿ ಮುಂದೆ ಬಂದ ವೇಗದ ಬೌಲಿಂಗ್ ಪೀಳಿಗೆಗೆ ಮಾರ್ಗದರ್ಶಕರಾಗಿ ಮತ್ತು ಸ್ಫೂರ್ತಿ ತಂದವರಾಗಿ ಸಹಾ ಶ್ರೀನಾಥರು ನೀಡಿದ ಕೊಡುಗೆಯನ್ನು  ನಾವು ಮರೆಯುವಂತಿಲ್ಲ.   

    ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿಂದ ರಣಜಿ ಕ್ರಿಕೆಟ್ ಮತ್ತು ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್ಷೈರ್ ಮತ್ತು ಲೀಸೆಸ್ಟರ್ಷೈರ್ ತಂಡಗಳ ಪರವಾಗಿ ಸಹಾ ಶ್ರೀನಾಥ್ ಆಡಿದ್ದಾರೆ.

    ಕೆಲವೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುತ್ತಿದ್ದ ಶ್ರೀನಾಥ್ ಏಕದಿನ ಪಂದ್ಯಗಳಲ್ಲಿ "ಪಿಂಚ್ ಹಿಟರ್" ಕೆಲಸವನ್ನು ನಿರ್ವಹಿಸಿರುವುದೂ ಉಂಟು!

    ಇತ್ತೀಚಿನ ಹಲವು ವರ್ಷಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ರೆಫರಿ ಉದ್ಯೋಗದಿಂದ ವಿಶ್ವದೆಲ್ಲೆಡೆ ಸಂಚಾರ ಮಾಡಿರುವ ಶ್ರೀನಾಥ್ ತಾವು ಮೂಡಿದ ಕ್ಷೇತ್ರಗಳಲ್ಲೆಲ್ಲಾ ಭಾರತಕ್ಕೆ ಗೌರವ ತಂದವರು.  ಅವರು ನಮ್ಮ ಕರ್ನಾಟಕ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯಾಗಿಯೂ  ಕೆಲಸ  ನಿರ್ವಹಿಸಿದ್ದಾರೆ.

    ಶ್ರೀನಾಥರನ್ನು ಅರ್ಥೈಸಬೇಕಾದರೆ, ವಿದೇಶದ ವೇಗದ ಬೌಲರುಗಳನ್ನು ಒಂದು ಕ್ಷಣ ಹೋಲಿಸಿ ನೋಡಬೇಕಾಗುತ್ತದೆ. ಆ ವೇಗದ ಬೌಲರುಗಳು  ಅವಾಚ್ಯ ಶಬ್ದಗಳಿಂದ ಬ್ಯಾಟುದಾರನನ್ನು ನಿಂದಿಸುವುದು, ಕೆಟ್ಟ ಕೆಟ್ಟ ರೀತಿಯಲ್ಲಿ ಮೈದಾನದಲ್ಲಿ ಮತ್ತು ಹೊರವಲಯಗಳಲ್ಲಿ ವರ್ತಿಸುವುದು  ಇವೆಲ್ಲಾ ನೋಡಿದರೆ ನಮ್ಮ ಮೈಸೂರಿನ ಶ್ರೀನಾಥರು ತಮ್ಮ  ಶ್ರೇಷ್ಠತೆಯನ್ನೆಲ್ಲಾ ತಮ್ಮ ಬೌಲಿಂಗಿನ ಬಿರುಸಿನಲ್ಲಿ ಮಾತ್ರ ತೋರ್ಪಡಿಸಿದ್ದು ನಮಗೆಲ್ಲಾ ಹೆಮ್ಮೆಯ ವಿಷಯವಲ್ಲವೇ! 

    ಜಾವಗಲ್ ಶ್ರೀನಾಥರೆ, ನಿಮ್ಮನ್ನು ನಾವು ಇಷ್ಟಪಡುತ್ತೇವೆ. ನಿಮ್ಮನ್ನು ಗೌರವಿಸುತ್ತೇವೆ.  ನಿಮ್ಮ ಹೆಸರಲ್ಲಿ ಮೈಸೂರಿನಲ್ಲಿ ಒಂದು ವೃತ್ತವನ್ನೂ ಸ್ಥಾಪಿಸಿದ್ದೇವೆ.  ಇವೆಲ್ಲಕ್ಕೂ ಮಿಗಿಲಾಗಿ ನಿಮಗೆ ನಿರಂತರ ಶುಭ ಹಾರೈಸುತ್ತೇವೆ.  ನಿಮ್ಮ ಬದುಕು ಸುಂದರವಾಗಿರಲಿ.  ನಿಮ್ಮ ಉತ್ತಮ ಬೌಲಿಂಗ್, ಉತ್ತಮ ಮಾರ್ಗದರ್ಶನ, ಉತ್ತಮ ನಡತೆ ಮುಂದಿನ ಕ್ರೀಡಾ ತಲೆಮಾರಿಗೆ ಮಾದರಿಯಾಗಿರಲಿ. 

    ಜಾವಗಲ್ ಶ್ರೀನಾಥರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.


    Wednesday, August 29, 2018

    ಮಹರ್ಷಿ ವ್ಯಾಸರು ಹೇಳಿದ್ದನ್ನು ‘ಕಂಡುಹಿಡಿಯುವ’ ವಿಜ್ಞಾನಿಗಳು !
    ಸೂರ್ಯನ ಮೇಲಿರುವ ಜ್ವಾಲಾಮುಖಿ

    ಮಹಾಭಾರತ ಯುದ್ಧವು ನಡೆಯುತ್ತಿರುವಾಗ ಸೂರ್ಯ ಗ್ರಹಣವಿತ್ತು. ಇದರ ಬಗ್ಗೆ ವ್ಯಾಸರು 'ದ್ವಿಧಾಭೂತ ಇವ ಆದಿತ್ಯ: |' ಎಂದು ವರ್ಣಿಸಿದ್ದಾರೆ. ಅಂದರೆ ಸೂರ್ಯನು ಉದಯಿಸುತ್ತಲೇ ಇಭ್ಭಾಗವಾದನು. ವ್ಯಾಸರು ಮುಂದೆ 'ಸೂರ್ಯನು ಎಂದಿನಂತೆ ಸುತ್ತುವುದನ್ನು ಬಿಟ್ಟು ಪ್ರಜ್ವಲಿತ ಜ್ವಾಲೆಯನ್ನು ಹೊರಹಾಕುತ್ತಿದ್ದಾನೆ' ಎಂದು ಬರೆದಿದ್ದಾರೆ. ಇಂದಿನ ವೈಜ್ಞಾನಿಕ ಉಪಕರಣಗಳಿಂದ ವಿಜ್ಞಾನಿಗಳು ಸೂರ್ಯಗ್ರಹಣದ ಸಮಯದಲ್ಲಿ ಜ್ವಾಲಾಮುಖಿಯ ಉದ್ರೇಕವಾಗಿರುವುದನ್ನು ದೂರಚಿತ್ರವಾಹಿನಿಯಲ್ಲಿ ಬಿತ್ತರಿಸುತ್ತಾರೆ. ಇದರಿಂದ ವ್ಯಾಸರು ಹೇಳಿರುವುದು ಸತ್ಯ ಎಂಬುದು ಸಿದ್ಧವಾಗುತ್ತದೆ.

    ೧. ಗೆಲಿಲಿಯೋನ ಕಾಲಕ್ಕಿಂತಲೂ ಸಾವಿರಾರು ವರ್ಷಗಳ ಮೊದಲು ಬರೆದಂತಹ ಋಗ್ವೇದದಲ್ಲಿ ಸೂರ್ಯನ ಕಲೆಗಳ ವರ್ಣನೆ ಇದೆ.

    ೨. ಆಕಾಶಗಂಗೆಯು ಗೋಲವಿರುವುದು ವಿಜ್ಞಾನಕ್ಕೆ ಇತ್ತೀಚೆಗೆ ತಿಳಿದ ಸಂಗತಿ, ಇದು ವೇದ ಕಾಲದ ಹಿಂದೂಗಳಿಗೆ ತಿಳಿದಿತ್ತು. ಆಕಾಶಗಂಗೆಯು ಮೂಲಭೂತವಾಗಿದ್ದು ಅದರಿಂದ ಈ ಸೌರವ್ಯೂಹ ನಿರ್ಮಾಣವಾಗಿದೆ ಹಾಗೂ ನಮ್ಮ ಜಗತ್ತು ಅದರ ಮೇಲೆ ಅವಲಂಬಿಸಿದೆ ಎಂಬುದು ವೇದಕಾಲದ ಜ್ಞಾನ.

    ಆಧಾರ : ವೈದಿಕ ವಿಜ್ಞಾನ ಹಾಗೂ ವೇದಕಾಲನಿರ್ಣಯ, ಪು ೨೫. ಡಾ. ಪದ್ಮಾಕರ ವಿಷ್ಣು ವರ್ತಕ

    ಗ್ರಹ

    ಎಲ್ಲ ಗ್ರಹಗಳು ಪ್ರಾಥಮಿಕ ಹಂತದಲ್ಲಿ ಕಾಯ್ದ ಸ್ಥಿತಿಯಲ್ಲಿದ್ದರೂ ಕಾಲಾಂತರದಲ್ಲಿ ತಂಪಾದವು. ಇದರ ಬಗ್ಗೆ ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. ಆಧುನಿಕ ವಿಜ್ಞಾನವು ಅದನ್ನು ಇತ್ತೀಚೆಗೆ ಸಂಶೋಧಿಸಿದೆ.

    ನಕ್ಷತ್ರ

    ಸಾವಿರಾರು ವರ್ಷಗಳ ಹಿಂದೆ ವ್ಯಾಸರು ಇಂದಿನ ವಿಜ್ಞಾನಕ್ಕೆ ತಿಳಿದ ಅಗಣಿತ ನಕ್ಷತ್ರಗಳಲ್ಲಿ ಒಂದು ಅಭಿಜಿತ ನಕ್ಷತ್ರವು ೧೨ ಸಾವಿರ ವರ್ಷಗಳ ಹಿಂದೆ ಉತ್ತರ ಧ್ರುವವಾಗಿದ್ದು, ಅದರ ಸ್ಥಾನಪಲ್ಲಟವಾಗಿರುವ ಬಗ್ಗೆ ಮಹಾಭಾರತದಲ್ಲಿ ಹೇಳಿದ್ದರು. ಆಧುನಿಕ ಶಾಸ್ತ್ರಜ್ಞರು ಈಗ ಆ ಸಮಯದಲ್ಲಿ 'ವೇಗಾ' ಎಂಬ ನಕ್ಷತ್ರವು ನಿಜವಾಗಿಯೂ ಉತ್ತರ ಧ್ರುವವಾಗಿತ್ತು ಎಂದು ದೃಢೀಕರಿಸಿದ್ದಾರೆ.
    ಶಿಕ್ಷಕರ ಬಗ್ಗೆ ಕೃತಜ್ಞತಾ ಭಾವದಲ್ಲಿರಿ!

    ನಾವು ನಮ್ಮ ಶಿಕ್ಷಕರೊಂದಿಗೆ ಆತ್ಮೀಯತೆಯಿಂದ ವರ್ತಿಸಬೇಕು. ನಮಗೆ ಅವರಿಂದಾಗಿ ಜ್ಞಾನಪ್ರಾಪ್ತಿಯಾಗುತ್ತದೆ. ಆದುದರಿಂದ ಅವರ ಬಗ್ಗೆ ನಾವು ಸತತ ಕೃತಜ್ಞರಾಗಿರಬೇಕು. ನಾವು ವಿದ್ಯಾರ್ಥಿಗಳಾಗಿದ್ದೇವೆ. ಜ್ಞಾನ ಗ್ರಹಣ ಮಾಡಿಕೊಳ್ಳುವುದೇ ವಿದ್ಯಾರ್ಥಿಗಳ ಧರ್ಮವಾಗಿರುತ್ತದೆ. ಶಿಕ್ಷಕರೊಂದಿಗೆ ಗೌರವದಿಂದ ವರ್ತಿಸುವುದೇ ವಿದ್ಯಾರ್ಥಿಗಳ ಧರ್ಮವಾಗಿದೆ. ನಾವು ಶಿಕ್ಷಕರೊಂದಿಗೆ ಉದ್ಧಟತನದಿಂದ ವರ್ತಿಸಿದರೆ ಅಥವಾ ಅವರ ವಿರುದ್ಧ ಮಾತನಾಡಿದರೆ ಅಥವಾ ಅವರ ಮಾತನ್ನು ಕೇಳದಿದ್ದರೆ ನಾವು ಅಧರ್ಮಿಗಳಾಗುತ್ತೇವೆ. ನಮ್ಮ ವರ್ತನೆ ಧರ್ಮಕ್ಕನುಸಾರವಿರಬೇಕು. ನಾನು ವಿದ್ಯಾರ್ಥಿಯಾಗಿದ್ದರೆ ನನ್ನ ವಿದ್ಯಾರ್ಥಿ ಧರ್ಮದ ಪಾಲನೆ ಮಾಡಲೇಬೇಕು. ಇಂದಿನಿಂದ ನಾವು ನಮ್ಮ ಧರ್ಮಕ್ಕನುಸಾರ ವರ್ತಿಸೋಣ. ಆಗ ದೇವರಿಗೆ ಇಷ್ಟವಾಗುತ್ತೇವೆ. ನಾವು ಕೃತಜ್ಞತೆಯಿಂದ ವರ್ತಿಸಿದರೆ ಶಿಕ್ಷಕರು ನಮಗೆ ಇನ್ನೂ ಹೊಸ ಜ್ಞಾನ ನೀಡಲು ಉತ್ಸುಕರಾಗುತ್ತಾರೆ. ಅವರಿಗೂ ತುಂಬಾ ಆನಂದವಾಗುತ್ತದೆ.

    ಮಕ್ಕಳೇ, ಶಿಕ್ಷಕರೊಂದಿಗೆ ನಮ್ಮ ವರ್ತನೆಯು ಹೀಗಿರಬೇಕು !

        ಶಾಲೆಯಲ್ಲಿ ಶಿಕ್ಷಕರಿಗೆ ‘ಸರ್’ ಎನ್ನದೆ ‘ಗುರುಗಳೇ’ ಎಂದು ಹೇಳಿ.

        ಶಿಕ್ಷಕರು ಭೇಟಿಯಾದಾಗ ವಿನಯಪೂರ್ವಕವಾಗಿ ಕೈ ಜೋಡಿಸಿ ‘ನಮಸ್ಕಾರ ಗುರುಗಳೇ’ ಎಂದು ಹೇಳಿ.

        ಹಬ್ಬ ಮತ್ತು ಉತ್ಸವಗಳ ಸಮಯದಲ್ಲಿ ಶಿಕ್ಷಕರಿಗೆ ತಲೆ ಬಾಗಿಸಿ ನಮಸ್ಕಾರ ಮಾಡಿ.

        ಶಿಕ್ಷಕರ ಬಗ್ಗೆ ಗೌರವ ಭಾವನೆಯಿಂದ, ಅವರನ್ನು ನಮ್ರತೆ ಮತ್ತು ಪ್ರೇಮದಿಂದ ಮಾತನಾಡಿಸಿ.

        ತರಗತಿಯಲ್ಲಿ ಇತರ ಮಕ್ಕಳಿಗೂ ಗೌರವದಿಂದಿರಲು ಕಲಿಸಿ.

        ಶಿಕ್ಷಕರಿಂದ ವಿವಿಧ ವಿಷಯಗಳ ಜ್ಞಾನ ದೊರೆತಾಗ ಅದರ ಬಗ್ಗೆ ಕೃತಜ್ಞರಾಗಿರಿ.

    ಶಿಕ್ಷಕರಲ್ಲಿ ದೇವರನ್ನು ನೋಡಲು ಕಲಿಯಬೇಕು!

    ಶಿಕ್ಷಕರು ಹೇಳಿದ ಪ್ರತಿಯೊಂದು ಕೃತಿ ಆಚರಣೆಗೆ ತಂದರೆ ಅವರಿಗೆ ಇಷ್ಟವಾಗುತ್ತದೆ. ‘ಅವರು ದೇವರ ಸಮಾನರಾಗಿದ್ದಾರೆ’ ಎಂಬಂತೆ ಅವರೊಂದಿಗೆ ವರ್ತಿಸಬೇಕು. ಓರ್ವ ವಿದ್ಯಾರ್ಥಿಯು ಕುಚೋದ್ಯ ಮಾಡಲು ಆರಂಭಿಸಿದರೆ ಎರಡನೆಯವನು ಹಾಗೆಯೇ ಮಾಡುತ್ತಾನೆ. ಅದು ಯೋಗ್ಯವಾಗಿದೆಯೇ ಅಥವಾ ಅಯೋಗ್ಯವಾಗಿದೆಯೇ ಎಂದು ನೋಡುವುದಿಲ್ಲ. ಆದುದರಿಂದ ನಾವು ಕೆಟ್ಟ ಗುಣಗಳಿಂದ ದೂರವಿರಬೇಕು. ಮಕ್ಕಳೇ, ನಾವು ಮಿತ್ರರಿಗೆ ನಮ್ಮ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ನಮ್ಮ ಮಿತ್ರರಿಂದಾಗುವ ಅಧರ್ಮ ನಿಮಗೆ ಇಷ್ಟವಾಗುತ್ತದೆಯೇ? ಎಲ್ಲರಲ್ಲಿರುವ ಪರಮೇಶ್ವರನೊಬ್ಬನೇ ಇದ್ದಾನೆ. ನಮ್ಮ ಶಿಕ್ಷರಲ್ಲಿಯೂ ದೇವರಿದ್ದಾನೆ. ಆದರೆ ನಾವು ಅವರ ವಿರುದ್ಧ ಮಾತನಾಡುತ್ತೇವೆ. ಅಂದರೆ ನಾವು ದೇವರಿಗೆ ವಿರುದ್ಧ ಮಾತನಾಡಿದಂತಾಗುತ್ತದೆಯಲ್ಲವೇ?

    ಮಕ್ಕಳು ಶಿಕ್ಷಕರೊಂದಿಗೆ ಹೇಗೆ ವರ್ತಿಸಬೇಕು?

    ವಿದ್ಯಾರ್ಥಿ ಮಿತ್ರರೇ, ನಮಗೆ ಆದರ್ಶವಾಗಿರುವವರು ಹಾಗೂ ಪ್ರತಿದಿನ ಹೊಸಹೊಸ ಜ್ಞಾನವನ್ನು ನೀಡುವವರೆಂದರೆ ಶಿಕ್ಷಕರು. ಶಿಕ್ಷಕರು ನಮಗಾಗಿ ತಮ್ಮ ತನು, ಮನದ ತ್ಯಾಗವನ್ನು ಮಾಡುತ್ತಾರೆ. ಅವರು ನಮಗೆ ಪ್ರತಿದಿನ ಜ್ಞಾನ ನೀಡಲು ಶ್ರಮಿಸುತ್ತಿರುತ್ತಾರೆ. ನಮಗಾಗಿ ಅವರು ಯಾವುದೇ ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಇಂತಹ ಶಿಕ್ಷಕರೊಂದಿಗೆ ನಮ್ಮ ವರ್ತನೆ ಹೇಗಿರಬೇಕು? ವಿದ್ಯಾರ್ಥಿ ಮಿತ್ರರೇ, ನಾವು ಅವರೊಂದಿಗೆ ಕೃತಜ್ಞತಾ ಭಾವದಿಂದ ವರ್ತಿಸಬೇಕು. ಅವರಿಂದಾಗಿ ನಮಗೆ ಜೀವನದ ದಿಕ್ಕು ಸಿಗುತ್ತದೆ. ನಮಗೆ ಬಾಲ್ಯಾವಸ್ಥೆಯಲ್ಲಿ ಸರಿ-ತಪ್ಪು ಯಾವುದೆಂದು ತಿಳಿಯುವುದಿಲ್ಲ. ಅದುದರಿಂದ ಶಿಕ್ಷಕರೇ ನಮಗೆ ಒಳ್ಳೆಯ ಅಂಶಗಳನ್ನು ತಿಳಿಸಿ ಹೇಳುತ್ತಾರೆ. ಇದನ್ನೆಲ್ಲ ಮಾಡುವಾಗ ಅವರು ಕೆಲವೊಮ್ಮೆ ನಮ್ಮ ಮೇಲೆ ಸಿಟ್ಟು ಮಾಡುತ್ತಾರೆ, ಕೆಲವೊಮ್ಮೆ ಹೊಡೆಯುತ್ತಾರೆ, ಕೆಲವೊಮ್ಮೆ ಬೈಯುತ್ತಾರೆ! ಆದರೆ ಇದರ ಅರ್ಥ ಅವರು ನಮ್ಮನ್ನು ಪ್ರೀತಿಸುವುದಿಲ್ಲವೆಂದಲ್ಲ. ‘ನೀವು ಒಳ್ಳೆಯ ಸಂಸ್ಕಾರವಂತ ಮತ್ತು ಜ್ಞಾನಿಯಾಗಬೇಕು’ ಎನ್ನುವುದು ಅವರ ಉದ್ದೇಶವಾಗಿರುತ್ತದೆ. ಒಳ್ಳೆಯ ಧ್ಯೇಯದಿಂದ ಅವರು ಕೆಲವೊಮ್ಮೆ ಕಠೋರವಾಗುತ್ತಾರೆ. ನಮಗೆ ಬಾಲ್ಯಾವಸ್ಥೆಯಲ್ಲಿ ಅದು ತಿಳಿಯುವುದಿಲ್ಲ. ಅದರಿಂದ ಕೆಲವು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಾರೆ. ಅವರಿಗೆ ಎದುರುತ್ತರ ನೀಡುತ್ತಾರೆ ಮತ್ತು ಅವರ ಮಾತನ್ನು ಕೇಳುವುದಿಲ್ಲ.

    ಅಲ್ಲದೇ ಈಗಿನ ಕೆಲವು ಮಕ್ಕಳು ಶಿಕ್ಷಕರ ಬೆನ್ನ ಹಿಂದೆ ಅವರನ್ನುಅಣಕಿಸುತ್ತಾರೆ. ಶಿಕ್ಷಕರು ತರಗತಿಯಲ್ಲಿ ಕಲಿಸುತ್ತಿರುವಾಗ ಅವರಿಗೆ ಕೇಳಿಸದಂತೆ ತಮ್ಮೊಳಗೆ ಅವರ ಅಪಹಾಸ್ಯ ಮಾಡುತ್ತಾರೆ. ಇದರಿಂದ ಇತರ ಎಲ್ಲ ಮಕ್ಕಳೂ ಶಿಕ್ಷಕರನ್ನು ನೋಡಿ ನಗುತ್ತಾರೆ. ಇದೆಲ್ಲ ಅಯೋಗ್ಯವಾಗಿದೆ.
    ನಮಸ್ಕಾರ ಹೇಗೆ ಮಾಡುವುದು ?
    ದೇವರ ಅಥವಾ ಸಂತರ ಪಾದುಕೆಗಳು



    ಪಾದುಕೆಗಳ ಕುಂಟೆಯ ಮೇಲೆ ತಲೆಯನ್ನಿಡದೇ ಪಾದುಕೆಗಳ ಮುಂದಿನ ಭಾಗದ ಮೇಲೆ (ಹೆಬ್ಬೆರಳಿನ ಜಾಗದಲ್ಲಿ) ತಲೆಯನ್ನಿಟ್ಟು ನಮಸ್ಕಾರ ಮಾಡಬೇಕು.

    ಹಿರಿಯರು



    ಸೌಭಾಗ್ಯವತಿಯು ಹಿರಿಯರಿಗೆ ಕೆಳಗೆ ಬಗ್ಗಿ ನಮಸ್ಕರಿಸುವಾಗ ೩ ಸಲ ಕೈಗಳನ್ನು ಮೇಲೆ-ಕೆಳಗೆ ಮಾಡಬೇಕು.

    ಇತರ ವ್ಯಕ್ತಿಗಳು



    ಪರಸ್ಪರರನ್ನು ಭೇಟಿಯಾಗುವಾಗ ಎದುರುಬದುರಾಗಿ ನಿಂತುಕೊಂಡು ಎರಡೂ ಕೈಗಳನ್ನು ಜೋಡಿಸಿಕೊಂಡು ಹೆಬ್ಬೆರಳುಗಳನ್ನು ಎದೆಯಿಂದ ಸ್ವಲ್ಪ ಅಂತರದಲ್ಲಿರುವಂತೆ ಇಟ್ಟು ಕೈಗಳನ್ನು ಜೋಡಿಸಿ, ಸ್ವಲ್ಪ ಮುಂದಕ್ಕೆ ಬಗ್ಗಿ ನಮಸ್ಕಾರ ಮಾಡಬೇಕು.

    ಸಂತರು



    ಸಂತರ ಚರಣಗಳ ಮೇಲೆ ನಮ್ಮ ಕೈಗಳನ್ನಿಡಬೇಕು ಮತ್ತು ಪಾದಗಳ ಹೆಬ್ಬೆರಳುಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಬೇಕು.
    ಶಿಕ್ಷಕರೇ ಸುಸಂಸ್ಕಾರಯುತ ಪೀಳಿಗೆಯನ್ನು ನಿರ್ಮಾಣ ಮಾಡಬಲ್ಲರು

    ಶಿಕ್ಷಕರೆಂದರೆ ಸಮಾಜಕ್ಕೆ ಯೋಗ್ಯ ದಿಕ್ಕು ತೋರಿಸುವವರಾಗಿದ್ದಾರೆ. ಶಿಕ್ಷಕರು ನಿರ್ಮಿಸಿದ ಪೀಳಿಗೆಯೇ ಮುಂದೆ ರಾಷ್ಟ್ರವನ್ನು ಮುನ್ನಡೆಸುತ್ತದೆ. ಅಂದರೆ ಶಿಕ್ಷಕರು ರಾಷ್ಟ್ರ ನಿರ್ಮಾಣದಲ್ಲಿ ಮುಖ್ಯ ಅಡಿಪಾಯವಾಗಿದ್ದಾರೆ.

    ಸದ್ಯದ ಸ್ಥಿತಿ

    ಈಗಿನ ಶಿಕ್ಷಕರು ಮಕ್ಕಳ ಬಗ್ಗೆ ಅನೇಕಆಕ್ಷೇಪಗಳನ್ನು ಮಾಡುತ್ತಾರೆ.

    ೧. ಮಕ್ಕಳು ತುಂಬಾ ಮಾತನಾಡುತ್ತಾರೆ.

    ೨. ನಮ್ಮ ಮಾತನ್ನು ಮಕ್ಕಳು ಕೇಳುವುದಿಲ್ಲ.

    ೩. ಮಕ್ಕಳು ತುಂಬಾ ಚಂಚಲರಾಗಿದ್ದಾರೆ.

    ೪. ಶಿಕ್ಷಕರೊಂದಿಗೆ ತುಂಬಾ ಉದ್ಧಟತನದಿಂದ ಮಾತನಾಡುತ್ತಾರೆ.

    ೫. ತರಗತಿಯಲ್ಲಿ ಒಬ್ಬರಿಗೊಬ್ಬರು ತೊಂದರೆ ಕೊಡುತ್ತಾರೆ.

    ೬. ಅಧ್ಯಯನ ಮಾಡುವುದಿಲ್ಲ.

    ಮಕ್ಕಳಲ್ಲಿ ಬದಲಾವಣೆ ಆಗದಿರಲು ಸಂಪೂರ್ಣ ಶಿಕ್ಷಣ ಪದ್ಧತಿಯೇ ಹೊಣೆಯಾಗಿದೆ

    ಮೇಲೆ ನೀಡಿದ ಸಮಸ್ಯೆಗಳ ಬಗ್ಗೆ ನಾವೆಲ್ಲರೂ ವಿಚಾರ ಮಾಡಬೇಕಾಗಿದೆ. ಎಷ್ಟೊಂದು ವರ್ಷಗಳಿಂದ ನಾವು ಮಕ್ಕಳಿಗೆ ಕಲಿಸುತ್ತಿದ್ದೇವೆ. ಬಹುತೇಕ ಎಲ್ಲಾ ಶಿಕ್ಷಕರು ಪ್ರಾಮಾಣಿಕವಾಗಿಯೇ ಕಲಿಸುತ್ತಾರೆ. ಆದರೂ ಮಕ್ಕಳಲ್ಲಿ ಬದಲಾವಣೆ ಕಾಣುವುದಿಲ್ಲ. ಇದನ್ನು ಎಲ್ಲಾ ಶಿಕ್ಷಕರು ಒಪ್ಪಲೇಬೇಕು. ಇದಕ್ಕೆ ಮುಖ್ಯ ಕಾರಣ ನಮ್ಮ ಸಂಸ್ಕೃತಿಗೆ ಒಪ್ಪದಆಂಗ್ಲ ಶಿಕ್ಷಣ ಪದ್ಧತಿ. ಇದು ನಮ್ಮ ಶಿಕ್ಷಣ ಪದ್ಧತಿಯಾಗಿರದೇ ಮೆಕಾಲೆಯ ಶಿಕ್ಷಣ ಪದ್ಧತಿಯಾಗಿದೆ. ಈ ಶಿಕ್ಷಣ ಪದ್ಧತಿಯಿಂದ ಮಕ್ಕಳು ಸಂವೇದನಾಶೀಲತೆ ಕಳೆದುಕೊಂಡ ಮನುಷ್ಯರಾಗುತ್ತಾರೆ ಮತ್ತು ಈ ವಿಷ ವೃಕ್ಷದ ಫಲವನ್ನು ನಾವಿಂದು ಕಾಣುತ್ತಿದ್ದೇವೆ. ಹಾಗಾಗಿ ಮಕ್ಕಳಲ್ಲಿ ಬದಲಾವಣೆ ಆಗದಿರಲು ಸಂಪೂರ್ಣವಾಗಿ ಶಿಕ್ಷಣ ಪದ್ಧತಿಯೇ ಹೊಣೆಯಾಗಿದೆ.

    ಅಧ್ಯಾತ್ಮಶಾಸ್ತ್ರದಂತೆ ಕುಲದೇವರ ಉಪಾಸನೆ ಮಾಡುವುದರಿಂದ
    ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗುವುದು

    ಶಿಕ್ಷಣ ಪದ್ಧತಿಯೇ ಸರಿ ಇಲ್ಲದಿರುವಾಗ ನಾವೇ ಇದಕ್ಕೆ ಪರಿಹಾರ ಹುಡುಕಬೇಕು. ಕಾರಣ ನಾವು ಸಮಾಜದ ಮಾರ್ಗದರ್ಶಕರಾಗಿದ್ದೇವೆ. ಸಮಾಜ ದಿಕ್ಕು ತಪ್ಪಿದಾಗ ಅದಕ್ಕೆ ಸರಿಯಾದ ದಾರಿ ತೋರಿಸುವುದು ಶಿಕ್ಷಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಶಿಕ್ಷಕರೇ ಇದಕ್ಕೆ ಪರಿಹಾರವನ್ನು ಕಂಡುಹಿಡಿಯಬಲ್ಲರು. ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲಿ ಹಿಂದವೀ ಸ್ವರಾಜ್ಯ ಸ್ಥಾಪನೆಗಾಗಿ ಪ್ರಮಾಣ ಮಾಡಿದರು. ಅದಕ್ಕೆ ಕಾರಣ ಅವರು ಭವಾನಿ ದೇವಿಯ ಉಪಾಸನೆ ಮಾಡುತ್ತಿದ್ದರು. ಇದರಿಂದ ನಮ್ಮ ಗಮನಕ್ಕೆ ಬರುವುದೇನೆಂದರೆ ದೇವರ ನಾಮಸ್ಮರಣೆಯಿಂದ ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗಬಹುದು. ಇದು ತ್ರಿವಾರ ಸತ್ಯವಾಗಿದೆ. ಈ ಸತ್ಯವನ್ನು ಶಿಕ್ಷಕರು ಅರಿತು ತಮ್ಮಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿಯೂ ಸುಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸಬಹುದು. ಇದಕ್ಕೆ ಮೊದಲು ಶಿಕ್ಷಕರು ದೇವರ ಉಪಾಸನೆಯನ್ನು ಮಾಡಬೇಕು. ನಾವೆಲ್ಲರು ಯಾವುದಾದರು ದೇವರ ಉಪಾಸನೆಯನ್ನು ಮಾಡುತ್ತಿರುತ್ತೇವೆ. ಅದಕ್ಕಿಂತಲೂ ಅಧ್ಯಾತ್ಮಶಾಸ್ತ್ರದಂತೆ ನಾವು ನಮ್ಮ ಮನೆದೇವರ ಉಪಾಸನೆಯನ್ನು ಮಾಡಬೇಕು.

    ಉಪಾಸನೆಯನ್ನು ಮಾಡಿ ಆನಂದದಿಂದಿರುವ ಶಿಕ್ಷಕರೊಬ್ಬರಿಂದ
    ಅನೇಕ ಮಕ್ಕಳಿಗೆ ಆನಂದವನ್ನು ಕೊಡಲು ಸಾಧ್ಯವಾಗುತ್ತದೆ

    ಶಿಕ್ಷಕರು ಕುಲದೇವರ ಉಪಾಸನೆಯನ್ನು ಮಾಡುವುದರಿಂದ ಅವರ ವಾಣಿಯಲ್ಲಿ ಚೈತನ್ಯವು ಬರುತ್ತದೆ. ನಾವು ಹೇಳುವ ಪ್ರತಿಯೊಂದು ಮಾತನ್ನು ಮಕ್ಕಳು ಕೇಳುತ್ತಾರೆ ಮತ್ತು ತಕ್ಷಣ ಕೃತಿಯಲ್ಲಿ ತರುತ್ತಾರೆ. ಇಲ್ಲಿ ನಮಗೆ ಅತಿ ಮುಖ್ಯವಾದ ಅಂಶವೊಂದು ಗಮನಕ್ಕೆ ಬರುತ್ತದೆ. ಅದೇನೆಂದರೆ ಸಮಾಜದ ನಿರ್ಮಾಣವು ನಾವು ನಮ್ಮ ಜೀವನದಲ್ಲಿ ಅಧ್ಯಾತ್ಮಕ್ಕೆ ಎಷ್ಟು ಮಹತ್ವ ನೀಡುತ್ತೇವೆ ಎನ್ನುವುದರ ಮೇಲೆ ಇರುತ್ತದೆ. ಭಕ್ತಿಯ ಶಕ್ತಿಯಿಂದ ನಾವು ಮಕ್ಕಳಲ್ಲಿ ಬದಲಾವಣೆಯನ್ನು ತರಬಹುದು. ಇದರಲ್ಲಿ ಎರಡು ಲಾಭವಿದೆ. ಮನೆದೇವರ ಜಪದಿಂದ ನಾವು ಒತ್ತಡದ ಜೀವನ, ಗಡಿಬಿಡಿಯಿಂದ ಮುಕ್ತಿ ಹೊಂದುತ್ತೇವೆ. ನಕಾರಾತ್ಮಕ ವಿಚಾರ, ನಿರಾಶೆಯಿಂದ ಮುಕ್ತಿ ಹೊಂದುತ್ತೇವೆ ಅಂದರೆ ನಾವು ಆನಂದವಾಗಿರುತ್ತೇವೆ. ಆನಂದದಿಂದ ಇರುವ ಒಬ್ಬ ಶಿಕ್ಷಕ ಅನೇಕ ಮಕ್ಕಳಿಗೆ ಆನಂದ ನೀಡಬಲ್ಲನು.

    ’ಎಲ್ಲಾ ಶಿಕ್ಷಕರು ಮನೆದೇವರ ಜಪ ಮಾಡಿ ಸ್ವತಃ ಆನಂದಿಯಾಗಲಿ. ಎಲ್ಲಾ ವಿದ್ಯಾರ್ಥಿಗಳನ್ನು ಮನೆದೇವರ ಉಪಾಸಕರನ್ನಾಗಿ ಮಾಡಲಿ ಮತ್ತು ಬರುವ ಪೀಳಿಗೆಯು ಸುಸಂಸ್ಕಾರಯುತವಾಗಲಿ ಮತ್ತು ಬೇಗ ರಾಮರಾಜ್ಯ ಸ್ಥಾಪನೆಯಾಗಲಿ’, ಇದೇ ದೇವರ ಚರಣಗಳಲ್ಲಿ ಪ್ರಾರ್ಥನೆ.
    ಶಿಕ್ಷಣ ಪದ್ಧತಿ ಮತ್ತು ಶಿಕ್ಷಕರ ಕರ್ತವ್ಯ
    ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರ

    ಶಿಕ್ಷಕರು ಸಾಧನೆಯನ್ನು ಮಾಡುತ್ತಿದ್ದಲ್ಲಿ ಅವರು ಸಹಜವಾಗಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಬಹುದು. ಪ್ರಾಚೀನ ಕಾಲದಲ್ಲಿದ್ದ ಶಿಕ್ಷಣ ಪದ್ಧತಿಯಲ್ಲಿ ಇದನ್ನು ನಾವು ನೋಡಬಹುದಾಗಿತ್ತು, ಆದರೆ ಈಗಿನ ಶಿಕ್ಷಣ ಪದ್ಧತಿಯು ಪಾಶ್ಚಾತ್ಯರ ವಿಚಾರಧಾರೆಯ ಮೇಲೆ ಆಧರಿಸಲಾಗಿದೆ. ಇದನ್ನು ಆಧರಿಸಿ ಶಿಕ್ಷಕರೊಬ್ಬರು ಬರೆದ ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ.
    ಆಶ್ರಮದ ವಾತಾವರಣದ ಲಾಭವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಗುವುದು

    ಹಿಂದೆ ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಿತ್ತು. ಇದರಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಹೊಣೆ ಶಿಕ್ಷಕರ ಮೇಲಿತ್ತು. ವಿದ್ಯಾರ್ಥಿಗಳು ಗುರುಗಳ ಮನೆಯಲ್ಲಿದ್ದು ವಿದ್ಯಾರ್ಜನೆ ಮಾಡುತ್ತಿದ್ದರು. ’ಆಚಾರ್ಯ ದೇವೋ ಭವ |’ ಎಂಬ ಗೌರವವು ವಿದ್ಯಾರ್ಥಿಗಳ ಮನದಲ್ಲಿ ಮೂಡಿರುತ್ತಿತ್ತು. ಆಚಾರ್ಯರು ಸ್ವತಃ ಸಾಧನೆ ಮಾಡುತ್ತಿದ್ದರು ಮತ್ತು ಅದೇ ಸಂಸ್ಕಾರವನ್ನು ಅವರು ಮಕ್ಕಳಲ್ಲಿ ಮೂಡಿಸುತ್ತಿದ್ದರು. ಅದಲ್ಲದೇ ಆಶ್ರಮದ ವಾತಾವರಣದ ಲಾಭವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಗುತ್ತಿತ್ತು.
    ಶಿಕ್ಷಣ ಪದ್ಧತಿಯಲ್ಲಿ ಆದ ಬದಲಾವಣೆಗಳು
    ಅ. ಶಾಲೆಗೆ ಹೋದರೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಮೂಡುವುದರಖಾತ್ರಿ ಪಾಲಕರಲ್ಲಿರುವುದು

    ಹಿಂದಿನ ಕಾಲದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿದ್ದರು. ಅವರ ಯೋಗ್ಯ ಆಚಾರ, ವಿಚಾರವು ಮಕ್ಕಳಿಗೆ ಅನುಕರಣೀಯವಾಗಿತ್ತು. ಹಾಗಾಗಿ ಶಾಲೆಗೆ ಹೋದರೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಆಗುವುದು ಎಂಬ ಖಾತ್ರಿ ಪಾಲಕರಲ್ಲಿತ್ತು.
    ಆ. ಸಮಾಜದ ಅಧಃಪತನ ಪ್ರಾರಂಭ

    ಶಿಕ್ಷಣ ಪದ್ಧತಿಯಲ್ಲಿ ಪಾಶ್ಚಾತ್ಯರ ಪ್ರಭಾವ ಹೆಚ್ಚಾಗುತ್ತಿಂತೆ ಶಿಕ್ಷಕರಲ್ಲಿ ಬದಲಾವಣೆಯು ಶುರುವಾಯಿತು. ಮುಂದೆ ಆಂಗ್ಲ ಮಾಧ್ಯಮದಲ್ಲಿ ಶಾಲೆಗಳು ಪ್ರಾರಂಭವಾಯಿತು. ಶಿಕ್ಷಕರಿಗೆ ’ಸರ್, ಮೇಡಮ್’ ಎಂದು ಕರೆಸಿಕೊಳ್ಳುವುದರಲ್ಲಿಯೇ ಧನ್ಯತೆ ಎನಿಸಲು ಪ್ರಾರಂಭವಾಯಿತು. ಇದೇ ಸಂಸ್ಕಾರವು ಮಕ್ಕಳಲ್ಲಿ ಮೂಡಲು ಪ್ರಾರಂಭವಾಯಿತು. ’ಸಂಸ್ಕಾರ, ಧರ್ಮಾಚರಣೆ’ ಇವು ಸಮಾಜದಲ್ಲಿ ಲೋಪವಾದಂತೆ ಸಮಾಜದ ಅಧಃಪತನವು ಪ್ರಾರಂಭವಾಯಿತು.
    ಇತರ ಧರ್ಮೀಯರ ಶಿಕ್ಷಣ ಪದ್ಧತಿ

    ಇತರ ಧರ್ಮೀಯರಲ್ಲಿ ಶಾಲೆಯ ಶಿಕ್ಷಣದ ಜೊತೆ ಧರ್ಮದ ಶಿಕ್ಷಣವನ್ನು ನೀಡಲು ವ್ಯವಸ್ಥೆ ಇರುತ್ತದೆ. ಕೇವಲ ಹಿಂದೂ ಮಕ್ಕಳಿಗೆ ಈ ರೀತಿಯ ಶಿಕ್ಷಣ ಸಿಗುವುದಿಲ್ಲ.
    ಸಮಾಜದ ಸ್ಥಿತಿ

    ಇಂದಿನ ವ್ಯಸ್ತ ಜೀವನ ಶೈಲಿಯಲ್ಲಿ ಮಕ್ಕಳು ಸಂಸ್ಕಾರಯುತರಾಗದಿರಲು ಅನೇಕ ಕಾರಣಗಳಿವೆ. ವಿಭಕ್ತ ಕುಟುಂಬಗಳಿಂದಾಗಿ ಮನೆಯಲ್ಲಿ ಸಂಸ್ಕಾರವನ್ನು ನೀಡಲು ಅಜ್ಜ, ಅಜ್ಜಿ ಇರುವುದಿಲ್ಲ. ಹಾಗಾಗಿ ಚಿಕ್ಕ ಮಕ್ಕಳನ್ನು 'ಡೇ ಕೇರ್'ಗೆ ಕಳಿಸಲಾಗುತ್ತಿದೆ. ಇಲ್ಲವಾದರೆ ಮನೆಯಲ್ಲಿ ಕುಳಿತು ದೂರದರ್ಶನ ವೀಕ್ಷಿಸುತ್ತಾ ಸಮಯ ವ್ಯರ್ಥ ಮಾಡಲಾಗುತ್ತಿದೆ. ಹಾಗಾಗಿ ಮಕ್ಕಳಿಗೆ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ಹೇಳುವವರೇ ಇಲ್ಲವಾಗಿದೆ.
    ರಾಜಕೀಯ ಪರಿಸ್ಥಿತಿ

    ಹಿಂದಿನ ಕಾಲದಲ್ಲಿ ರಾಜರೂ ಸಹ ಧರ್ಮಾಚರಣೆ ಮಾಡುತ್ತಿದ್ದರು ಮತ್ತು ಅವರು ಋಷಿಮುನಿಗಳ ಮಾರ್ಗದರ್ಶನದಂತೆ ರಾಜ್ಯಭಾರ ಮಾಡುತ್ತಿದ್ದರು. ಆದರೆ ಈಗಿನ ರಾಜಕಾರಣಿಗಳು ಧರ್ಮಾಚರಣೆ ಮಾಡದಿರುವ ಕಾರಣ ಹಿಂದೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯನ್ನು ಮಾಡಲು ಅವರು ಅಸಮರ್ಥರಾಗಿದ್ದಾರೆ. ರಾಜಕಾರಣಿಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದರಿಂದ ಸಂಸ್ಕಾರಯುತ ಮಕ್ಕಳಿಗೆ ಇರಲಿ, ಚೆನ್ನಾಗಿ ಓದುವ ಮಕ್ಕಳಿಗೆ ಸಹ ಇಲ್ಲಿ ಜಾಗ ಸಿಗುವುದು ಕಷ್ಟ.
    ಶಿಕ್ಷಣದ ಪದ್ಧತಿ – ಇಂದು

    ಪ್ರಚಲಿತ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ಮಕ್ಕಳಿಗೆ ಶಿಕ್ಷಣದ ಆನಂದಕ್ಕಿಂತ ಪರೀಕ್ಷೆಯ ಭಯವೇ ಹೆಚ್ಚಾಗಿದೆ. ಈಗಿನ ಶಿಕ್ಷಣ ಪದ್ಧತಿಯಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಲು ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕಾಗಿದ್ದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು. ಶಿಕ್ಷಕರು ಸಾಧಕರಾಗಿದ್ದಲ್ಲಿ, ಮಕ್ಕಳಿಗೆ ಅವರು ಒಳ್ಳೆಯ ಸಂಸ್ಕಾರವನ್ನು ನೀಡಬಹುದು.
    ಹಾಗಿದ್ದರೆ ಶಿಕ್ಷಕರು ಸಾಧಕರಾಗಲು ಏನು ಮಾಡಬೇಕು?

    ಅ. ದೈನಂದಿನ ಜೀವನದಲ್ಲಿ ನಡೆಯುವ ಪ್ರತಿಯೊಂದು ಪ್ರಸಂಗದ ಕಾರಣವನ್ನು ಹುಡುಕಿ ಅದಕ್ಕೆ ಉಪಾಯವನ್ನು ಹೇಳುವುದು ಎಂದರೆ ಸಾಧನೆ ಕಲಿಸುವುದು :ಪಠ್ಯಕ್ರಮದಲ್ಲಿರುವ ತಾತ್ತ್ವಿಕ ಮಾಹಿತಿಯನ್ನು ಕಲಿತು ಮಕ್ಕಳಿಗೆ ಆನಂದ ಸಿಗುವುದಿಲ್ಲ. ಅದಕ್ಕಾಗಿ ಪಠ್ಯಕ್ರಮದ ಹೊರತಾಗಿ ಪ್ರತಿಯೊಂದು ಪ್ರಸಂಗದ 'ಅಧ್ಯಾತ್ಮೀಕರಣ' ಮಾಡಬೇಕು. ದೈನಂದಿನ ಜೀವನದಲ್ಲಿ ನಡೆಯುವ ಪ್ರತಿಯೊಂದು ಪ್ರಸಂಗದ ಕಾರಣವನ್ನು ಹುಡುಕಿ ಅದಕ್ಕೆ ಉಪಾಯವನ್ನು ಹೇಳುವುದು ಎಂದರೆ ಸಾಧನೆ ಕಲಿಸುವುದು.

    ಆ. ಧರ್ಮಾಚರಣೆ ಮತ್ತು ಸಾಧನೆ :ಸ್ವತಃ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಬೇಕು. ವಿದ್ಯಾರ್ಥಿಗಳಿಗೆ ಸಾಧನೆಯನ್ನು ಸುಲಭವಾಗಿ ಹೇಳಲು ಶಿಕ್ಷಕರಿಗೆ ಬರಬೇಕು.

    ಇ. ಅಭ್ಯಾಸ ವೃತ್ತಿ :ಸತತವಾಗಿ ಸತ್ಯವನ್ನು ಅರಿಯುವ ಜಿಜ್ಞಾಸು ವೃತ್ತಿ ಇರಬೇಕು.

    ಈ. ಕೃತಿ :ಕೇವಲ ಉಪದೇಶ ಮಾಡದೆ ಕೃತಿಯಿಂದ ಕಲಿಸಬೇಕು.
    ಸಂಸ್ಕಾರ ಮತ್ತು ಧರ್ಮಾಚರಣೆಯನ್ನು ಕಲಿಸಲು ವಿವಿಧ ಉಪಕ್ರಮಗಳು

    ಶಾಲೆಯ ಗ್ರಂಥಾಲಯದಲ್ಲಿ ಸಂಸ್ಕಾರ ಮತ್ತು ಧರ್ಮಾಚರಣೆಯ ಪುಸ್ತಕಗಳನ್ನು ಇಡಬೇಕು.

    ಶಾಲೆಯ ಸಮಯದ ನಂತರ ಸಂಸ್ಕಾರವರ್ಗಗಳ ಆಯೋಜನೆ ಮಾಡುವುದು.

    ಮಕ್ಕಳ ಪ್ರಗತಿಯ ಕುರಿತು ಪಾಲಕರೊಂದಿಗೆ ಮಾತನಾಡುವುದು.

    ಶಾಲೆಯ ಕಾರ್ಯಕ್ರಮಗಳಲ್ಲಿ ಧರ್ಮಾಚರಣೆ ಮಾಡುವವರ, ಸಂತರ, ಸಾಧಕರ ಮಾರ್ಗದರ್ಶನದ ಆಯೋಜನೆ ಮಾಡುವುದು.

    ಇತರ ಶಿಕ್ಷಕರಿಗೂ ಧರ್ಮಾಚರಣೆ, ಸಾಧನೆಯ ಕುರಿತು ತಿಳಿಸುವುದು.

    ಇಷ್ಟನ್ನು ಶಿಕ್ಷಕರು ಮಾಡಿದರೆ ಸಮಾಜ ಸುಸಂಸ್ಕಾರಯುತವಾಗಲು ಸಹಾಯವಾಗುತ್ತದೆ. ಹೀಗೆ ಮಾಡಿದಲ್ಲಿ ಋಷಿ ಋಣ ಮತ್ತು ಸಮಾಜ ಋಣವನ್ನು ತೀರಿಸಿ ಅವರು ಈಶ್ವರನ ಕೃಪೆಗೆ ಪಾತ್ರರಾಗುತ್ತಾರೆ.
    ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಬೋಧಿಸುವ ಆವಶ್ಯಕತೆಯನ್ನು ಅರಿತ ಶಿಕ್ಷಕರು!

    ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ ಕೆಲವು ಸತ್ಪುರುಷರ ಬಗ್ಗೆ ಕ್ರಾಂತಿಕಾರರು ಅಥವಾ ರಾಷ್ಟ್ರಪುರುಷರೆಂದು ಮಾತ್ರ ನಮಗೆ ಪರಿಚಯವಿರುತ್ತದೆ. ಮುಂದಿನ ಪೀಳಿಗೆಯನ್ನು ದೇಶಾಭಿಮಾನಿಯನ್ನಾಗಿಸಲು ಅದಕ್ಕೆ ರಾಷ್ಟ್ರಭಕ್ತಿಯ ಶಿಕ್ಷಣ ನೀಡುವ ಮಹಾನ್ ಧ್ಯೇಯವನ್ನಿರಿಸಿ ಈ ವೀರಪುರುಷರು ಮಾಡಿದ ಕಾರ್ಯವು ಅಷ್ಟೇ ಶ್ರೇಷ್ಠವಾಗಿದೆ.

    ಮೊದಲ ಕ್ರಾಂತಿಕಾರರಾದ ವಾಸುದೇವ ಬಳವಂತ ಫಡಕೆ




    ೧೮೭೪ ರಲ್ಲಿ ಪೂನಾದಲ್ಲಿ ‘ಪೂನಾ ನೇಟಿವ್ ಇನ್‌ಸ್ಟಿಟ್ಯೂಟ್’ನ್ನು ಸ್ಥಾಪಿಸಿ, ಇದರ ವತಿಯಿಂದ ರಾಷ್ಟ್ರದ ಬಗ್ಗೆ ಶಿಕ್ಷಣ ಕೊಡುವ ಮೊದಲ ಶಾಲೆಯನ್ನು ಸ್ಥಾಪಿಸಿದರು.

    ಲೋಕಮಾನ್ಯ ಬಾಲ ಗಂಗಾಧರ ತಿಲಕರು


    ಇವರು ೧೮೮೦ ರಲ್ಲಿ ವಿಷ್ಣುಶಾಸ್ತ್ರಿ ಚಿಪಳೂಣಕರ ಮತ್ತು ಗೋಪಾಲ ಗಣೇಶ ಆಗರಕರ ಇವರ ಸಹಾಯದಿಂದ ಪೂನಾದಲ್ಲಿ ‘ನ್ಯೂ ಇಂಗ್ಲಿಷ್ ಸ್ಕೂಲ್’ನ್ನು ಸ್ಥಾಪಿಸಿದರು. ‘ಡೆಕ್ಕನ್ ಎಜ್ಯುಕೇಶನ್ ಸೊಸೈಟಿ’ ಮತ್ತು ‘ಫರ್ಗ್ಯುಸನ್ ಮಹಾವಿದ್ಯಾಲಯ’ವನ್ನೂ ಸ್ಥಾಪಿಸಿದರು.

    ಲಾಲಾ ಲಜಪತರಾಯರು


    ಇವರು ‘ಆಂಗ್ಲೋ ವೈದಿಕ ಕಾಲೇಜ್’ನ್ನು ಸ್ಥಾಪಿಸಿ ರಾಷ್ಟ್ರೀಯ ವೃತ್ತಿಶಿಕ್ಷಣ ಕೊಟ್ಟರು.

    ಪಂಡಿತ ಮದನಮೋಹನ ಮಾಲವೀಯ


    ಇವರು ೧ ಕೋಟಿ ೩೪ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ೧೯೧೬ ರಲ್ಲಿ ಕಾಶಿಯಲ್ಲಿ ‘ಹಿಂದೂ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿದರು.
    ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಅವಶ್ಯಕತೆ
    ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಮುಂಚೆ ನಂಬಿಗಸ್ಥರನ್ನು ಅಥವಾ ವರಿಷ್ಠರನ್ನು ಕೇಳಿ ತಿಳಿದುಕೊಳ್ಳುವುದು ಮನುಷ್ಯರ ಪ್ರಕೃತಿದತ್ತ ಸ್ವಭಾವವಾಗಿದೆ

    ''ಪ್ರತಿದಿನ ಕಂಡು ಬರುತ್ತಿರುವ ಎಳೆವಯಸ್ಸಿನ ಮಕ್ಕಳ ಆತ್ಮಹತ್ಯೆಯ ಪ್ರಕರಣಗಳು ರಾಷ್ಟ್ರ ಮಟ್ಟದಲ್ಲಿ ಗಂಭೀರವಾದ ಚಿಂತೆಯ ಸ್ವರೂಪವನ್ನು ತಾಳಿವೆ. ದಿನೇ ದಿನೇ ಇಂತಹ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಆತ್ಮಹತ್ಯೆಗಳು ಹೊಸದೇನಲ್ಲ, ಆದರೂ ಈ ರೀತಿಯ ಸರಣಿ ಆತ್ಮಹತ್ಯೆಗಳ ಪ್ರಕರಣಗಳು ಇದೇ ಮೊದಲನೇ ಬಾರಿ ಎಲ್ಲರ ಗಮನವನ್ನು ಸೆಳೆಯುತ್ತಿವೆ. ಆಡುವ ವಯಸ್ಸಿನಲ್ಲಿ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ಆಶ್ಚರ್ಯಕರವಾದರೂ, ಅವರನ್ನು ಈ ನಿರ್ಣಯದತ್ತ ತಳ್ಳುವ ಪರಿಸ್ಥಿತಿಗಳನ್ನು, ಆ ಪರಿಸ್ಥಿತಿಗಳನ್ನು ನಿರ್ಮಿಸುವ ಘಟಕಗಳನ್ನು ಗುರುತಿಸಿ, ಆ ಘಟಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅಷ್ಟೇ ಅವಶ್ಯಕವಾಗಿದೆ.

    ಜೀವನವೆಂದರೇನು? ಜೀವನದಲ್ಲಿ ಉದ್ಭವಿಸುವ ಅನೇಕ ಸನ್ನಿವೇಶಗಳನ್ನು ಎದುರಿಸುವುದು ಹೇಗೆ, ಇಂತಹ ಸನ್ನಿವೇಶಗಳಲ್ಲಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು, ಅವುಗಳಿಂದ ಹೇಗೆ ಕಲಿಯುವುದು ಮತ್ತು ಬೆಳೆಯುವುದು, ಕೌಟುಂಬಿಕ ಮತ್ತು ಔದ್ಯೋಗಿಕ ಜೀವನವನ್ನು ಒಟ್ಟಾಗಿ ನಿಭಾಯಿಸಿ ಹೇಗೆ ಮುನ್ನಡೆಯುವುದು ಮುಂತಾದ ಅನೇಕ ವಿಷಯಗಳನ್ನು ಮನುಷ್ಯನು ತನ್ನ ವಿದ್ಯಾರ್ಥಿ ದೆಸೆಯಲ್ಲಿ ಕಲಿಯುತ್ತಾನೆ. ಈ ಸಂದರ್ಭದಲ್ಲಿ ಬಂದಂತಹ ಅನುಭವಗಳನ್ನು ಸಂಗ್ರಹಿಸಿ ಜೀವನದಲ್ಲಿ ಮುನ್ನಡೆಯುತ್ತಾನೆ. ಜೀವನದ ಈ ನಿರ್ಣಾಯಕ ಘಟ್ಟದಲ್ಲಿ ಎಲ್ಲರಿಗೂ ಯೋಗ್ಯ ಸಮರ್ಪಕ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ, ತನ್ನ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಹವರ್ತಿಗಳ ಅವಶ್ಯಕತೆ ಇರುತ್ತದೆ, ಸಹಾಯ ಎಲ್ಲಿಂದ ಬರುತ್ತದೆ ಎಂಬುವುದು ಇಲ್ಲಿ ಮುಖ್ಯವಲ್ಲ. ತಂದೆ ತಾಯಿ, ಮಿತ್ರರು, ಶಿಕ್ಷರಾದರೂ ಇರಲಿ ಸಹಾಯದ ಅವಶ್ಯಕತೆ ಇರುತ್ತದೆ. ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಮುಂಚೆ ನಂಬಿಗಸ್ಥರನ್ನು ಅಥವಾ ವರಿಷ್ಠರನ್ನು ಕೇಳಿ ನಂತರ ನಿರ್ಧಾರ ತಿಳಿದುಕೊಳ್ಳುವುದು ಮನುಷ್ಯರ ಪ್ರಕೃತಿದತ್ತ ಸ್ವಭಾವವಾಗಿದೆ. ಈ ನಿರ್ಣಯ ಒಂದು ವಸ್ತುವನ್ನು ಖರೀದಿಸುವುದರ ಬಗ್ಗೆ ಇರಬಹುದು, ಅಥವಾ ಜೀವನದ ಮಹತ್ವದ ನಿರ್ಣಯವಾಗಿರಬಹುದು. ಈ ಸಮಯದಲ್ಲಿ ಯೋಗ್ಯ ಮಾರ್ಗದರ್ಶನ ಸಿಗದಿದ್ದರೆ, ಮನುಷ್ಯನು ಅಯೋಗ್ಯ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂಬುದರಲ್ಲಿ ಸಂದೇಹವಿಲ್ಲ.
    ಮಕ್ಕಳಿಗೆ ಮಾನಸಿಕ ಆಧಾರ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಅವಶ್ಯಕತೆಯಿರುವುದರಿಂದ ಈ ಕೋರಿಕೆಯನ್ನು ನೀಗಿಸಲು ಪಾಲರಿಗೆ ಸಾಧ್ಯವಿದೆ.

    ಪಾಲಕರು ತಮ್ಮ ಮೇಲೆ ಹೇರುವ ತೀವೃ ಒತ್ತಡ, ತನ್ನಲ್ಲಿ ಇಟ್ಟಿರುವ ತೀವ್ರ ಅಪೇಕ್ಷೆ ಇವುಗಳು ಮಕ್ಕಳ ಆತ್ಮಹತ್ಯಾ ಯತ್ನದ ಹಿಂದಿನ ಮುಖ್ಯ ಕಾರಣಗಳು ಎಂದು ತಿಳಿಯಲಾಗುತ್ತದೆ. ಹೆಚ್ಚಿನಾಂಶ ಸತ್ಯವೂ ಆಗಿರುತ್ತದೆ. ಇಂದಿನ ತೀವ್ರ ಪೈಪೋಟಿಯ ಯುಗದಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು, ಅವರ ಪ್ರತಿಯೊಂದು ಆಸೆ ಆಕಾಂಕ್ಷೆಗಳನ್ನು ಪೂರೈಸಲು ತಮ್ಮ ಉದ್ಯೋಗದಲ್ಲಿ ಮಗ್ನರಾಗಿರುವುದು ಕಂಡುಬರುತ್ತಿದೆ. ಎಳೆಯ ವಯಸ್ಸಿನಲ್ಲಿ ಮಕ್ಕಳಲ್ಲಿ ಸುಸಂಸ್ಕಾರಗಳನ್ನು ಬೆಳೆಸಬೇಕಾಗುತ್ತದೆ, ಆದರೆ ಇದೇ ಸಮಯದಲ್ಲಿ ತಂದೆ ತಾಯಂದಿರು ಉದ್ಯೋಗಸ್ಥರಾಗಿದ್ದು ಮನೆಯಿಂದ ಹೆಚ್ಚಿನ ಸಮಯ ದೂರವಿರುವುದರಿಂದ ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ದೊರೆಯುವುದಿಲ್ಲ. 
    ಶಿಕ್ಷಕರ ಧರ್ಮಪಾಲನೆ !
    ಶಿಕ್ಷಕರಲ್ಲಿ ಧರ್ಮಪಾಲನೆಯ ಅಭಾವ, ಮಕ್ಕಳು ಮುಂದೆ ಭ್ರಷ್ಟಾಚಾರಿಗಳಾಗುವುದು !

    ನಿಜ ಹೇಳುವುದಾದರೆ, ವಿದ್ಯಾರ್ಥಿಗಳಲ್ಲಿ ಸದ್ಗುಣಗಳ ವೃದ್ಧಿ ಮಾಡಿ ಅವುಗಳ ಜೋಪಾನ ಮಾಡುವುದು ಶಿಕ್ಷಕರ ಧರ್ಮವಾಗಿದೆ. ಏಕೆಂದರೆ ಒಬ್ಬ ವಿದ್ಯಾರ್ಥಿಯು ಶಾಲೆಯಿಂದ ಸದ್ಗುಣಿಯೆಂದು ಹೊರಬಿದ್ದ ನಂತರ ಸಮಾಜಕ್ಕೆ ಅವನಿಂದ ಲಾಭವಾಗುತ್ತದೆ. ಸಮಾಜ ಹಾಗೂ ರಾಷ್ಟ್ರ ಇವುಗಳಿಗೋಸ್ಕರ ಸಕ್ಷಮ ಹಾಗೂ ಒಳ್ಳೆ ಗುಣಗಳಿಂದ ಸಂಪನ್ನ, ಪರಿಪೂರ್ಣ ನಾಗರಿಕರನ್ನು ನಿರ್ಮಿಸುವುದು ಶಿಕ್ಷಕರ ಕರ್ತವ್ಯ! ಒಂದು ವೇಳೆ ಚಿಂತನೆ ಮಾಡಿದಲ್ಲಿ, ನಮ್ಮಿಂದ ಒಳ್ಳೆಯ ನಾಗರಿಕರ ನಿರ್ಮಿತಿ ಆಗುತ್ತಿಲ್ಲ ಎಂಬುವುದು ನಮ್ಮ ಗಮನಕ್ಕೆ ಬರುವುದು. ಇದರ ಅರ್ಥ ನಾವು ಧರ್ಮಪಾಲನೆ ಮಾಡುತ್ತಿಲ್ಲ ಎಂದು! ‘ಮಕ್ಕಳು ಪರೀಕ್ಷೆಯಲ್ಲಿ ಒಳ್ಳೆ ಅಂಕಗಳು ಪಡೆದರೆ ಆಯಿತು, ನಮ್ಮ ಕರ್ತವ್ಯ ಅಲ್ಲಿಗೆ ಮುಗಿಯಿತು’ ಎಂಬುವುದು ಶಿಕ್ಷಕರ ಧೋರಣೆ. ಆದರೆ ಇದಿಷ್ಟು ಮಾಡುವುದರಿಂದ ಅವರ ಕರ್ತವ್ಯ ಮುಗಿಯುವದಿಲ್ಲ. ಅಂಕಗಳಿಂದ ಮಕ್ಕಳಿಗೆ ನೌಕರಿ ಹಾಗೂ ಹಣ ಸಿಗಬಹುದು, ಆದರೆ ಅವರು ಪ್ರೇಮ, ಪ್ರಾಮಾಣಿಕತೆ ಹಾಗೂ ನೀತಿವಂತರಾಗಿ ಸಮಾಜ ಸೇವೆ ಮಾಡುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ; ಆದುದರಿಂದ ಇಂದು ಪ್ರತಿಯೊಂದು ಕಾರ್ಯಾಲಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳು ನೋಡಲು ಸಿಗುತ್ತಾರೆ. ಅವರು ನಾಚಿಕೆಯಿಲ್ಲದೇ ಭ್ರಷ್ಟಾಚಾರ ಮಾಡುತ್ತಾರೆ. ‘ನಾವು ಸಮಾಜದ ವ್ಯಕ್ತಿಗೆ ತೊಂದರೆ ಕೊಡುತ್ತಿದ್ದೇವೆ’, ಎಂಬುವುದರ ಬಗ್ಗೆ ಅವರಿಗೆ ಏನೂ ಅನ್ನಿಸುವುದಿಲ್ಲ.
    ಶಿಕ್ಷಕರು ಸಮಾಜಕ್ಕೆ ಸೇವಕರನ್ನು ನೀಡಿದಲ್ಲಿಯೇ ಅವರ ಧರ್ಮಪಾಲನೆಯಾಗುವುದು !

    ಶಿಕ್ಷಕರಾದ ನಾವು ಸಮಾಜಕ್ಕೆ ನಿಜವಾದ ಸೇವಕರನ್ನು ಕೊಡಬೇಕು. ಇದೇ ಶಿಕ್ಷಕರ ನಿಜವಾದ ಧರ್ಮ ಹಾಗೂ ಕರ್ತವ್ಯವಾಗಿದೆ. ಅವರು ವೈದ್ಯರಾಗಿರಬಹುದು, ಅಭಿಯಂತರಾಗಿರಬಹುದು ಅಥವಾ ಸರಕಾರಿ ಅಧಿಕಾರಿಯಾಗಿರಬಹುದು; ಎಲ್ಲ ಕ್ಷೇತ್ರಗಳಲ್ಲಿಯೂ ಸಮಾಜಕ್ಕೆ ‘ಸೇವಕ’ರನ್ನು ನೀಡಿದರೆ ನಾವು ನಿಜವಾದ ಧರ್ಮಪಾಲನೆ ಮಾಡಿದಂತೆ!
    ನಾವು ನಮ್ಮ ಧರ್ಮಪಾಲನೆ ಮಾಡದಿದ್ದರೆ, ವ್ಯಕ್ತಿಯ, ಪರೋಕ್ಷವಾಗಿ ಸಮಾಜದ ಹಾಗೂ ರಾಷ್ಟ್ರದ ಅಂದರೆ ನಮ್ಮ ವಿನಾಶವನ್ನೇ ನಾವು ತಂದುಕೊಳ್ಳುತ್ತೇವೆ ಎಂಬುದನ್ನು ಮರೆಯಬಾರದು.
    ಅಧ್ಯಾಪನವೆಂದರೆ ಸಾಧನೆ !
    ಶಿಕ್ಷಣದ ಧ್ಯೇಯ ಮತ್ತು ಶಿಕ್ಷಣವನ್ನು ಸಾಧ್ಯಗೊಳಿಸುವ ವಿಷಯವನ್ನು ಮರೆತಿರುವ ಇಂದಿನ ಶಿಕ್ಷಣಪದ್ಧತಿ

    ಶಿಕ್ಷಣದ ಧ್ಯೇಯ :
    ೧. ‘ವಿದ್ಯಾರ್ಜನೆ' ಶಿಕ್ಷಣದ ಮುಖ್ಯ ಉದ್ಧೇಶ
    ೨. ‘ಸಾವಿದ್ಯಾ ಯಾ ವಿಮುಕ್ತಯೇ' : ನಮ್ಮ ದುಃಖವನ್ನು ದೂರಗೊಳಿಸಿ ನಮಗೆ ನಿರಂತರ ಆನಂದ ಹೇಗೆ ಲಭಿಸುತ್ತದೆ, ಎಂಬುವುದರ ಜ್ಞಾನವು ಯಾವುದರಿಂದ ದೊರೆಯುವುದೋ, ಅದುವೇ ವಿದ್ಯೆ.

    ಶಿಕ್ಷಣದಿಂದ ಸಾಧ್ಯಗೊಳ್ಳುವ ವಿಷಯಗಳು :
    ೧. ಜ್ಞಾನಸಂವರ್ಧನೆ ಮತ್ತು ಬುದ್ಧಿಯ ವಿಕಾಸ
    ೨. ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯ ಮತ್ತು ನಿಪುಣತೆ
    ೩. ಜೀವನದಲ್ಲಿ ನೈತಿಕ ಮೌಲ್ಯಗಳ ಜೋಪಾಸನೆ ಮತ್ತು ಸಂವರ್ಧನೆ
    ೪. ಚಾರಿತ್ರ್ಯ ಸಂಪನ್ನ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವುದು
    ೫. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸುಧಾರಿಸುವುದು ಹಾಗೂ ಅದನ್ನು ಮುಂದಿನ ಪೀಳಿಗೆಗೆ ನೀಡುವುದು.
    ೬. 'ನಮ್ಮ ಜೀವನದ ಧ್ಯೇಯವೇನಿರಬೇಕು, ಅದನ್ನು ಹೇಗೆ ಸಾಧ್ಯಗೊಳಿಸಬೇಕು', ಎಂಬುದರ ಮಾರ್ಗದರ್ಶನ ಮಾಡುವುದು
    ೭. ವಿದ್ಯಾರ್ಥಿಗಳನ್ನು ಆದರ್ಶ ನಾಗರಿಕರನ್ನಾಗಿ ಬೆಳೆಸುವುದು
    ಇಂದಿನ ಶಿಕ್ಷಣಪದ್ಧತಿ

    ಜಾಣ ವಿದ್ಯಾರ್ಥಿಗಳು ಹೆಚ್ಚೆಚ್ಚು ಅಂಕಗಳನ್ನುಗಳಿಸಿ ಆಧುನಿಕ ವೈದ್ಯರು, ಅಭಿಯಂತರು, ಅಥವಾ ದೊಡ್ಡ ಅಧಿಕಾರಿಗಳಾಗಬಹುದು; ಆದರೆ ಅವರು ಸುಖಿಯಾಗಿ ಹಾಗೂ ಸಮಾಧಾನದಿಂದ ಇರುವರೆಂದು ಹೇಳಲು ಸಾಧ್ಯವಿಲ್ಲ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಹೆಚ್ಚೆಚ್ಚು ಅಂಕಗಳನ್ನುಗಳಿಸಿ ಅವರನ್ನು ಆಧುನಿಕ ವೈದ್ಯ, ಅಭಿಯಂತರ ಅಥವಾ ಇತರ ಒಳ್ಳೆಯ ವ್ಯವಸಾಯದಲ್ಲಿ ಹೇಗೆ ಪ್ರವೇಶ ನೀಡಬಹುದು, ಎಂಬುವುದರ ದಿಕ್ಕಿನಲ್ಲೇ ಪಾಲಕರ ಹಾಗೂ ವಿದ್ಯಾರ್ಥಿಗಳ ಗಮನವಿರುತ್ತದೆ. ಸಮಾಜ ಕೂಡ ಶಿಕ್ಷಣ ಸಂಸ್ಥೆಗಳ ಪರೀಕ್ಷೆಯ ಫಲನಿಷ್ಪತ್ತಿ ಶೇ. ಎಷ್ಟು ಬಂದಿದೆ, ಎಂಬುದರ ಆಧಾರ ಇಟ್ಟುಕೊಂಡು ಅದು ಯೋಗ್ಯವೇ ಅಯೋಗ್ಯವೆಂಬುದನ್ನು ನಿರ್ಣಯಿಸುತ್ತದೆ. ಈ ಅಂಕಗಳನ್ನುಗಳಿಸಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಗಳ ಉತ್ತರ ಬರೆಯುವ ನಿರಂತರ ಅಭ್ಯಾಸವನ್ನು ಮಾಡಿಸುವುದು, ನೋಟ್ಸ್ ನೀಡುವುದು, ಇತ್ಯಾದಿ ಮಾರ್ಗದಿಂದ ಮಾಡುತ್ತಿರುತ್ತಾರೆ. ಜಾಣ ವಿದ್ಯಾರ್ಥಿಗಳು ಬಹಳಷ್ಟು ಅಧ್ಯಯನ ಮಾಡಿರುವುದರಿಂದ ಹೆಚ್ಚು ಅಂಕಗಳನ್ನುಗಳಿಸಿ ಆಧುನಿಕ ವೈದ್ಯ, ಅಭಿಯಂತರ ಅಥವಾ ದೊಡ್ಡ ಅಧಿಕಾರಿಗಳಾಗುವರು ನಿಜ; ಆದರೆ ಅವರು ಸುಖ ಸಮಾಧಾನ ಹೊಂದುವರು, ಎಂಬುದರ ಭರವಸೆ ಇಲ್ಲ.

    ಪ್ರತಿಯೊಂದು ಕೃತಿಯನ್ನು ಧರ್ಮದ ನಿಯಮಕ್ಕನುಸಾರವೇ ಮಾಡಬೇಕೆಂದು ಭಾರತೀಯ ಸಂಸ್ಕೃತಿ ಹೇಳುತ್ತದೆ : ಹಿಂದಿನ ಕಾಲದಲ್ಲಿ ಮಕ್ಕಳಿಗೆ ಉಪನಯನವಾದನಂತರ ಗುರುವಿನ ಸಾನಿಧ್ಯದಲ್ಲಿ ಧರ್ಮದ ಶಿಕ್ಷಣ ನೀಡಲಾಗುತ್ತಿತ್ತು. ಅವನ ಜೀವನದ ಧ್ಯೇಯವೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವುಗಳ ಪ್ರಾಪ್ತಿ ಎಂಬುದನ್ನು ಅವನ ಮನಸ್ಸಿನಲ್ಲಿ ಬಿಂಬಿಸಲಾಗುತ್ತಿತ್ತು. ಪ್ರತಿಯೊಂದು ಕೃತಿಯನ್ನೂ ಕೂಡ ಧರ್ಮದಲ್ಲಿ ಹೇಳಿದ ನಿಯಮದಂತೆಯೇ ಮಾಡಬೇಕು, ಎಂದು ಭಾರತೀಯ ಸಂಸ್ಕೃತಿ ಹೇಳುತ್ತದೆ.
    ಅಧ್ಯಯನವನ್ನು ಸಾಧನೆಯೆಂದು ಮಾಡಲು ಪ್ರಾರಂಭಿಸಿದನಂತರ ಶಿಕ್ಷಕರು ಗಮನಿಸಬೇಕಾದ ವಿಷಯಗಳು.

    ನಮ್ಮ ಆದರ್ಶವನ್ನು ವಿದ್ಯಾರ್ಥಿಗಳ ಮುಂದಿಡುವುದು : ಶಿಕ್ಷಕರು ಕೇವಲ ಉಪದೇಶ ಮಾಡದೆ ತನ್ನ ಸ್ವಂತ ವಿಚಾರಗಳು ಮತ್ತು ಆಚರಣೆಗಳು ಹೇಗಿರಬೇಕೆಂಬುದನ್ನು ಅಧ್ಯಯನ ಮಾಡಬೇಕು; ಏಕೆಂದರೆ ಎದುರಿಗಿರುವ ವಿದ್ಯಾರ್ಥಿ ಶಿಕ್ಷಕರ ಪ್ರತಿಯೊಂದು ಕೃತಿಯನ್ನು ಅನುಕರಣೆ ಮಾಡುತ್ತಿರುತ್ತಾನೆ. ಅದೇ ರೀತಿ ವರ್ತಿಸಲು ಪ್ರಯತ್ನಿಸುತ್ತಿರುತ್ತಾನೆ. ಆದ್ದರಿಂದ ಶಿಕ್ಷಕನ ಪ್ರತಿಯೊಂದು ಕೃತಿಯೂ ಆದರ್ಶವಾಗಿರಬೇಕು.

    ಶಿಕ್ಷಕರು ತನ್ನ ಸ್ವಂತದ ಕೃತಿಯಿಂದ ವಿದ್ಯಾರ್ಥಿಗಳನ್ನು ತಯಾರಿಸುವುದು : ಉಪದೇಶ ಎಷ್ಟೇ ಚೆನ್ನಾಗಿದ್ದರೂ, ಅವರಿಗೆ ಆಹ್ವಾನ ಸಿಗುತ್ತದೆ; ಆದರೆ ಒಳ್ಳೆಯ ಕೃತಿಗೆ ಮಾತ್ರ ಯಾರೂ ಆಹ್ವಾನ ನೀಡಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರು ತಮ್ಮ ಕೃತಿಯಿಂದ ವಿದ್ಯಾರ್ಥಿಗಳನ್ನು ತಯಾರಿಸಬೇಕು, ಉದಾ. ಶಿಕ್ಷಕರು, ತರಗತಿಯಲ್ಲಿ ಇತರ ಶಿಕ್ಷಕರು, ಅಧಿಕಾರಿ ಅಥವಾ ಇತರರು ಭೇಟಿಯಾಗಲು ಬಂದರೆ, ವಿದ್ಯಾರ್ಥಿಗಳಿಗೆ ನಮಸ್ಕಾರ ಮಾಡಲು ಕಲಿಸುತ್ತಾರೆ, ಆದರೆ ಅವರು ಸ್ವತಃ ನಮಸ್ಕಾರ ಮಾಡುವುದಿಲ್ಲ. ಅದೇ, ಶಿಕ್ಷಕರು ಹಾಗೆ ಕೃತಿ ಮಾಡಿದರೆ, ಹೆಚ್ಚು ಪ್ರಮಾಣದಲ್ಲಿ ವಿದ್ಯಾರ್ಥಿಗಳ ಮೇಲೆ ಅದರ ಪ್ರಭಾವ ಬೀರುತ್ತದೆ.

    ಮಕ್ಕಳಿಗೆ ಪಠ್ಯೇತರ ವಿಷಯಗಳನ್ನು ಓದಲು ಹೇಳುವಾಗ ಶಿಕ್ಷಕರು ಯಾವುದೇ ಒಂದು ಪುಸ್ತಕದ ವಿಷಯಗಳನ್ನು ಹೇಳಿದರೆ, ಅವರಿಗೆ ಅದನ್ನು ಓದಲು ಆಸಕ್ತಿ ಬರುತ್ತದೆ.
    ಕಲಿಸುವ ಎರಡು ಪದ್ಧತಿಗಳು

    ತಾತ್ತ್ವಿಕ ಅಂಗ : ಪುಸ್ತಕದ ವಿಷಯಗಳನ್ನು ಓದಿ, ಕರಿಹಲಗೆ ಮತ್ತು ಸೀಮೆಸುಣ್ಣ ಇವುಗಳ ಸಹಾಯದಿಂದ, ಬಾಯಿಯಿಂದ ವಿವರಿಸಿ ಹೇಳುವುದು ಅಥವಾ ಯಾವುದೇ ಶೈಕ್ಷಣಿಕ ಸಾಹಿತ್ಯವನ್ನು ಸಿದ್ಧಪಡಿಸಿ ಅದರ ಮೂಲಕ ವಿವರಿಸಿ ಹೇಳುವ ಪ್ರಯತ್ನ ಮಾಡುವುದು. ಆದರೆ ಇಂದು ಮೊದಲನೇ ವಿಧಾನವೇ ಹೆಚ್ಚು ಪ್ರಯೋಗವಾಗುತ್ತದೆ.

    ಪ್ರಾಯೋಗಿಕ ಅಂಗ : ಪ್ರತಿಯೊಂದು ಘಟಕವನ್ನು ಬಾಯಿಯಿಂದ ಹೇಳುವಾಗ ವಿದ್ಯಾರ್ಥಿಗಳಿಗೆ ಕೃತಿಯಿಂದ ಕಲಿಸಿದರೆ, ಅದು ಚೆನ್ನಾಗಿ ಅರ್ಥವಾಗುತ್ತದೆ.
    ಸಂಸ್ಕಾರಗಳನ್ನು ಬೆಳೆಸುವ ವಿಷಯವನ್ನು ಹೇಳಿ ಅದರಿಂದ ಏನು ಬೋಧನೆ ಪಡೆಯಬೇಕೆಂಬುದನ್ನು ಹೇಳುವುದು.

    ಶಿಕ್ಷಕರು ಪ್ರತಿಯೊಂದು ಘಟಕದ ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿಸಲು ಪ್ರಯತ್ನಿಸುವುದು. ಅಂದರೆ ಅದರಿಂದ ಜ್ಞಾನದ ಜೊತೆಗೆ ಸಂಸ್ಕಾರ ಮಾಡಲು ಕೂಡ ಸಾಧ್ಯವಾಗಬಹುದು, ಮನೋರಂಜನೆಯಿಂದ ಸಂಸ್ಕಾರ, ಜ್ಞಾನ ಇತ್ಯಾದಿ ವಿಷಯಗಳನ್ನು ಶಿಕ್ಷಕರು ಒಂದೇ ಬಾರಿ ಸಾಧ್ಯಗೊಳಿಸಬಹುದು.
    ಸಂಸ್ಕಾರಕ್ಷಮ ವಯಸ್ಸು

    ವಯಸ್ಸು ಕಡಿಮೆ ಇದ್ದಷ್ಟು ಸಂಸ್ಕಾರಗಳನ್ನು ಬಿಂಬಿಸಿಕೊಳ್ಳುವ ಕ್ಷಮತೆ ಹೆಚ್ಚಿರುತ್ತದ. ಸದ್ಗುಣಗಳನ್ನು ಬಾಲ್ಯಾವಸ್ಥೆಯಲ್ಲಿಯೇ ಗ್ರಹಿಸಲು ಸಾಧ್ಯವಾಗುತ್ತದೆ. ವಿಚಾರ ಮತ್ತು ಕೃತಿ ಚೆನ್ನಾಗಿ ಆಗಲು ಸಂಸ್ಕಾರಗಳ ಅವಶ್ಯಕತೆಯಿರುತ್ತದೆ. ಶಾಲೆಯ ವಯಸ್ಸು ಸಂಸ್ಕಾರಕ್ಕಾಗಿ ಯೋಗ್ಯವಾಗಿರುತ್ತದೆ ಎಂಬುದನ್ನು ಗಮನಿಸಿ ಶಿಕ್ಷಕರು ತಮ್ಮ ಕಾರ್ಯವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಶಿಕ್ಷಕರು ಸಮಾಜಋಣವನ್ನು ತೀರಿಸಬಹುದು. ಶಿಕ್ಷಕರು ಈ ಕರ್ಮವನ್ನು ತಮ್ಮ ಧರ್ಮವೆಂದು ಆಚರಿಸಿದರೆ, ಅಧ್ಯಾಪನವು ಸಾಧನೆಯಾಗುವುದು. ಅನ್ನದಾನ, ಸುವರ್ಣದಾನ ಇತ್ಯಾದಿಗಳಿಗಿಂತ ವಿದ್ಯಾದಾನವು ಸರ್ವಶ್ರೇಷ್ಠವಾಗಿದೆ.
    ಒಳ್ಳೆಯ ಹವ್ಯಾಸಗಳು

    ಯಾವುದೇ ವಿಷಯವನ್ನು ವಿತ್ತೀಯ ಉದ್ಧೇಶದಿಂದ ಮಾಡದೆ ಆ ವಿಷಯದಲ್ಲಿರುವ ಆಸಕ್ತಿಯಿಂದ, ಇಷ್ಟವಾಗುತ್ತದೆಯೆಂದು ಸಮಯವಿರುವಾಗ ಮಾಡುವಂತಹ ಕೃತಿ ಎಂದರೆ ಹವ್ಯಾಸ. ಇದರಿಂದ ಮಕ್ಕಳು ಸಮಯ ವ್ಯರ್ಥ ಮಾಡದೆ ಯಾವಾಗಲೂ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಾರೆ. ಅದರಿಂದ ಜೀವನ ಆನಂದಮಯ ಹಾಗೂ ಮನಸ್ಸು ಪ್ರಸನ್ನವಾಗಿರುತ್ತದೆ. ವಿದ್ಯಾರ್ಥಿಗಳ ಒಲವು ಹೇಗಿದೆಯೆಂದು ನೋಡಿ ಆಸಕ್ತಿಯನ್ನು ಜೋಪಾನ ಮಾಡಲು ಪ್ರೋತ್ಸಾಹ ನೀಡಬೇಕು. ಇದೆಲ್ಲವನ್ನು ಮಾಡಲು ಶಿಕ್ಷಕರಿಗೆ ತಪಶ್ಚರ್ಯ ಅಂದರೆ ಸಾಧನೆ ಮಾಡಬೇಕಾಗುವುದು.
    ಶಿಕ್ಷಣವು ಹೇಗಿರಬೇಕು ?
    ಕ್ಷಾತ್ರ ಹಾಗೂ ಬ್ರಾಹ್ಮ ತೇಜವನ್ನು ನಿರ್ಮಿಸುವ ಶಿಕ್ಷಣವೇ ನಿಜವಾದ ಶಿಕ್ಷಣ

    ತರುಣರಿಗೆ ಕಡ್ಡಾಯವಾಗಿ ಸೈನ್ಯದ ತರಬೇತಿಯೊಂದಿಗೆ ಸಂತರ, ದೇಶಭಕ್ತರ ಹಾಗೂ ಕ್ರಾಂತಿಕಾರರ ಜೀವನ ಚರಿತ್ರೆಗಳನ್ನು ಅಧ್ಯಯನಕ್ಕಾಗಿ ನೀಡಿದಲ್ಲಿ ಅವರಿಗೆ ದೇಶಕ್ಕಾಗಿ ಜೀವಿಸಲು ಹಾಗೂ ಪ್ರಾಣಾರ್ಪಣೆ ಮಾಡಲು ಸ್ಪೂರ್ತಿ ದೊರೆಯುತ್ತದೆ.ಶಿಕ್ಷಣವು ಹೇಗಿರಬೇಕು ಎಂಬುದರ ವಿಚಾರ ಹಾಗೂ ಪೂರಕ ಕೃತಿ ಅವಶ್ಯಕವಾಗಿದೆ. ಭಾರತದಲ್ಲಿ ಆಗಿಹೋದ ಕ್ರಾಂತಿಕಾರರು, ಸಂತರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಹುತಾತ್ಮರಾದ ದೇಶಭಕ್ತರು, ಶಾಸ್ತ್ರಜ್ಞರು, ಸಮಾಜೋದ್ಧಾರಕರು, ಸಮಾಜದ ಉತ್ಥಾನಕ್ಕಾಗಿ ಸಂಘಟನೆಯನ್ನು ನಿರ್ಮಿಸಲು ತಮ್ಮ ಜೀವನವನ್ನು ಸವೆಸಿದವರು, ಇವರೆಲ್ಲರ ಜೀವನ ಚರಿತ್ರೆಯು ಯುವಪೀಳಿಗೆಯ ಹಾಗೂ ಮಕ್ಕಳ ಪಠ್ಯಕ್ರಮದ ಭಾಗವಾಗಲೇಬೇಕು. ಮಕ್ಕಳಿಗೆ ಕಡ್ಡಾಯವಾಗಿ ೨ ವರ್ಷಗಳ ಸೈನ್ಯದ ತರಬೇತಿ ಇರಬೇಕು. ಸಂತರು ರಚಿಸಿದ ಗ್ರಂಥಗಳನ್ನು ಮಕ್ಕಳ ಅಧ್ಯಯನದಲ್ಲಿ ಸೇರಿಸಬೇಕು. ತರುಣರಿಗೆ ಭಗತಸಿಂಗ, ರಾಜಗುರು, ಸುಖದೇವ, ವಾಸುದೇವ ಬಲವಂತ ಫಡಕೆ ಹಾಗೂ ಸ್ವಾ. ಸಾವರಕರರ ಎಲ್ಲ ಕಥೆಗಳು ತಿಳಿದಿರಬೇಕು.

    ಜೀವನವು ಶುದ್ಧ ಆಚರಣೆಯ, ಪ್ರಾಮಾಣಿಕ, ಪಾರದರ್ಶಕ, ಶ್ರಮಿಕ ಹಾಗೂ ದೇಶಭಕ್ತಿಯದ್ದಾಗಿರಬೇಕು. ದೇಶಕ್ಕಾಗಿ ಜೀವಿಸುವ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಪ್ರೇರಣೆಯನ್ನು ನೀಡುವ ಶಿಕ್ಷಣದಿಂದಲೇ ದೇಶವು ವೈಭವಶಾಲಿಯಾಗುವುದು.

    – ಶ್ರೀ. ಅನಿಲ ಕಾಂಬಳೆ (ಮಾಸಿಕ ಲೋಕಜಾಗರ, ಅಮರನಾಥ ಯಾತ್ರಾ ವಿಶೇಷಾಂಕ ೨೦೦೮)

    ಉಚ್ಚಶಿಕ್ಷಣಕ್ಕಿಂತಲೂ ಸುಸಂಸ್ಕಾರಯುತ ಶಿಕ್ಷಣವು ಮಹತ್ವದ್ದಾಗಿದೆ

    ಇತ್ತೀಚಿನ ಮಕ್ಕಳು ಹಾಗೂ ತರುಣರಿಗೆ ಪಂಚತಂತ್ರ, ರಾಮಾಯಣ, ಮಹಾಭಾರತ ಹಾಗೂ ಕ್ರಾಂತಿವೀರರ ಕಥೆಗಳು ತಿಳಿದಿಲ್ಲ; ಏಕೆಂದರೆ ಅವರಿಗೆ ಈ ಬಗ್ಗೆ ಅವರ ಪಾಲಕರು ಹೇಳಿರುವುದಿಲ್ಲ. ಹ್ಯಾರಿ ಪಾಟರ ಓದಿ ಸಂಸ್ಕಾರಯುತ ಪೀಳಿಗೆ ನಿರ್ಮಾಣವಾಗುವುದಿಲ್ಲ. ಸ್ವಾತಂತ್ರ್ಯಾನಂತರದ ೬೦ ವರ್ಷಗಳಲ್ಲಿ ಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸುವಲ್ಲಿ ವಿಫಲರಾಗಿರುವುದು ಒಂದು ಲಜ್ಜಾಸ್ಪದ ಸಂಗತಿಯಾಗಿದೆ. ಉಚ್ಛಶಿಕ್ಷಿತರಿರುವುದು ಹಾಗೂ ಸಂಸ್ಕಾರಯುತರಾಗಿರುವುದರ ನಡುವೆ ವ್ಯತ್ಯಾಸವಿದೆ !

    –ಡಾ. ಸಚ್ಚಿದಾನಂದ ಶೇವಡೆ (ಶ್ರೀಗಜಾನನ ಆಶೀಷ, ಮಾರ್ಚ ೨೦೧೧)

    ಮೌಲ್ಯಶಿಕ್ಷಣ

    ಇಂದಿನ ತರುಣ ವಿದ್ಯಾರ್ಥಿಗಳು ವಿನಾಶಕಾರಿ(destructive)ಯಾಗಿದ್ದಾರೆ. ಅವರನ್ನು ದುಷ್ಟಪ್ರವೃತ್ತಗಳಿಂದ ಪರಾವೃತ್ತಗೊಳಿಸಲು ಜಗತ್ತಿನಾದ್ಯಂತ ಶಿಕ್ಷಣತಜ್ಞರು ಅಭ್ಯಾಸಕ್ರಮದಲ್ಲಿ ಮೌಲ್ಯಶಿಕ್ಷಣ (value education)ದ ಅವಶ್ಯಕತೆಯನ್ನು ಹೇಳಿದ್ದಾರೆ. 'ಮೌಲ್ಯಶಿಕ್ಷಣದಿಂದ ಅವರಲ್ಲಿನ ಅಸುರೀ ಪ್ರವೃತ್ತಿಯ ನಾಶವಾಗಿ ಅವರು ಆದರ್ಶ ನಾಗರೀಕರಾಗುವರು' ಎಂಬುದು ಶಿಕ್ಷಣತಜ್ಞರ ಅಭಿಪ್ರಾಯವಾಗಿದೆ.

    ಚಾರಿತ್ರ್ಯವನ್ನು ನಿರ್ಮಿಸುವ ಶಿಕ್ಷಣ

    ಜೀವನನಿರ್ಮಿತಿ, ಮಾನವನಿರ್ಮಿತಿ, ಶೀಲ ಹಾಗೂ ಚಾರಿತ್ರ್ಯದ ನಿರ್ಮಿತಿ ಹಾಗೂ ವಿಚಾರಗಳ ಏಕರೂಪತೆ ಈ ಐದು ವಿಷಯಗಳ ಬಗ್ಗೆ ಶಿಕ್ಷಣ ದೊರೆತು ಅದರ ಪಾಲನೆಯಾದರೆ ಆ ವ್ಯಕ್ತಿಯು ಆದರ್ಶ ವ್ಯಕ್ತಿಯಾಗುತ್ತಾನೆ. ಸದ್ಯದ ಶಿಕ್ಷಣವೆಂದರೆ ಮಾಹಿತಿಯನ್ನು ತಲೆಯಲ್ಲಿ ತುಂಬಿಸುವುದಾಗಿದೆ. ತಲೆಯಲ್ಲಿ ಉಳಿದ ಈ ಮಾಹಿತಿಯು ಪಚನವಾಗದಿರುವುದರಿಂದ ಜೀವನದುದ್ದಕ್ಕೂ ಗೊಂದಲ ನಿರ್ಮಾಣವಾಗುತ್ತಿರುತ್ತದೆ. ನಮಗೆ ಜೀವನ, ಮಾನವ, ಶೀಲ ಹಾಗೂ ಚಾರಿತ್ರ್ಯವನ್ನು ನಿರ್ಮಿಸುವ ಹಾಗೂ ವಿಚಾರಗಳನ್ನು ಸಮ್ಮಿಲಿತಗೊಳಿಸುವ ಶಿಕ್ಷಣ ಬೇಕು. ನೀವು ಕೇವಲ ಈ ಐದು ವಿಷಯಗಳನ್ನು ಜೀರ್ಣಿಸಿ ಅದನ್ನು ಪಾಲಿಸಿದರೆ ನೀವು ಸಂಪೂರ್ಣ ಗ್ರಂಥಾಲಯವನ್ನು ಅರಗಿಸಿಕೊಂಡಿರುವ ವ್ಯಕ್ತಿಯಂತೆ ಹೆಚ್ಚು ಶಿಕ್ಷಿತರಾಗುವಿರಿ. ಈ ಶಿಕ್ಷಣವು ರಾಷ್ಟ್ರದ ಆದರ್ಶಗಳನ್ನು ಎತ್ತಿ ಹಿಡಿಯುವುದು ಹಾಗೂ ಬಹುತಾಂಶ ಅದು ಪ್ರಾಯೋಗಿಕವಾಗಿರುತ್ತದೆ.

    – ಶ್ರೀ. ರಾಜಾಭಾವು ಜೋಶಿ (ಮಾಸಿಕ ಲೋಕಜಾಗರ, ದೀಪಾವಳಿ ವಿಶೇಷಾಂಕ ೨೦೦೮)

    ಚಾರಿತ್ರ್ಯವಂತ ತರುಣ ಪೀಳಿಗೆಯ ನಿರ್ಮಿತಿಗಾಗಿ ತರುಣರಿಗೆ ಸತ್ಯ, ಪ್ರಾಮಾಣಿಕತೆಯಿರುವ ಹಾಗೂ ಪಾರದರ್ಶಕ ವ್ಯವಹಾರವಿರುವ ಶಿಕ್ಷಣ ದೊರೆತಾಗಲೇ ಆ ಪೀಳಿಗೆಯು ಸುಧಾರಿಸುತ್ತದೆ ಹಾಗೂ ದೇಶವು ವೈಭವಶಾಲಿಯಾಗುತ್ತದೆ. ಇಂದು ದೇಶದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ, ಬೆಲೆ ಏರಿಕೆ, ಜನಸಂಖ್ಯಾಸ್ಫೋಟ, ನಿರುದ್ಯೋಗ ಹಾಗೂ ನೀರಿನ ಕೊರತೆಯಂತಹ ಸಮಸ್ಯೆಗಳು ಅರಾಜಕತೆಯನ್ನು ನಿರ್ಮಿಸಬಲ್ಲವು. ಈ ಸಮಸ್ಯೆಗಳಿಗೆ ಚಾರಿತ್ರ್ಯ ನಿರ್ಮಿಸುವ ಶಿಕ್ಷಣವೇ ಉತ್ತರವಾಗಿದೆ.

    – ಶ್ರೀ. ಮನೋಹರ ಜೋಶಿ (ಲೋಕಜಾಗರ, ಕ್ರಿಶ ೨೦೧೧)

    ಧರ್ಮಶಿಕ್ಷಣ

    ನೈತಿಕ ಮೌಲ್ಯದ ಸಂವರ್ಧನೆಯಾಗಲು ಮೇಲು ಮೇಲಿನ ಉಪಾಯಯೋಜನೆಗಳು ಸಾಲದು. ಇದಕ್ಕಾಗಿ ಎಲ್ಲರಿಗೂ ಧರ್ಮಶಿಕ್ಷಣವನ್ನು ನೀಡುವುದು ಅವಶ್ಯಕವಾಗಿದೆ. ಧರ್ಮಪಾಲನೆಯಿಂದ ಸಮಾಜದ ಸತ್ತ್ವಗುಣವು ವೃದ್ಧಿಸುತ್ತದೆ. ಇದರಿಂದ ನೈತಿಕ ಮೌಲ್ಯಗಳನ್ನು ಜೋಪಾನ ಮಾಡಲು ಆತ್ಮಬಲ ದೊರೆಯುತ್ತದೆ. ಈ ಆತ್ಮಬಲವನ್ನು ಇಂದಿನ ಶಿಕ್ಷಣ ಪದ್ಧತಿಯ ನೀಡಲಾರದು. ಸಮಾಜದ ಸತ್ತ್ವಗುಣ ವೃದ್ಧಿಯಾಗುವುದರಿಂದಲೇ ಎಲ್ಲ ಕ್ಷೇತ್ರಗಳಲ್ಲಿ ಅಧಃಪತನವನ್ನು ನಿಲ್ಲಿಸಲು ಸಾಧ್ಯವಾಗುತ್ತದೆ.
    ಮಹಾಭಾರತ ‘ಧರ್ಮಯುದ್ಧ’ವೆಂದು ಏಕೆ ಹೇಳುತ್ತಾರೆ ?

    ಅನೇಕ ಕೌರವರು ಹಾಗೂ ಶೂರ ಯೋಧರು ಯುದ್ಧದಲ್ಲಿ ಪಾಂಡವರ ಕೈಯಲ್ಲಿ ಮಡಿಯುವುದು; ಇದರಿಂದ ಸಂತಪ್ತ ದುರ್ಯೋಧನನು ಭೀಷ್ಮಾಚಾರ್ಯರಿಗೆ ಈ ಬಗ್ಗೆ ಪ್ರಶ್ನಿಸುವುದು : ಮಹಾಭಾರತದ ಮೊದಲ ಮೂರು ದಿನಗಳಲ್ಲಿ ದುರ್ಯೋಧನನ ಸಾಕಷ್ಟು ಕೌರವಬಂಧುಗಳು ಹಾಗೂ ಕೌರವರ ಪಕ್ಷದಲ್ಲಿ ಹೋರಾಡಿದ ಇತರ ಶೂರ ಯೋಧರು ಪಾಂಡವರಿಂದ ಹತರಾದರು. ಪಂಚಪಾಂಡವರು ಹಾಗೂ ಅವರ ಪಕ್ಷದ ಪ್ರಮುಖ ಯೋಧರ ಪೈಕಿ ಯಾರೂ ಹತರಾಗಿರಲಿಲ್ಲ; ಆದುದರಿಂದ ಸಂತಪ್ತಗೊಂಡ ದುರ್ಯೋಧನನು ಕೌರವರ ಸೇನಾಪತಿಯಾದ ಭೀಷ್ಮಾಚಾರ್ಯರನ್ನು ಈ ಬಗ್ಗೆ ಪ್ರಶ್ನಿಸಿದಾಗ ಭೀಷ್ಮಾಚಾರ್ಯರು 'ನಾಳೆ ನಾನು ೫ ಬಾಣಗಳಿಂದ ಐದೂ ಪಾಂಡವರನ್ನು ಕೊಲ್ಲುವೆನು' ಎಂಬ ಪ್ರತಿಜ್ಞೆಯನ್ನು ಮಾಡಿದರು. ಆಗ ದುರ್ಯೋಧನನು 'ಯಾವ ಐದು ಬಾಣಗಳಿಂದ ಪಾಂಡವರನ್ನು ಕೊಲ್ಲುವವರಿದ್ದರೋ, ಆ ಬಾಣಗಳನ್ನು ಮಂತ್ರಿಸಿ ನನ್ನ ವಶಕ್ಕೆ ನೀಡಿ, ನಾನು ಆ ಬಾಣಗಳನ್ನು ನಾಳೆ ಬೆಳಿಗ್ಗೆ ಯುದ್ಧಕ್ಕೆ ಹೊರಡುವ ಮುನ್ನ ನಿಮಗೆ ತಂದು ಕೊಡುವೆನು' ಎಂದು ಹೇಳಿದನು. ಭೀಷ್ಮಾಚಾರ್ಯರು ೫ ಬಾಣಗಳನ್ನು ಮಂತ್ರಿಸಿ ದುರ್ಯೋಧನನಿಗೆ ಕೊಟ್ಟರು. ದುರ್ಯೋಧನನು ಆ ಬಾಣಗಳನ್ನು ಪಡೆದು ತನ್ನ ಶಿಬಿರಕ್ಕೆ ಮರಳಿ ಬಂದನು.

    ಶ್ರೀಕೃಷ್ಣನು ಅರ್ಜುನನಿಗೆ ದುರ್ಯೋಧನನ ಬಳಿ ಹೋಗಿ ಐದು ಬಾಣಗಳನ್ನು ಕೇಳಲು ಹೇಳುವುದು : ಶ್ರೀಕೃಷ್ಣನಿಗೆ ಈ ವಿಷಯ ತಿಳಿಯಿತು. ಅವನಿಗೆ ಅದರ ಉಪಾಯವೂ ಹೊಳೆಯಿತು. ಪಾಂಡವರ ವನವಾಸದ ಸಮಯದಲ್ಲಿ ಒಮ್ಮೆ ದುರ್ಯೋಧನನು ವನವಿಹಾರಕ್ಕೆ ತೆರಳಿದ್ದಾಗ ಅರ್ಜುನನು ಅವನ ಪ್ರಾಣವನ್ನು ರಕ್ಷಿಸಿದ್ದನು; ಆದುದರಿಂದ ದುರ್ಯೋಧನನು ಅರ್ಜುನನಿಗೆ ಯಾವುದೇ ವರ ಬೇಡಲು ಹೇಳಿದಾಗ ಅರ್ಜುನನು ಅವನಿಗೆ 'ಈಗ ಬೇಡ, ಅವಶ್ಯಕತೆಯಿದ್ದಾಗ ನಾನು ನಿನ್ನ ಬಳಿ ವರ ಕೇಳುವೆನು, ಆಗ ಬೇಡಿದ್ದನ್ನು ಕೊಡಬೇಕು' ಎಂದು ಹೇಳಿದ್ದನು.

    ಶ್ರೀಕೃಷ್ಣನು ಅರ್ಜುನನ ಹತ್ತಿರ ಹೋಗಿ 'ತಕ್ಷಣ ಹೋಗಿ ದುರ್ಯೋಧನನಿಂದ ಆ ಐದು ಬಾಣಗಳನ್ನು ಬೇಡಲು' ಹೇಳಿದನು. ಅರ್ಜುನನು ದುರ್ಯೋಧನನ ಬಳಿ ಹೋದನು ಹಾಗೂ ಭೀಷ್ಮಾಚಾರ್ಯರು ಮಂತ್ರಿಸಿ ಕೊಟ್ಟ ಐದು ಬಾಣಗಳನ್ನು ಬೇಡಿದನು. ಅರ್ಜುನನಿಗೆ ವರ ನೀಡಿದ್ದರಿಂದ ದುರ್ಯೋಧನನಿಗೆ ಅನಿವಾರ್ಯವಾಗಿ ಆ ಬಾಣಗಳನ್ನು ಕೊಡಬೇಕಾಯಿತು.

    ಶ್ರೀಕೃಷ್ಣನು ಪಾಂಡವರ ಪ್ರಾಣ ಉಳಿಸಿದನು. ದುರ್ಯೋಧನನೂ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆ ಐದು ಬಾಣಗಳನ್ನು ಅರ್ಜುನನಿಗೆ ಕೊಟ್ಟನು; ಆದುದರಿಂದಲೇ ಮಹಾಭಾರತವನ್ನು 'ಧರ್ಮಯುದ್ಧ'ವೆಂದು ಹೇಳುತ್ತಾರೆ.
    ಬೇಸಿಗೆ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ!

    ಏಪ್ರಿಲ್ ಮತ್ತು ಮೇ ಇವೆರಡು ತಿಂಗಳೆಂದರೆ ಗ್ರೀಷ್ಮ ಋತು. ಈ ಋತುವಿನಲ್ಲಿ ವಾತಾವರಣ ಶುಷ್ಕ ಮತ್ತು ಉಷ್ಣವಿರುತ್ತದೆ. ಶರೀರದ ಶಕ್ತಿ ಹಾಗೂ ಜೀರ್ಣಶಕ್ತಿ ಕೂಡ ಕಡಿಮೆಯಿರುತ್ತದೆ. ಆ ಸಮಯದಲ್ಲಿ ಮೂಗಿನಿಂದ ರಕ್ತ ಸ್ರಾವವಾಗುವುದು, ಉರಿಮೂತ್ರ, ಬೆವರುಸಾಲೆ ಬರುವುದು, ಸೆಕೆಬೊಕ್ಕೆ, ಕಣ್ಣು ಬರುವುದು ಮುಂತಾದ ಕಾಯಿಲೆಗಳು ಆಗುತ್ತವೆ. ಬೇಸಿಗೆಯಲ್ಲಿ ಜಲಾಶಯ ಬತ್ತಿ ನೀರು ಕೊಳೆಯಾಗುತ್ತದೆ. ಅದರಿಂದ ಡೈಯರಿಯಾ, ಬೇಧಿ, ವಾಂತಿಯಾಗುವುದು (ಗ್ಯಾಸ್ಟ್ರೋ), ವಿಷಮಜ್ವರ (ಟೈಫೈಡ್), ಕಾಮಾಲೆ ಮುಂತಾದ ಕಾಯಿಲೆಗಳು ಬರುತ್ತವೆ. ಬೇಸಿಗೆಯಲ್ಲಿನ ಈ ಕಾಯಿಲೆಗಳಿಂದ ನಮ್ಮ ರಕ್ಷಣೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಿನಂತೆ ಕಾಳಜಿ ವಹಿಸಬೇಕು.

    ೧. ಬೆಳಗ್ಗೆ ಹಲ್ಲು ತಿಕ್ಕಿದ ನಂತರ ಆಕಳಿನ ತುಪ್ಪದ ಅಥವಾ ತೆಂಗಿನ ಎಣ್ಣೆಯ ೨-೨ ಹನಿ ಮೂಗಿಗೆ ಹಾಕಬೇಕು. ಇದಕ್ಕೆ ನಸ್ಯ ಎಂದು ಹೇಳುತ್ತಾರೆ. ಅದರಿಂದ ತಲೆ ಮತ್ತು ಕಣ್ಣುಗಳ ಉಷ್ಣತೆ ಕಡಿಮೆಯಾಗುತ್ತದೆ.

    ೨. ರುಚಿಕರ, ಶುಷ್ಕ, ಹಳಸಿದ, ಉಪ್ಪು, ಅತೀಖಾರ, ಮಸಾಲೆಯುಕ್ತ ಮತ್ತು ಕರಿದ ಪದಾರ್ಥ ಹಾಗೂ ಆಮ್‌ಚೂರ್, ಉಪ್ಪಿನ ಕಾಯಿ, ಹುಣಸೇಹಣ್ಣು ಮುಂತಾದ ಹುಳಿ, ಕಹಿ ಮತ್ತು ಒಗರು ರಸದ ಪದಾರ್ಥ ತಿನ್ನುವುದನ್ನು ತಡೆಯಬೇಕು.

    ೩. ಶೀತಪೇಯಗಳು (ಕೋಲ್ಡ್‌ಡ್ರಿಂಕ್ಸ್), ಐಸ್‌ಕ್ರೀಮ್, ಹಾಳಾಗಬಾರದೆಂದು ರಸಾಯನ ಹಾಕಿಉಪಯೋಗಿಸುವಸೀಲ್ಮಾಡಿದ ಹಣ್ಣುಗಳ ರಸ ಮುಂತಾದವುಗಳನ್ನು ಸೇವಿಸಬಾರದು. ಈ ಪದಾರ್ಥಗಳು ಜೀರ್ಣಶಕ್ತಿ ಯನ್ನು ಹಾಳು ಮಾಡುತ್ತವೆ. ಇವುಗಳ ಅತೀಸೇವನೆಯಿಂದ ರಕ್ತಧಾತು ದೂಷಿತ ವಾಗಿ ಚರ್ಮರೋಗಗಳು ಬರುತ್ತವೆ.


    ೪. ಮಾವಿನಕಾಯಿ ಬೇಯಿಸಿ ಮಾಡಿದ ಸಿಹಿ ರಸ, ನೀರಿನಲ್ಲಿ ನಿಂಬೆ ರಸ ಮತ್ತು ಸಕ್ಕರೆ ಹಾಕಿ ತಯಾರಿಸಲಾದ ಶರಬತ್, ಜೀರಿಗೆಯ ಶರಬತ್, ಎಳನೀರು, ಹಣ್ಣುಗಳ ತಾಜಾ ರಸ, ಹಾಲು ಹಾಕಿ ಮಾಡಲಾದ ಅಕ್ಕಿಯ ಖೀರು, ಗುಲಕಂದ ಇತ್ಯಾದಿ ಶೀತ ಮತ್ತು ದ್ರವ ಪದಾರ್ಥಗಳಲ್ಲಿ ಯಾವುದು ಸಾಧ್ಯವಿದೆಯೋ ಮತ್ತು ಸಿಗುತ್ತದೆಯೋ ಅವುಗಳು ಆಹಾರದಲ್ಲಿರಬೇಕು. ಇದರಿಂದ ಸೂರ್ಯನ ಪ್ರಖರ ಉಷ್ಣತೆಯಿಂದ ಶರೀರದ ರಕ್ಷಣೆಯಾಗಲು ಸಹಾಯವಾಗುತ್ತದೆ.

    ೫. ಈ ದಿನಗಳಲ್ಲಿ ಬಾಯಾರಿಕೆ ತುಂಬ ಆಗುತ್ತಿರುವುದರಿಂದ ಬಾಯಾರಿಕೆ ತಣಿಯುವಷ್ಟು ನೀರು ಕುಡಿಯಬೇಕು.

    ೬. ಈ ಋತುವಿನಲ್ಲಿ ಮೊಸರನ್ನು ತಿನ್ನಬಾರದು. ಅದರ ಬದಲು ಸಕ್ಕರೆ ಮತ್ತು ಜೀರಿಗೆ ಹಾಕಿದ ಸಿಹಿ ಮಜ್ಜಿಗೆ ತೆಗೆದುಕೊಳ್ಳಬಹುದು.

    ೭. ಈ ದಿನಗಳಲ್ಲಿ ಸಡಿಲವಾದ ನೂಲಿನ ಬಟ್ಟೆಗಳನ್ನು ಉಪಯೋಗಿಸಬೇಕು ಮತ್ತು ಕೂದಲುಗಳ ಸ್ವಚ್ಛತೆಯನ್ನು ಕಾಪಾಡ ಬೇಕು. ಪ್ಲಾಸ್ಟಿಕ್ ಚಪ್ಪಲಿಗಳನ್ನು ಉಪಯೋಗಿಸಬಾರದು.

    ೮. ಸುಡು ಬಿಸಿಲಿನಲ್ಲಿ ಹೋಗುವುದಿದ್ದರೆ, ನೀರು ಕುಡಿದು ಹೋಗಬೇಕು. ಬಿಸಿಲಿನಿಂದ ತಲೆ ಮತ್ತು ಕಣ್ಣುಗಳ ರಕ್ಷಣೆ ಗಾಗಿ ಟೊಪ್ಪಿ ಮತ್ತು ‘ಗಾಗಲ್’ ಉಪಯೋಗಿಸಬೇಕು.

    ೯. ಉಷ್ಣ ವಾತಾವರಣದಿಂದ ಶೀತ ವಾತಾವರಣಕ್ಕೆ ಬಂದ ನಂತರ ತಕ್ಷಣ ನೀರನ್ನು ಕುಡಿಯಬಾರದು. ೧೦-೧೫ ನಿಮಿಷದ ನಂತರವೇ ನೀರು ಕುಡಿಯಬೇಕು.

    ೧೦. ಈ ದಿನಗಳಲ್ಲಿ ಶೀತಕಪಾಟು ಅಥವಾ ಕೂಲರ್ ಇವುಗಳಲ್ಲಿನ ತಣ್ಣನೆ ನೀರು ಕುಡಿದರೆ ಗಂಟಲು, ಹಲ್ಲು ಮತ್ತು ಕರುಳಿನ ಮೇಲೆ ದುಷ್ಪರಿಣಾಮವಾಗುತ್ತದೆ; ಆದುದರಿಂದ ಸಾದಾ ಅಥವಾ ಮಡಿಕೆ ಯಲ್ಲಿನ ನೀರನ್ನು ಕುಡಿಯಬೇಕು.

    ೧೧. ಲಾವಂಚದ ಬೇರಿನ ಎರಡು ಕಟ್ಟನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ಒಂದು ಕಟ್ಟು ಕುಡಿಯುವ ನೀರಿಗೆ ಹಾಕ ಬೇಕು ಮತ್ತು ಇನ್ನೊಂದನ್ನು ಬಿಸಿಲಿಗೆ ಒಣಗಿಸಬೇಕು. ಮಾರನೇ ದಿನ ಬಿಸಿಲಿಗೆ ಒಣಗಿಸಿದ ಕಟ್ಟನ್ನು ಕುಡಿಯುವ ನೀರಿಗೆ ಮತ್ತು ನೀರಿನಲ್ಲಿನ ಕಟ್ಟನ್ನು ಬಿಸಿಲಿಗೆ ಒಣಗಿಸಬೇಕು. ಅದರಂತೆ ಪ್ರತಿದಿನ ಮಾಡಬೇಕು. ಈ ಲಾವಂಚದ ನೀರು ಉಷ್ಣತೆಯ ವಿಕಾರ ದೂರ ಮಾಡುತ್ತದೆ.

    ೧೨. ಹೆಚ್ಚು ವ್ಯಾಯಾಮ, ಹೆಚ್ಚು ಪರಿಶ್ರಮ, ಹೆಚ್ಚು ಉಪವಾಸ, ಬಿಸಿಲಿನಲ್ಲಿ ತಿರುಗುವುದು ಮತ್ತು ಹಸಿವು-ನೀರಡಿಕೆ ತಡೆಹಿಡಿಯುವುದು ಇತ್ಯಾದಿ ವಿಷಯಗಳನ್ನು ತಡೆಯಬೇಕು.

    ೧೩. ಕಾಲಿಗೆ ಬಿರುಕು ಬೀಳುವುದು ಮತ್ತು ಉಷ್ಣತೆಯ ತೊಂದರೆಯಾಗುತ್ತಿದ್ದರೆ ಕೈ-ಕಾಲಿಗೆ ಮೆಹಂದಿ ಹಚ್ಚಬೇಕು.

    ೧೪. ತಡರಾತ್ರಿ ವರೆಗೆ ಜಾಗರಣೆ ಮಾಡುವುದು ಮತ್ತು ಬೆಳಗ್ಗೆ ಸೂರ್ಯೋದಯದ ನಂತರವೂ ಮಲಗಿರುವುದನ್ನು ತಡೆಯಬೇಕು.